ರಾಜ್ಯ ರಾಜಕಾರಣದಲ್ಲಿ ಈ ರೀತಿಯ ಸಂಗತಿಗಳು ಆಗುವುದು ಸಾಮಾನ್ಯ. ಒಂದೇ ಹೇಳಿಕೆಯಿಂದ ಇಬ್ಬರನ್ನು ಟೀಕಿಸುವುದು, ಸಂಕಷ್ಟಕ್ಕೆ ಸಿಲುಕಿಸುವುದು ನಡೆಯುತ್ತಲೇ ಇರುತ್ತದೆ. ಆದರೆ ಇದೀಗ ಲೋಕಾಯುಕ್ತ ದಾಳಿಯಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಲೋಕಾಯುಕ್ತ ಪೊಲೀಸ್ರು ದಾಳಿ ಮಾಡಿದ್ದ ಪ್ರಕರಣವೇ ಬೇರೆ. ಆದರೆ ಅಲ್ಲಿ ಬೆಳಕಿಗೆ ಬಂದ ಪ್ರಕರಣವೇ ಬೇರೆ ಎನ್ನುವಂತಾಗಿದೆ. ಲೋಕಾಯುಕ್ತ ಅಧಿಕಾರಿಗಳು 80 ಲಕ್ಷ ಲಂಚ ಕೇಳಿದ್ದ ಪ್ರಕರಣದಲ್ಲಿ ದಾವಣಗೆರೆ ಜಿಲ್ಲೆ ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಟ್ರ್ಯಾಪ್ ಮಾಡಿದ್ದರು. ಕೆ.ಕೆ ಗೆಸ್ಟ್ ಹೌಸ್ನಲ್ಲಿ ಡೀಲಿಂಗ್ ನಡೆದಿತ್ತು. ಅಂತಿಮವಾಗಿ ಕ್ರೆಸೆಂಟ್ ರಸ್ತೆಯ ಪ್ರಶಾಂತ್ ಅವರ ಕಚೇರಿಯಲ್ಲಿ 40 ಲಕ್ಷ ರುಪಾಯಿ ಹಣವನ್ನು ಹಸ್ತಾಂತರ ಮಾಡುವುದಕ್ಕೆ ಲೋಕಾಯುಕ್ತರ ಜೊತೆಗೂಡಿ ದೂರುದಾರರು ತೆರಳಿದ್ದರು. ಈ ವೇಳೆ ಇನ್ನೂ ಮೂರು ಜನರು ಅದೇ ಕಚೇರಿಯಲ್ಲಿ ಎರಡು ಬ್ಯಾಗ್ಗಳನ್ನು ಹಿಡಿದುಕೊಂಡು ಕುಳಿತಿದ್ರು. ಇದು ಇಲಿ ಬೇಟೆಗೆ ಎಂದು ಬಲೆಬೀಸಿದ್ದ ಲೋಕಾಯುಕ್ತರಿಗೆ ಹುಲಿಯೇ ಸಿಕ್ಕಿ ಬೀಳುವಂತಾಯ್ತು.
40 ಲಕ್ಷ ಬೆನ್ನಟ್ಟಿ ಹೊರಟವರಿಗೆ ಸಿಕ್ಕಿದ್ದು 2 ಕೋಟಿ 2 ಲಕ್ಷ..!
ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಗೆ ಕಚ್ಚಾ ವಸ್ತು ಪೂರೈಕೆ ಮಾಡುವ ಡೀಲಿಂಗ್ನಲ್ಲಿ 80 ಲಕ್ಷ ಲಂಚ ಕೇಳಿದ್ದರು ಅನ್ನೋದು ದೂರುದಾರರ ಆರೋಪ ಆಗಿತ್ತು. ಆದೇ ಕೇಸ್ ಬೆನ್ನು ಬಿದ್ದಿದ್ದ ಲೋಕಾಯುಕ್ತರು ಹಣದ ಬ್ಯಾಗ್ ಹಿಡಿದು ಹಿಂದೆ ಮುಂದೆ ಸುತ್ತಾಡಿದ್ದರು. ಅಂತಿಮವಾಗಿ ಕಚೇರಿ ಬರುವಂತೆ ಪ್ರಶಾಂತ್ ಮಾಡಾಳ್ ಸೂಚನೆ ಕೊಟ್ಟಿದ್ದರು. ಎಲ್ಲಾ ತಯಾರಿಯೊಂದಿಗೆ ಕ್ರಸೆಂಟ್ ರಸ್ತೆಯ ಪ್ರಶಾಂತ್ ಮಾಡಾಳು ಕಚೇರಿಗೆ ಬಂದಿದ್ದ ಲೋಕಾಯುಕ್ತ ಅಧಿಕಾರಿಗಳು ಹಣದ ಬಂಡಲ್ ತುಂಬಿದ್ದ ಬ್ಯಾಗ್ ಹಸ್ತಾಂತರ ಮಾಡುತ್ತಿದ್ದರು. ಲೋಕಾಯುಕ್ತ ಅಧಿಕಾರಿಗಲು ಸ್ವಲ್ಪ ಜನ ಕಚೇರಿ ಒಳಕ್ಕೆ ಹೋಗಿದ್ದರೆ ಇನ್ನಷ್ಟು ಮಂದಿ ಕಚೇರಿ ಹೊರಗೆ ನಿಂತು ಎಲ್ಲವನ್ನೂ ಪರಿಶೀಲನೆ ಮಾಡ್ತಿದ್ರು. ಈ ವೇಳೆ ಕಚೇರಿ ಒಳಗೆ ಹಣ ಪಡೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಪ್ರಶಾಂತ್ ಮಾಡಾಳು ಸಿಕ್ಕಿ ಬೀಳುತ್ತಿದ್ದ ಹಾಗೆ ಅಲ್ಲೇ ಕುಳಿತಿದ್ದ ಮೂವರು ಜಾಗ ಖಾಲಿ ಮಾಡುವ ಮನಸ್ಸು ಮಾಡಿದ್ದರು. ಆದರೆ ಅವರೂ ಲೋಕಾಯುಕ್ತರ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಮೊದಲೇ ಡೀಲ್ ಆಗಿತ್ತು.. ಹಣ ಕೊಡುವಾಗ ಬಂಧನ..!
ಮಾಡಾಳು ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತ ನಿಗಮದ ಅಧ್ಯಕ್ಷರಾಗಿದ್ದು, ಅವರ ಪರವಾಗಿ ಪ್ರಶಾಂತ್ ಮಾಡಾಳ್ ರಾಸಾಯನಿಕ ವಸ್ತುಗಳ ಪೂರೈಕೆಯಲ್ಲಿ ಡೀಲಿಂಗ್ ಮಾಡಿದ್ದರು ಎನ್ನಲಾಗಿದೆ. ಅದಕ್ಕೂ ಮೊದಲು ಕಚ್ಚಾ ವಸ್ತು ಪೂರೈಕೆದಾರರಿಂದಲೂ ಟೆಂಡರ್ ಡೀಲಿಂಗ್ ಆಗಿತ್ತು. ಡೀಲಿಂಗ್ನಲ್ಲಿ ಕೊಡಬೇಕಿದ್ದ 1 ಕೋಟಿ 62 ಲಕ್ಷ ರೂಪಾಯಿ ಹಣದೊಂದಿಗೆ ಕಚೇರಿಗೆ ಬಂದಿದ್ದರು. ಆದರೆ ಲೋಕಾಯುಕ್ತ ದಾಳಿ ನಡೆಯುತ್ತಿದೆ ಎನ್ನುವುದನ್ನು ಮನಗಂಡು ಅಲ್ಲಿಂದ ಹೊರಡಲು ಮುಂದಾಗಿದ್ದರು. ಅನುಮಾನಾಸ್ಪದವಾಗಿ ಕಾಲಿಗೆ ಬುದ್ಧಿ ಹೇಳುತ್ತಿದ್ದ ಮೂವರನ್ನು ತಡೆದು ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸ್ರು, ಬ್ಯಾಗ್ನಲ್ಲಿ ಇರೋದು ಏನು..? ಇಷ್ಟೊಂದು ಹಣ ಇಲ್ಲಿಗೆ ತಂದಿದ್ದು ಯಾಕೆ..? ಎನ್ನುತ್ತಿದ್ದ ಹಾಗೆ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಲಂಚದ ಹಣವನ್ನು ಸಂದಾಯ ಮಾಡುವುದಕ್ಕಾಗಿ ಬಂದಿದ್ದೆವು ಎನ್ನುತ್ತಿದ್ದ ಹಾಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಸೆಕ್ಷನ್ 8ರ ಅಡಿಯಲ್ಲಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಲೋಕಾಯುಕ್ತರಿಗೆ ಬಯಸದೇ ಬಂದ ಭಾಗ್ಯ..! ಬಿಜೆಪಿಗೆ ಇಕ್ಕಟ್ಟು..
ಲೋಕಾಯುಕ್ತರು 40 ಲಕ್ಷ ಹಣವನ್ನು ಕೊಟ್ಟು ಪ್ರಶಾಂತ್ ಮಾಡಾಳು ಅವರನ್ನು ಅರೆಸ್ಟ್ ಮಾಡಲು ಸಜ್ಜಾಗಿ ಬಲೆ ಬೀಸಿದ್ರೆ ಅದೇ ಬಲೆಯಲ್ಲಿ ಬೇರೆ ಮೂವರು ಬ್ರಷ್ಟಾಚಾರಕ್ಕೆ ಪ್ರೇರಣೆ ನೀಡಲು ಬಂದು ಸಿಕ್ಕಿ ಬಿದ್ದಿದ್ದಾರೆ. ಇನ್ನೂ ಪ್ರಶಾಂತ್ ಮಾಡಾಳು ಅವರ ಕಚೇರಿಯಲ್ಲಿದ್ದ ಅಕೌಂಟೆಂಟ್ ಕೂಡ ಅರೆಸ್ಟ್ ಆಗಿದ್ದಾರೆ. ಇದೀಗ ರಾಜ್ಯ ಬಿಜೆಪಿ ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಬೆಂಗಳೂರು ಜಲಮಂಡಳಿ ಮುಖ್ಯ ಹಣಕಾಸು ಅಧಿಕಾರಿ ಆಗಿರುವ ಪ್ರಶಾಂತ್ ಮಾಡಾಳು ಅವರ ಬಂಧನ ಆಗಿದ್ದು, ಅನಿವಾರ್ಯವಾಗಿ ಅಮಾನತು ಮಾಡಲೇ ಬೇಕಿದೆ. ಇನ್ನೊಂದು ಕಡೆ ರಾಜ್ಯ ಬಿಜೆಪಿ ಶಾಸಕರೇ ಭ್ರಷ್ಟಾಚಾರದಲ್ಲಿ ಪರೋಕ್ಷವಾಗಿ ಭಾಗಿಯಾಗಿರುವು ಕೇಸರಿ ಪಾಳಯಕ್ಕೆ ನುಂಗಲಾರದ ಬಿಸಿ ತುಪ್ಪ ಆಗಿದೆ. ಇನ್ನು ಮಾಡಾಳು ವಿರೂಪಾಕ್ಷಪ್ಪ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪರಮಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ಶಿಸ್ತುಕ್ರಮ ಕೈಗೊಂಡು ಮುಖ ಉಳಿಸಿಕೊಳ್ಳುವ ಬಗ್ಗೆ ಭಾರತೀಯ ಜನತಾ ಪಾರ್ಟಿ ಚಿಂತನೆ ನಡೆಸಿದೆ ಎನ್ನಲಾಗ್ತಿದೆ.