‘ಗದಗಿನ ಪ್ರಸಿದ್ಧ ಜುಮ್ಮಾ ಮಸೀದಿ ಇರುವ ಸ್ಥಳದಲ್ಲಿ ಮೊದಲು ವೆಂಕಟೇಶ್ವರ ದೇವಸ್ಥಾನವಿತ್ತು. ಸರ್ಕಾರ ಕೂಡಲೇ ಉತ್ಖನನ ನಡೆಸಬೇಕು. ಅಲ್ಲಿ ಮಸೀದಿ ತೆರವುಗೊಳಿಸಿ ವೆಂಕಟೇಶ್ವರ ದೇವಸ್ಥಾನ ನಿರ್ಮಿಸಬೇಕು…..’
ಹೀಗೆ ಸೆಪ್ಟೆಂಬರ್ 29ರಂದು ಒಬ್ಬ ಜೀವವಿರೋಧಿ ಯುವಕ ನೂರಾರು ಜನರ ಎದುರು ಗದಗ ನಗರದ ಜನನಿಬಿಡ ಸ್ಥಳವಾದ ಟಾಂಗಾಕೂಟ್ನಲ್ಲಿ ಭಾಷಣ ಮಾಡಿಬಿಟ್ಟ.
ಸೆಪ್ಟೆಂಬರ್ 30ರಂದು ಜುಮ್ಮಾ ಮಸೀದಿ ಕಮಿಟಿ ಮತ್ತು ಅಂಜುಮನ್ ಕಮಿಟಿಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಜುಮ್ಮಾ ಮಸೀದಿ ಕಮಿಟಿಯವರು ‘ರಾಜು ಖಾನಪ್ಪನವರ್ ಹಿಂದೂ-ಮುಸ್ಲಿಂ ಸಾಮರಸ್ಯ ಹದಗೆಡಿಸಲು ಈ ಹೋರಾಟ ಹಮ್ಮಿಕೊಂಡಿದ್ದು, ಈ ಮೊದಲು ಆತ ಇಂಥಹದ್ದೇ ಪ್ರಯತ್ನ ಮಾಡಿದ್ದಾನೆ.ಆತ ಮತ್ತು ಆತನ ಶ್ರೀರಾಮಸೇನೆಯ ಸಹಚರರನ್ನು ಕೂಡಲೇ ಗಡಿಪಾರು ಮಾಡಿ’ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
![](https://pratidhvani.com/wp-content/uploads/2021/10/MUSLIMS-MEETING-SP-1-1024x576.jpg)
ಯಾರು ಈ ಖಾನಪ್ಪನವರ್?
ಈ ಯುವಕ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಉತ್ತರ ಕರ್ನಾಟಕದಲ್ಲಿ ಹುಟ್ಟು ಹಾಕಿದ ಮಿಲಿಟೆಂಟ್ ಮನೋಭಾವದ ಹಿಂದೂತ್ವವಾದಿಗಳಲ್ಲಿ ಒಬ್ಬ. ಸದ್ಯ ಪ್ರಮೋದ್ ಮುತಾಲಿಕರಿಗೆ ರಾಜು ಖಾನಪ್ಪನವರ್ ಬಲು ಆಪ್ತ. ಹೀಗಾಗಿ ಈತನನ್ನು ಶ್ರೀರಾಮ ಸೇನೆಯ ವಿಭಾಗೀಯ ಸಂಚಾಲಕ ಎಂದು ನೇಮಿಸಲಾಗಿದೆ.
![](https://pratidhvani.com/wp-content/uploads/2021/10/khanappanavr-SRIRAM-SENE-3-768x1024.jpg)
ಸುದ್ದಿಯಲ್ಲಿರಲು ಆಗಾಗ ಕೋಮುದ್ಚೇಷದ ಹೇಳಿಕೆ ನೀಡುವುದು ಈತನ ಹವ್ಯಾಸ. ಅದು ಕೇವಲ ಹವ್ಯಾಸವಷ್ಟೇ ಅಲ್ಲ, ಅದರ ಹಿಂದಿದೆ ಗಲಭೆ ಎಬ್ಬಿಸುವ ಅಜೆಂಡಾ ಕೂಡ ಇದೆ.
ಛತ್ರಪತಿ ಶಿವಾಜಿ ಜಯಂತಿಯಂದು ಮರಾಠಿಗರು ಮತ್ತು ಪಟ್ಟೇಗಾರ ಯುವಕರಿಂದ ಮೋಟಾರ್ ಬೈಕ್ ರ್ಯಾಲಿ ನಡೆಸುವ ಈತ ಅಂತಿಮದಲ್ಲಿ ಮುಸ್ಲಿಮರ ವಿರುದ್ಧ ಹರಿ ಹಾಯುವುದನ್ನೇ ರೂಢಿ ಮಾಡಿಕೊಂಡಿದ್ದಾನೆ. ಗಣೇಶ ಉತ್ಸವವೂ ಈತನ ಕೋಮು ಅಜೆಂಡಾದ ಭಾಗವೇ ಆಗಿದೆ.
![](https://pratidhvani.com/wp-content/uploads/2021/10/PROTEST-BY-MUSLIMS1-576x1024.jpg)
ಮೊದಮೊದಲು ಈತನನ್ನು ಉಪೇಕ್ಷೆ ಮಾಡುತ್ತ ಬರಲಾಗಿತು. ಆದರೆ ಸದಾ ಲೈಮ್ಲೈಟಿನಲ್ಲಿ ಇರಲು ಈತ ಅಲ್ಪಸಂಖ್ಯಾತರ ವಿರುದ್ಧ ತಥಾಗತಿತ ಸುಳ್ಳುಗಳನ್ನು ಹೇಳುತ್ತ ಯುವಕರನ್ನು ದಾರಿ ತಪ್ಪಿಸುತ್ತಿದ್ದಾನೆ. ಈಗ ಅಯೋಧ್ಯೆ ಪ್ರಕರಣ ಈ ಪುಂಡನ ತಲೆ ಹೊಕ್ಕಿದೆ. ಅದಕ್ಕೇ ಆತ ಜುಮ್ಮಾ ಮಸೀದಿ ಜಾಗದಲ್ಲಿ ಮೊದಲು ವೆಂಕಟೇಶ್ವರ ದೇವಸ್ಥಾನವಿತ್ತು, ಆ ಜಾಗವನ್ನು ಹಿಂದೂಗಳಿಗೆ ಬಿಟ್ಟು ಕೊಡಿ ಎಂದೆಲ್ಲ ಹೋರಾಟ ಶುರು ಮಾಡಿದ್ದಾನೆ. ಈತನ ವಾದಕ್ಕೆ ಯಾವುದೇ ಪುರಾವೆಗಳೂ ಇಲ್ಲ.
ಈ ಕುರಿತು ‘ಪ್ರತಿಧ್ವನಿ’ ರಾಜೂ ಖಾನಪ್ಪಮ ನಂಬರ್ಗೆ ಫೋನ್ ಮಾಡಿ ಮಾತನಾಡಿಸಿತು. ‘ಹೌದು ಜುಮ್ಮಾ ಮಸೀದಿ ಜಾಗದಲ್ಲಿ ಮೊದಲು ವೆಂಕಟೇಶ್ವರ ದೇವಸ್ಥಾನವಿತ್ತು. ಮಸೀದಿ ಆವರಣದಲ್ಲಿರುವ ಹಳೆಯ ಕಲ್ಲುಗಳು ಇದಕ್ಕೆ ಸಾಕ್ಷಿ. ಸರ್ಕಾರ ಉತ್ಖನನ ನಡೆಸಬೇಕು. ಆಗ ನಿಜ ಗೊತ್ತಾಗುತ್ತದೆ. ಜುಮ್ಮಾ ಮಸೀದಿ ತೆರವು ಮಾಡಿ ವೆಂಕಟೇಶ್ವರ ದೇವಸ್ಥಾನ ಕಟ್ಟಿಸುವುದು ನಮ್ಮ ಗುರಿ’ ಎಂದು ಭಾಷಣ ಮಾಡಿದ.
‘ಯಾರಾದರೂ ಇತಿಹಾಸ ತಜ್ಞರು ಅಥವಾ ಸಂಶೋಧಕರು ಈ ಬಗ್ಗೆ ಅಧ್ಯಯನ ಮಾಡಿ ಈ ವಿಷಯ ತಿಳಿಸಿದ್ದಾರೆಯೇ? ಎಂದು ‘ಪ್ರತಿಧ್ವನಿ’ ಖಾನಪ್ಪನವರ್ ಅವರನ್ನು ಪ್ರಶ್ನಿಸಿತು. ಅದಕ್ಕೆ ಆತನ ಬಳಿ ಸಮಂಜಸ ಉತ್ತರವೇ ಇರಲಿಲ್ಲ. ‘ಯಾರು ಅಧ್ಯಯನ ಮಾಡಿದ್ದಾರೋ ಗೊತ್ತಿಲ್ಲ. ನಮಗಂತೂ ಅಲ್ಲಿ ವೆಂಕಟೇಶ್ವರ ದೇವಸ್ಥಾನವಿತ್ತು ಎಂಬುದು ದೃಢವಾಗಿದೆ’ ಎಂದ ಆತ ವಿಷಯವನ್ನು ಡೈವರ್ಟ್ ಮಾಡುತ್ತ, ‘ ವೀರ ನಾರಾಯಣ ದೇವಸ್ಥಾನದ ಟ್ರಸ್ಟ್ ಬಳಿ ಇದಕ್ಕೆ ದಾಖಲೆಗಳಿವೆ. ಆದರೆ ಅವರು ರಿಲೀಸ್ ಮಾಡಲು ರೆಡಿ ಇಲ್ಲ. ಟ್ರಸ್ಟ್ ಅಧ್ಯಕ್ಷರಾದ ಡಾ. ಕುಶಲ್ ಗೋಡಕಿಂಡಿಯವರ ಜೊತೆ ಮಾತನಾಡಿ’ ಎಂದ.
‘’ಇಂತಹ ಸೀರಿಯಸ್ ಆರೋಪ ಮಾಡುವ ನೀವೇ ಡಾ. ಗೋಡಕಿಂಡಿ ಮತ್ತು ಇತರ ಸದಸ್ಯರ ಜೊತೆ ಮಾತನಾಡಬಹುದಿತ್ತು ಅಲ್ಲವೇ?’ ಎಂಬ ಪ್ರಶ್ನೆಗೆ, ‘ಡಾ. ಗೋಡಕಿಂಡಿ ಸೇರಿದಂತೆ ವೀರನಾರಾಯಣ ಟ್ರಸ್ಟಿನ ಸದಸ್ಯರ ಸಂಪರ್ಕ ನನಗಿಲ್ಲ’’ ಎಂದು ಉಡಾಫೆಯ ಉತ್ತರ ಕೊಟ್ಟ.
‘ಪ್ರತಿ ವರ್ಷ ವೀರನಾರಾಯಣ ರಥೋತ್ಸವದ ವೇಳೆ ಜುಮ್ಮಾ ಮಸೀದಿ ಬಳಿ ರಥಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ವೆಂಕಟೇಶ ದೇವಸ್ಥಾನ ಇತ್ತು ಎಂಬುದಕ್ಕೆ ಇದೂ ಸಾಕ್ಷಿ’ ಎಂದು ತಲೆಬುಡವಿಲ್ಲದ ಉತ್ತರ ನೀಡಿದ.
ಸೌಹಾರ್ದತೆಯ ನೆಲ
ಗದಗ ಜಿಲ್ಲೆ ಸದಾ ಸೌಹಾರ್ದತೆಯ ನೆಲವಾಗಿಯೇ ಉಳಿದಿದೆ. ಹಿಂದೆ ಭಜರಂಗ ದಳ ಏನೇ ಕಿತಾಪತಿ ಮಾಡಿದರೂ ಈ ಸೌಹಾರ್ದತೆಗೆ ಧಕ್ಕೆ ತರಲು ಆಗಲಿಲ್ಲ. ಈಗ ಭಜರಂಗದಳದ ಕೆಲಸವನ್ನು ಶ್ರೀರಾಮ ಸೇನೆ ಮಾಡುತ್ತಿದೆ.
ಕುಮಾರವ್ಯಾಸ ತಮ್ಮ ಕುಮಾರವ್ಯಾಸ ಭಾರತ ಅಥವಾ ಗದುಗಿನ ಭಾರತವನ್ನು ಇಲ್ಲಿನ ವೀರ ನಾರಾಯಣ ದೇವಸ್ಥಾನದಲ್ಲಿ ಕುಳಿತೇ ಬರೆದರು. ವೀರನಾರಾಯಣ ಗುಡಿಯಂತೆ ತ್ರಿಕೂಟೇಶ್ವರ ದೇವಸ್ಥಾನವೂ ತುಂಬ ಪ್ರಾಚೀನವಾದುದು ಮತ್ತು ಐತಿಹಾಸಿಕವಾದುದು. ಸುಮಾರು 250 ವರ್ಷಗಳ ಇತಿಹಾಸ ಇರುವ ಜುಮ್ಮಾ ಮಸೀದಿಗೂ ಪ್ರಾಮುಖ್ಯವಿದೆ. ಇಡೀ ದೇಶದಲ್ಲೇ ಅಪರೂಪ ಎನ್ನಬಹುದಾದ ಸಂಗತಿ ಒಂದಿದೆ. ಶತಮಾನಗಳಿಂದ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನಗಳು ಮತ್ತು ಜುಮ್ಮಾ ಮಸೀದಿಯ ಆಡಳಿತವನ್ನು ನಿಭಾಯಿಸುತ್ತಿರುವುದು ಒಂದೇ ಟ್ರಸ್ಟ್! ಈಗಲೂ ಆ ಪರಂಪರೆ ಮುಂದುವರೆದಿದೆ. ಈ ಟ್ರಸ್ಟಿನಲ್ಲಿ ಎಲ್ಲ ಧರ್ಮ-ಜಾತಿಗಳ ಜನರು ಇದ್ದಾರೆ.
ಇಂತಹ ಸೌಹಾರ್ದವನ್ನು ಶ್ರೀರಾಮ ಸೇನೆಯ ಭಂಟರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಅವರೀಗ ಅಯೋಧ್ಯೆ ಮಾದರಿಯಲ್ಲಿ ವಿವಾದ ಹುಟ್ಟು ಹಾಕಲು ಹೊರಟಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಾಮಾಜಿಕ ಕಾರ್ಯಕರ್ತ ಐ. ಎಂ ಮುಲ್ಲಾ, ‘ಅದು ಅವರ ಅಜೆಂಡಾದ ಭಾಗ. ಸುಳ್ಳುಗಳೇ ಅವರ ಶಕ್ತಿ. ಗದಗ ಗೆಜೆಟಿಯರ್ ಮತ್ತು ಕರ್ನಾಟಕ ಗೆಜೆಟಿಯರ್ಗಳಲ್ಲಿ ಜುಮ್ಮಾ ಮಸೀದಿಯ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಪುಕ್ಕಟೆ ಪ್ರಚಾರಕ್ಕಾಗಿ ಅವರು ಸುಳ್ಳು ಹೇಳುತ್ತಾರೆ. ಆದರೆ ಗದಗಿನ ಜನ ಅದನ್ನು ನಂಬುವುದಿಲ್ಲ’ ಎಂದರು.
ರಾಜೂ ಖಾನಪ್ಪನವರ್ ತನ್ನ ಹುಡುಗರ ಗುಂಪು ಕಟ್ಟಿಕೊಂಡು ಹಣದ ವ್ಯವಹಾರವನ್ನು ನಡೆಸುತ್ತಾನೆ. ಕೆಲ ವರ್ಷಗಳ ಹಿಂದೆ ಈತನ ಗುಂಪಿಗೂ ಮತ್ತು ಅಂಥದ್ದೇ ಇನ್ನೊಂದು ಗುಂಪಿಗೂ ಭಾರಿ ಹೊಡೆದಾಟವಾಗಿ, ಖಾನಪ್ಪನವರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿ ಈತ ಉಳಿದಿದ್ದ.
ಪರಶುರಾಮ್ ವಾಗ್ಮೋರೆ ಗೊತ್ತಲ್ಲ?
ಪೊಲೀಸರು ರಾಜೂ ಖಾನಪ್ಪನವರ್ ತರಹದ ಯುವಕರ ಚಲನವಲನದ ಬಗ್ಗೆ ನಿಗಾ ವಹಿಸಬೇಕು. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ರಾತ್ರೋರಾತ್ರಿ ತಾನೇ ಮಸೀದಿ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿ ಮರುದಿನ ಪ್ರತಿಭಟನೆ ನಡೆಸಿದ್ದ ಶ್ರೀರಾಮಸೇನೆಯ ಪರಶುರಾಮ ವಾಗ್ಮೋರೆ ನಂತರದಲ್ಲಿ ಪೊಲೀಸರ ಅತಿಥಿಯಾಗಿದ್ದ. ಮುಂದ ಈತನೇ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದುಎಸ್ಐಟಿ ಚಾರ್ಜ್ಶೀಟ್ ಸ್ಪಷ್ಟವಾಗಿ ಹೇಳಿದೆ. ಆರೋಪಿ ನಂಬರ್ 2 ಆಗಿರುವ ವಾಗ್ಮೊರೆಯೇ ಗೌರಿಯವರ ಮೇಲೆ ಗುಂಡು ಹಾರಿಸಿದ್ದು ಎಂದು ಎಸ್ಐಟಿ ಹೇಳಿದೆ.
![](https://pratidhvani.com/wp-content/uploads/2021/10/related-021806Waghmare-1.jpg)
ಹೀಗಾಗಿ ಖಾನಪ್ಪನವರ್ ಅಥವಾ ಅಂತಹ ಮನಸ್ಥಿತಿಯ ಯುವಕರ ಮೇಲೆ ನಿಗಾ ಇಡುವುದು ಸೂಕ್ತ. ಇಂತಹ ಶೂದ್ರ ಹುಂಬರನ್ನು ಬಳಸಿಕೊಳ್ಳಲು ಕೆಲವು ಶಕ್ತಿಗಳು ಕಾಯ್ದು ಕುಳಿತಿವೆ. ಕರಾವಳಿಯಲ್ಲಿ ಅದು ಯಶಸ್ವಿಯಾಗಿದೆ.
![](https://pratidhvani.com/wp-content/uploads/2021/08/pratidhvani_2021-02_b25805e8-d9f8-421e-a7cb-a15b7e6f7742_pratidhvani_2020_09_17f09c37_524c_4aa5_a9f7_60fb07975af5_Support_us_Banner_New_3-1.png)
ಸೂಫಿ ಸಂತರು, ಶರಣರ ಈ ನೆಲಕ್ಕೂ ಆ ರೋಗ ತಗುಲದಂತೆ ನೋಡಿಕೊಳ್ಳುವುದು ಸಮಾಜದ ಎಲ್ಲರ ಜವಾಬ್ದಾರಿ.