ಕರ್ನಾಟಕದಲ್ಲಿ ಬರ ತಾಂಡವಾಡ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇನ್ನು ಬರ ಪರಿಹಾರವಾಗಿ ಕೇಂದ್ರ ಸರ್ಕಾರ 18 ಸಾವಿರ ಕೋಟಿ ರೂಪಾಯಿ ಹಣ ನೀಡಿಲ್ಲ ಅನ್ನೋದನ್ನು ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಬಾರಿ ಹೇಳಿಕೊಂಡಿದೆ. ಆದರೆ ಅಮಿತ್ ಷಾ ಚುನಾವಣಾ ಪ್ರಚಾರದ ವೇಳೆ, ಬರ ಪರಿಹಾರ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಮೂರು ತಿಂಗಳು ತಡ ಮಾಡಿದ್ದರಿಂದ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಚುನಾವಣೆ ಘೋಷಣೆ ಆಗಿದ್ರಿಂದ ಹಣ ಬಿಡುಗಡೆ ತಡವಾಗಿದೆ ಎನ್ನುವ ಮಾತನ್ನು ರಾಮನಗರದಲ್ಲಿ ಹೇಳುತ್ತಿದ್ದಂತೆ ಇಡೀ ಸರ್ಕಾರವೇ ಅಮಿತ್ ಷಾ ವಿರುದ್ಧ ತಿರುಗಿ ಬಿದ್ದಿದೆ.
![](https://pratidhvani.com/wp-content/uploads/2024/04/Amit-Shah-3-1-1024x576.webp)
ಕೆಪಿಸಿಸಿ ಕಚೇರಿಯಲ್ಲಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ ಸುಳ್ಳುಗಳ ಸರದಾರ, ಎಲೆಕ್ರೋಲರ್ ಬಾಂಡ್ ಸರದಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ರಾಜ್ಯದಲ್ಲಿ ಹಸಿಹಸಿ ಸುಳ್ಳುಗಳನ್ನ ಹರಿಬಿಟ್ಟಿದ್ದೀರಿ. ಸೂರ್ಯನಿಗೆ ಟಾರ್ಚ್ ಹಿಡಿಯುವ ಕೆಲಸ ಮಾಡಿದ್ದೀರಿ ಎಂದಿದ್ದಾರೆ. ಬರ ಪರಿಹಾರದ ಮನವಿ ಸಲ್ಲಿಸಲು ಮೂರು ತಿಂಗಳು ವಿಳಂಬ ಮಾಡಿದ್ದಾರೆ ಅಂತ ತಮ್ಮ ತಪ್ಪು ಮುಚ್ಚಿಕೊಳ್ಳಲು ಹೀಗೆ ಹೇಳಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲೇ ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಬರಗಾಲ ಘೋಷಣೆ ಮಾಡ್ಬೇಕು ಅಂದ್ರೆ ಅಕ್ಟೋಬರ್ 31ರವರಗೆ ಕೇಂದ್ರ ಸೂಚನೆ ಕೊಡುತ್ತೆ. ಸೆಪ್ಟೆಂಬರ್ 13ರಂದೇ ನಾವು ಬರಗಾಲ ಘೋಷಣೆ ಮಾಡಿದ್ದೇವೆ ಎಂದಿದ್ದಾರೆ.
ಮುಂಗಾರು ಹಂಗಾಮಿನ ಮಧ್ಯದಲ್ಲೇ ಬರಗಾರ ಘೋಷಿಸುವ ಅವಕಾಶವನ್ನು ಕೇಂದ್ರ ಸರ್ಕಾರವೇ ಕಲ್ಪಿಸಿದೆ. ಅಕ್ಟೋಬರ್ 31ಕ್ಕೆ ಬರಗಾಲ ಘೋಷಣೆ ಆಗ್ಬೇಕು. ಕೇಂದ್ರ ಸರ್ಕಾರದ ವಿಶೇಷ ಅವಕಾಶ ಬಳಸಿಕೊಂಡು, ನಾವು ಒಂದೂವರೆ ತಿಂಗಳ ಮೊದಲೇ ಬರಗಾಲ ಘೋಷಣೆ ಮಾಡಿದ್ದೇವೆ. ಕೇಂದ್ರಕ್ಕೆ ಮನವಿಯನ್ನೂ ಸಲ್ಲಿಸಿದ್ದೇವೆ. ಸೆಪ್ಟೆಂಬರ್ 27 ರಂದು ಕೇಂದ್ರ ಸರ್ಕಾರ ಗೃಹ ಕಾರ್ಯದರ್ಶಿಗೆ ಬರೆದ ಪತ್ರವೂ ಇದೆ. ಕೃಷಿ ಕಾರ್ಯದರ್ಶಿಗಳೇ ತಮ್ಮ ಪತ್ರದಲ್ಲಿ ಒಂದು ಕಡೆ ಹೇಳ್ತಾರೆ, ರಾಜ್ಯ ಸರ್ಕಾರ ಈಗಾಗಲೇ 31 ಜಿಲ್ಲೆಗಳನ್ನ ಬರಗಾಲ ಎಂದು ಘೋಷಣೆ ಮಾಡಿದೆ. IMC (Inter Ministerial Consultation) ತಂಡ ಕೂಡಲೇ ಭೇಟಿ ನೀಡಿ ಪರಿಹಾರ ಕುರಿತು ಚರ್ಚಿಸುವಂತೆ ಹೇಳಿದ್ದಾರೆ ಎಂದು ಪತ್ರ ಪ್ರದರ್ಶನ ಮಾಡಿದ್ದಾರೆ.
![](https://pratidhvani.com/wp-content/uploads/2024/04/AmitShahVb_vb_87.jpeg)
ರಾಜ್ಯದಲ್ಲಿ 4 ಲಕ್ಷ ಹೆಕ್ಟೆರ್ ಕೃಷಿ ಭೂಮಿ ನಷ್ಟ ಆಗಿದೆ ಎಂದು ಕೇಂದ್ರ ಕೃಷಿ ಕಾರ್ಯದರ್ಶಿಗಳೇ ಹೇಳಿದ್ದಾರೆ. ನವೆಂಬರ್ 20ರಂದು ಕೃಷಿ ಮಂತ್ರಾಲಯ ಕೇಂದ್ರದ ವರದಿಯನ್ನ ಪರಿಶೀಲಿಸಿ ಶಿಫಾರಸ್ಸನ್ನ ಗೃಹ ಸಚಿವರಿಗೆ ಕಳುಹಿಸಿಕೊಟ್ಟಿದ್ದಾರೆ. ಕೂಡಲೇ ಕರ್ನಾಟಕಕ್ಕೆ ಹಣ ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದಾರೆ. ನವೆಂಬರ್ 20ರಂದು ಕೇಂದ್ರ ಗೃಹ ಸಚಿವರ ಟೇಬಲ್ಗೆ ಪತ್ರ ಹೋಗಿದೆ. ಆದರೆ ಆ ಪತ್ರ ಈಗ ಧೂಳು ಹಿಡಿದಿದೆ. ಮಾರ್ಚ್ 16ರಿಂದ ಚುನಾವಣಾ ನೀತಿ ಸಂಹಿತಿ ಜಾರಿ ಆಗಿದೆ. ಹಾಗಾದ್ರೆ ಕಳೆದ 4 ತಿಂಗಳುಗಳಿಂದ ಅವರ ಟೇಬಲ್ ಮೇಲೆ ಧೂಳು ಹಿಡಿದು ಪತ್ರ ಕೂತಿದೆ. ರಾಜ್ಯ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರಕ್ಕೂ ಪತ್ರ ಬರೆಯಲಾಗಿದೆ ಎಂದಿದ್ದಾರೆ.
ಸಂವಿಧಾನ ಬದ್ದವಾಗಿ ಪ್ರಮಾಣವಚನ ಸ್ವೀಕರಿಸಿ ಮನವಿ ಮಾಡಿದ್ರೂ ನಾವು ಅವರಿಗೆ ಲೆಕ್ಕಕ್ಕಿಲ್ಲ, ಗ್ರಾಮೀಣಾಭಿವೃದ್ಧಿ ಸಚಿವರು, ಕೃಷಿ ಸಚಿವರು ನಾನು ಭೇಟಿ ಮಾಡಿದ್ರೂ ಬೆಲೆ ಕೊಡಲಿಲ್ಲ. ಕೇಂದ್ರ ಸರ್ಕಾರದ ಹಣಕಾಸು ಸಚಿವರನ್ನೂ ಭೇಟಿ ಮಾಡಿ ಮನವಿ ನೀಡಿದ್ದೀವಿ. ಸಿಎಂ ಸಿದ್ದರಾಮಯ್ಯ ಸಹ ಸೆಪ್ಟೆಂಬರ್ 23 ರಂದು ಕೃಷಿ ಸಚಿವರಿಗೆ ಪತ್ರ ಬರೆದಿದ್ದರು. ಕೇಂದ್ರದ ಹಣಕಾಸು ಸಚಿವೆ ಸೀತಾರಾಮನ್ ಅವರು ನವೆಂನರ್ 15ರಂದು ಪತ್ರ ಬರೆಯುತ್ತಾರೆ. ನವೆಂಬರ್ 15ರಂದು ಕೇಂದ್ರ ಗೃಹ ಸಚಿವರಿಗೆ ಸಿಎಂ ಪತ್ರ ಬರೆದಿದ್ದಾರೆ. ತತ್ ಕ್ಷಣ NDRF ಅಡಿ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದರು. ನವೆಂಬರ್ 27ರಂದು ಸಿಎಂ ಪ್ರಧಾನಿಗಳಿಗೂ ಪತ್ರ ಬರೆದಿದ್ದಾರೆ. ನವೆಂಬರ್ 27ರಂದು ಗೃಹ ಸಚಿವರಿಗೆ 2ನೇ ಬಾರಿ ಪತ್ರ ಬರೆದಿದ್ದಾರೆ. ಡಿಸೆಂಬರ್ 19ರಂದು ನಾನು, ಸಿಎಂ ಇಬ್ಬರೂ ಮೋದಿಯವರನ್ನ ಭೇಟಿ ಮಾಡಿದ್ದೀವಿ ಎಂದಿದ್ದಾರೆ.
ಡಿಸೆಂಬರ್ 20ರಂದು ಅಮಿತ್ ಷಾರನ್ನ ಭೇಟಿ ಮಾಡಿದ್ವಿ, ಜನವರಿ 19ರಂದು ಸಿಎಂ ಬೆಂಗಳೂರಿನಲ್ಲಿ ಪ್ರಧಾನಿಗಳನ್ನ ಭೇಟಿ ಮಾಡಿ ಪತ್ರ ಕೊಟ್ಟಿದ್ದಾರೆ. ಈಗ ಚುನಾವಣಾ ಆಯೋಗಕ್ಕೆ ಕಳುಹಿಸಿ ಕೊಟ್ಟಿದ್ದೀವಿ ಅಂತ ಮೋಸದ ಮಾತನ್ನ ಆಡುತ್ತಿದ್ದಾರೆ. ಡಿಸೆಂಬರ್ 20 ರಂದು ಭೇಟಿ ಮಾಡಿದಾಗ ಡಿಸೆಂಬರ್ 23ರಂದು HLC (High Level Committee )ಸಭೆ ಮಾಡಿ ಪರಿಹಾರ ಕೊಡ್ತೀನಿ ಅಂದಿದ್ರು. ನೀವು ಇಲ್ಲ ಅಂತ ಹೇಳಿ, ನಾನು ವಿಧಾನಸೌಧದ ಗಾಂಧೀ ಪ್ರತಿಮೆ ಮೇಲೆ ಆಣೆ ಮಾಡಿ ಹೇಳ್ತೀನಿ. ನೀವು ಗಾಂಧಿ ಪ್ರತಿಮೆ ಮೇಲೆ ಪ್ರಮಾಣ ಮಾಡಿ ಹೇಳಿ. ಮಾತು ಕೊಟ್ಟಿಲ್ವಾ ನಮಗೆ..? ಹಣ ಬಿಡುಗಡೆ ಮಾಡ್ತೀವಿ ಅಂತ ಎಂದು ಅಮಿತ್ ಷಾಗೆ ಪ್ರಶ್ನೆ ಮಾಡಿದ್ದಾರೆ.
ಕೃಷ್ಣಮಣಿ