ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಗೆಲುವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡ್ತಿದ್ದಾರೆ. ಟಿಕೆಟ್ ಘೋಷಣೆ ಆಗ್ತಿದ್ದ ಹಾಗೆ ಕೋವಿಡ್ ಕಳ್ಳ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆ ಮಾಡಿದ್ದರು. ಇದರ ಹಿಂದಿನ ಶಕ್ತಿ ಎಸ್.ಆರ್ ವಿಶ್ವನಾಥ್ ಅನ್ನೋದನ್ನು ಮನಗಂಡ ಸುಧಾಕರ್ ವಿಶ್ವನಾಥ್ ಮನೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಯಲಹಂಕದ ವಿಶ್ವನಾಥ್ ಮನೆಗೆ ಭೇಟಿ ನೀಡಿದ್ದ ಡಾ.ಸುಧಾಕರ್ ಸುದೀರ್ಘ ಚರ್ಚೆ ಬಳಿಕ ಸಂಧಾನದ ನಗೆ ಬೀರಿದ್ದಾರೆ.
![](https://pratidhvani.com/wp-content/uploads/2024/04/pro-4.webp)
ವಿಶ್ವನಾಥ್ ಮನೆಗೆ ಭೇಟಿ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್, ವಿಶ್ವನಾಥ್ ಉಪಾಹಾರಕ್ಕೆ ಆಹ್ವಾನ ನೀಡಿದ್ರು. ಹೀಗಾಗಿ ರಾಧಮೋಹನ್ ದಾಸ್ ಅಗರ್ವಾಲ್ ಜೊತೆಗೆ ಆಗಮಿಸಿದ್ದೆವು. ನಮ್ಮೆಲರಿಗೂ ಒಳ್ಳೆ ಆತಿಥ್ಯ ನೀಡಿದರು. ನನ್ನ ಗೆಲುವಿಗಾಗಿ ಚುನಾವಣೆಯಲ್ಲಿ ಶಕ್ತಿ ಮೀರಿ ಎಲ್ಲಾ ರೀತಿಯಿಂದಲೂ ಕೆಲಸ ಮಾಡ್ತೀನಿ ಅಂತ ಹೇಳಿದ್ದಾರೆ. ನಾಳೆ ಮೂರನೇ ಸೆಟ್ ನಾಮಪತ್ರ ಹಾಕ್ತಿದ್ದೇನೆ. ಕುಮಾರಣ್ಣ ಹಾಗೂ ಎಲ್ಲಾ ನಾಯಕರು ಬರ್ತಿದ್ದು, ಆಗ ಯಲಹಂಕ ಕ್ಷೇತ್ರದ ಮುಖಂಡರು ಸಹ ಬರುವಂತೆ ಮನವಿ ಮಾಡಿದ್ದೇನೆ ಎಂದಿದ್ದಾರೆ.
ನಾಳಿನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಜನರು ತಮ್ಮ ತಮ್ಮ ವಾಹನಗಳಲ್ಲೇ ಬರುವುದಾಗಿ ತಿಳಿಸಿದ್ದಾರೆ. ನಮಗೆ ದೊಡ್ಡಬಲ ಬಂದಿದೆ. ನಾಳೆ ವಿಶ್ವನಾಥ್ ಅವರು ನಾಮಪತ್ರ ಸಲ್ಲಿಕೆಗೆ ನೂರಕ್ಕೆ ನೂರು ಬರ್ತಾರೆ. ವಿಶ್ವನಾಥ್ ಅವರು ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ. ರಾಜಕಾರಣ ಕೊಡು ಕೊಳ್ಳುವುದಲ್ಲ. ಪರಸ್ಪರ ವಿಶ್ವಾಸ ನಂಬಿಕೆ. ನಾವೆಲ್ಲರೂ ಈ ಬಾರಿ ಒಟ್ಟಾಗಿ ಸೇರಿ ಕೆಲಸ ಮಾಡ್ತೀವಿ ಎಂದು ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ಮನೆಗೆ ಭೇಟಿ ನೀಡಿದ ಬಳಿಕ ಡಾ. ಕೆ.ಸುಧಾಕರ್ ವಿಶ್ವಾಸದಲ್ಲಿ ಮಾತನಾಡಿದ್ದಾರೆ.
![](https://pratidhvani.com/wp-content/uploads/2024/04/sudhakr-1526369475.jpg)
ಡಾ. ಸುಧಾಕರ್ ಜೊತೆ ಚರ್ಚೆ ನಡೆಸಿದ ಬಳಿಕ ಯಲಹಂಕ ಶಾಸಕ ಎಸ್. ಆರ್ ವಿಶ್ವನಾಥ್ ಮಾತನಾಡಿ, ನಮ್ಮ ಪಾಡಿಗೆ ನಾವು ಯಾರು ಹೇಳಲಿ ಬಿಡಲಿ ನಮ್ಮ ಕ್ಷೇತ್ರದಲ್ಲಿ ಬಹುಮತ ಕೊಡ್ತೀವಿ. ಏಪ್ರಿಲ್ 7 ರಂದು ನಮ್ಮ ಎಲ್ಲಾ ಕಾರ್ಯಕರ್ತರ ಸಭೆ ಕರೆಯುತ್ತಿದ್ದೇನೆ. ನಮ್ಮ ಅಭ್ಯರ್ಥಿಗೂ ಸಹ ಅಂದು ಬರಲು ಹೇಳಿದ್ದೇನೆ. ನಾಳೆ ನಾಮಪತ್ರ ಸಲ್ಲಿಕೆಗೆ ಹೋಗ್ತಿದ್ದೇನೆ. ನಮ್ಮ ಮುಖಂಡರು ಸಹ ಭಾಗಿಯಾಗ್ತಾರೆ. ಯಲಹಂಕ ಕೋರ್ ಕಮಿಟಿ ಜೆಡಿಎಸ್ ಜೊತೆಗೂ ಸೇರಿಕೊಂಡು ಮಾಡ್ತೇವೆ. ನಾನು ಈಗಾಗಲೇ ನಡೆದಿರುವ ಪಾಸಿಟಿವ್ ಅಂಡ್ ನೆಗೆಟಿವ್ ವಿದ್ಯಮಾನಗಳ ಬಗ್ಗೆ ಹೇಳಿದ್ದೀನಿ. ಈ ಭಾರಿ ಚುನಾವಣಾ ಸುಲಭವಿಲ್ಲ ಅನ್ನೋದನ್ನ ಹೇಳಿದ್ದೀನಿ ಎಂದಿದ್ದಾರೆ.
ನಾನು ಆದಷ್ಟು ಯಲಹಂಕದಲ್ಲೇ ಇದ್ದುಕೊಂಡು ಕೆಲಸ ಮಾಡ್ತೀನಿ. ಪ್ರಮುಖರು ಬಂದಾಗ ಮಾತ್ರ ಹೊರಗಡೆ ಹೋಗ್ತೀನಿ. ಅಲೋಕ್ ವಿಶ್ವನಾಥ್ಗೆ ಮುಂದೆ ಸೀಟ್ ಕೊಡಿಸುವುದಾಗಿ ಸುಧಾಕರ್ ಹೇಳಿದ್ದಾರೆ. ಇದೊಂದು ಭಾರಿ ಮಾತ್ರ ತಾನು ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ. ಎಸ್. ಆರ್ ವಿಶ್ವನಾಥ್ ಮಗ ಅಲೋಕ್ ಮಾತನಾಡಿ, ನಾವೂ ಕೂಡಾ ಚಿಕ್ಕಬಳ್ಳಾಪುರದಲ್ಲಿ ಪಕ್ಷ ಸಂಘಟನೆ ಕೆಲಸ ಮಾಡ್ಕೊಂಡು ಬರ್ತಿದ್ದೇವೆ. ನಾನೂ ಕೂಡಾ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಟಿಕೆಟ್ ಕೈತಪ್ಪಿದ್ದಕ್ಕೆ ಕಾರ್ಯಕರ್ತರಿಗೆ ಬೇಸರವಾಗಿದೆ. ಮುಂದೆ ಅವಕಾಶಗಳು ಬರಲಿವೆ, ನಮಗೆ ಮೋದಿಯವರೇ ಅಭ್ಯರ್ಥಿ. ಯಲಹಂಕದಲ್ಲಿ ಸುಧಾಕರ್ ಅವರಿಗೆ ಒಳ್ಳೇ ಲೀಡ್ ಕೊಡುವ ಕೆಲಸ ಮಾಡ್ತೇವೆ ಎಂದಿದ್ದಾರೆ.
![](https://pratidhvani.com/wp-content/uploads/2024/04/Dr-K-Sudhakar-1-1024x576.webp)
ಡಾ. ಕೆ ಸುಧಾಕರ್ ಅವರಿಗೆ ಸಂಫೂರ್ಣ ಬೆಂಬಲ ಇಲ್ಲ ಎನ್ನುವುದು ನಾಯಕರ ಮಾತುಗಳೇ ಹೇಳುತ್ತಿವೆ. ಆದರೆ ಬಿಜೆಪಿಗಾಗಿ ಕೆಲಸ ಮಾಡಬೇಕು ಅನ್ನೋ ಕಾರಣಕ್ಕೆ ಅಭ್ಯರ್ಥಿಯನ್ನು ನೋಡದೆ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎನ್ನುವುದನ್ನು ಹೇಳಿದ್ದಾರೆ. ಆದರೆ ಪಕ್ಷದಲ್ಲಿ ಅಪಸ್ವರ ಕೇಳಿದಾಗ ಪಕ್ಷದ ಕಾರ್ಯಕರ್ತರು ಪಕ್ಷಕ್ಕಾಗಿಯೇ ಕೆಲಸ ಮಾಡುತ್ತಾರಾ..? ಅಥವಾ ಕಿತ್ತಾಡಿಕೊಳ್ಳುವ ನಾಯಕರ ನಡುವೆ ಬೇರೊಬ್ಬರ ಕಡೆಗೆ ಮುಖ ಮಾಡ್ತಾರಾ..? ಅನ್ನೋ ಅನುಮಾನ ಶುರುವಾಗಿದೆ.
ಕೃಷ್ಣಮಣಿ