ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರ ಮೇಲಿನ ಲೋಕಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ದೂರಿನ ಮಾಹಿತಿ ಇಲ್ಲಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್ಡಿಎಲ್) ರಾಸಾಯನಿಕ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ₹40 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ, ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದರು.
ದೂರಿನಲ್ಲೇನಿದೆ ?
ಪ್ರಶಾಂತ್ ಮಾಡಾಳ್ ಲಂಚಕ್ಕೆ ಬೇಡಿಕೆ ಇಟ್ಟ ಕುರಿತು ದೂರುದಾರರು ನೀಡಿದ ದೂರಿನ ಮಾಹಿತಿ ಇಲ್ಲಿದೆ.
ಫಿರ್ಯಾದುದಾರರು ಬೆಂಗಳೂರಿನ ಕೆಆರ್ ರಸ್ತೆಯಲ್ಲಿ …… ಕಾರ್ಪೋರೇಶನ್ ಎಂಬ ಹೆಸರಿನಲ್ಲಿ ಪಾಲುದಾರಿಕೆ ಕಂಪೆನಿಯನ್ನು ಮತ್ತು ಅವರ ಪರಿಚಯಸ್ಥರಾದ …. ರವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ….. ಎಂಬ ಹೆಸರಿನಲ್ಲಿ ಪಾಲುದಾರಿಕೆ ಕಂಪೆನಿಯನ್ನು ನಡೆಸುತ್ತಿದ್ದು, ಈ ಕಂಪೆನಿಗಳು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದಿಂದ ಕೆಮಿಕಲ್ ಆಯಿಲ್ ಸಪ್ಲೈ ಮಾಡುವ ಸಲುವಾಗಿ ಮಂಜೂರು ಮಾಡಿರುವ ಟೆಂಡರ್ ಮತ್ತು ಈ ಸಂಬಂಧ ನೀಡಿರುವ ಖರೀದಿ ಆದೇಶ(ಪಿ.ಒ-ಪರ್ಚೇಸ್ ಆರ್ಡರ್) ಗಾಗಿ ಹಾಗೂ ಸರಬರಾಜು ಮಾಡಿದ ರಾಸಾಯನಿಕ ಸರಕಿಗೆ ಯಾವುದೇ ಅಡೆತಡೆಯಿಲ್ಲದೆ ಬಿಲ್’ನ ಮೊತ್ತವನ್ನು ಬಿಡುಗಡೆ ಮಾಡಿಸಲು 8100000 ರೂ ಲಂಚದ ಹಣವನ್ನು ನೀಡುವಂತೆ ಎಂಎಲ್ಎ ಮತ್ತು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಮಾಡಳ್ ವಿರೂಪಾಕ್ಷಪ್ಪ ಅವರ ಪರವಾಗಿ ಅವರ ಮಗನಾದ BWSSBಯಲ್ಲಿ ಪ್ರಧಾನ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್ ಮಾಡಳ್ರವರ ಬೇಡಿಕೆಯಿಟ್ಟಿರುವ ಕುರಿತಂತೆ ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರು ಆಗಿದ್ದು, ಸದರಿ ಅಸಲು ದೂರು ಮತ್ತು ಅದರೊಂದಿಗಿನ ಲಗತ್ತುಗಳನ್ನು ಲಗತ್ತಿಸಿದೆ.
ನಾನು ಮೇಲ್ಕಂಡ ವಿಳಾಸದಲ್ಲಿ ವಾಸ ಮಾಡಿಕೊಂಡು, ಬೆಂಗಳೂರಿನ ಕೆಆರ್ ರಸ್ತೆಯಲ್ಲಿ …. ಎಂಬ ಹೆಸರಿನಲ್ಲಿ ಪಾಲುದಾರಿಕೆ ಕಂಪೆನಿಯನ್ನು ನಡೆಸುತ್ತಿದ್ದೇನೆ. ಸದರಿ ಕಂಪೆನಿಯಿಂದ ಕರ್ನಾಟಕ ರಾಜ್ಯದ ವಿವಿಧ ಸಂಸ್ಥೆಗಳಿಗೆ ರಾಸಾಯನಿಕ ಕಚ್ಛಾ ವಸ್ತುಗಳನ್ನು ಸರಬರಾಜು ಮಾಡುತ್ತಿರುತ್ತೇನೆ. ಅದ ರೀತಿ ನನ್ನ ಪರಿಚಯಸ್ಥರಾದ …. ರವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ … ಎಂಬ ಹೆಸರಿನಲ್ಲಿ ಪಾಲುದಾರಿಕೆ ಕಂಪೆನಿಯನ್ನು ನಡೆಸುತ್ತಿರುತ್ತಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದಿಂದ ಕೆಮಿಕಲ್ ಆಯಿಲ್ ಸಪ್ಲೈ ಮಾಡುವ ಸಂಬಂಧ 2023ರ ಜನವರಿ ಯಲ್ಲಿ ಕರೆಯಲಾಗಿದ್ದ ಟೆಂಡರ್ನಲ್ಲಿ ಮೇಲ್ಕಂಡ ನಮ್ಮ ಕಂಪೆನಿ ಮತ್ತು ….. ಕಂಪೆನಿಗಳು ಭಾಗಿಯಾಗಿದ್ದು, ಟೆಂಡರ್ ಹಾಕುವ ಸಮಯದಲ್ಲಿ ನಾವು ಸರಬರಾಜು ಮಾಡುವ ರಾಸಾಯನಿಕ ವಸ್ತುವಿನ ಮಾದರಿಯನ್ನು ಮತ್ತು ನಾವು ಸರಬರಾಜು ಮಾಡಬೇಕೆಂದಿರುವ ರಾಸಾಯನಿಕ ವಸ್ತುವಿನ ದರವನ್ನು ನೀಡಬೇಕಾಗಿದ್ದು, ನಮ್ಮಗಳ ಕಂಪೆನಿ ಟೆಂಡರ್ ಅನ್ನ ಮಂಜೂರು ಮಾಡಲು ಖರೀದಿ ಆದೇಶ ನೀಡಲು ಹಾಗು ಖರೀದಿ ಆದೇಶದ ರೀತ್ಯಾ ಸರಬರಾಜು ಮಾಡಿದ ರಾಸಾಯನಿಕ ಸರಕಿಗೆ ಯಾವುದೇ ಅಡೆತಡೆಯಿಲ್ಲದೆ ಬಿಲ್ನ ಮೊತ್ತವನ್ನು ಬಿಡುಗಡೆ ಮಾಡಲು ಶೇ 30ರಷ್ಟು ಲಂಚದ ಹಣವನ್ನು ನೀಡಬೇಕಾಗಿರುತ್ತದೆ. ಅದರಂತೆ ನಾವು ಟೆಂಡರ್ ಮಂಜೂರು ಮಾಡಿಸಲು ಮತ್ತು ಸರಬರಾಜು ಮಾಡಿದ ರಾಸಾಯನಿಕ ಸರಕಿಗೆ ಯಾವುದೇ ಅಡೆತಡೆಯಿಲ್ಲದೆ ಬಿಲ್ನ ಮೊತ್ತವನ್ನು ಬಿಡುಗಡೆ ಮಾಡುವ ಸಂಬಂಧ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಶ್ರೀ ಮಾಡಳ್ ವಿರೂಪಾಕ್ಷಪ್ಪ ರವವರನ್ನು ನಿಗಮದ ಕಚೇರಿಯಲ್ಲಿ ಭೇಟಿ ಮಾಡಲಾಗಿ ಸದರಿಯವರು ಕಮಿಷನ್ ಹಣದ ವಿಚಾರದಲ್ಲಿ ತನ್ನ ಮಗನಾದ BWSSBಯಲ್ಲಿ ಪ್ರಧಾನ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್ ಮಾಡಾಳ್ ರವರ ಜೊತೆಗೆ ಮಾತುಕತೆ ನಡೆಸಿ ಕಮಿಷನ್ ಹಣದ ಮೊತ್ತವನ್ನು ಅಂತಿಮಗೊಳಿಸುವಂತೆ ತಿಳಿಸಿರುತ್ತಾರೆ. ಅದರಂತೆ ನಾನು ಮತ್ತು … ಕಂಪೆನಿಯ ಪಾಲುದಾರರಾದ … ರವರು ದಿನಾಂದ 12-01-2023ರಂದು ಸಂಜೆ ಸುಮಾರು 5.30 ಗಂಟೆ ಸಮಯದಲ್ಲಿ ಶೇಷಾದ್ರಿಪುರಂನ ಕ್ರೆಸೆಂಟ್ ರಸ್ತೆಯಲ್ಲಿರುವ ಶ್ರೀ ಪ್ರಶಾಂತ್ ಮಾಡಳ್ರವರ ಖಾಸಗೀ ಕಚೇರಿಗೆ ಹೋಗಿದ್ದು ಅಲ್ಲಿ ಅವರ ಸೂಚನೆ ಮೇರೆಗೆ ನಾನು ಒಬ್ಬನೇ ಸದರಿಯವರ ಕೊಠಡಿಗೆ ಹೋಗಿ ಪ್ರಶಾಂತ್ ಮಾಡಳ್ವರನ್ನು ಭೇಟಿ ಮಾಡಿ ಟೆಂಡರ್ ಸಲುವಾಗಿ ಮಾತನಾಡಿದಾಗ ಅವರು ಟೆಂಡರ್ ಮಂಜೂರು ಮಾಡಿಸಿಕೊಡುವುದಾಗಿ ಮತ್ತು ಯಾವುದೇ ಅಡಚಣೆಯಿಲ್ಲದೆ ಸರಬರಾಜು ಮಾಡಿದ ರಾಸಾಯನಿಕ ಸರಕಿಗೆ ಬಿಲ್ ಮೊತ್ತವನ್ನು ಬಿಡುಗಡೆ ಮಾಡಿಸಿಕೊಡುವುದಾಗಿ ತಿಳಿಸಿದರು.
ಈ ಸಂಬಂಧ ಪ್ರತಿ ಕಂಪೆನಿಗೆ 60 ಲಕ್ಷ ರೂಗಳಂತೆ ಮೇಲ್ಕಂಡ ಎರಡು ಕಂಪೆನಿಯಿಂದ 12000000 ರೂಗಳ ಲಂಚದ ಹಣವನ್ನು ನೀಡುವಂತೆ ತಿಳಿಸಿದ್ದು, ನಂತರ ನಾನು ಈ ಬಗ್ಗೆ ಪಾಲುದಾರರಾದ … ರವರ ಜೊತೆಗೆ ಚರ್ಚಿಸಿ ಕಮಿಷನ್ ಹಣವನ್ನು ಕಡಿಮೆ ಮಾಡಿಕೊಳ್ಳುವಂತೆ ಕೋರಲಾಗಿ ಪ್ರಶಾಂತ್ ಮಾಡಾಳ್ರವರ ಅಂತಿಮವಾಗಿ ನಾನು ಪಾಲುದಾರನಾಗಿರುವ …. ಕಂಪೆನಿಯಿಂದ 3300000 ರೂಗಳನ್ನು ಮತ್ತು ….. ಕಂಪೆನಿಗೆ 4800000 ರೂಗಳನ್ನು, ಎರಡೂ ಕಂಪೆನಿಯಿಂದ ಒಟ್ಟು 8100000 ರೂಗಳ ಲಂಚದ ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿರುತ್ತಾರೆ, ಮತ್ತು ಹಣವನ್ನು ಟೆಂಡರ್ ಮಂಜೂರಾದ ನಂತರ ನಮ್ಮ ಕಂಪೆನಿಯಿಂದ 5100 ಕೆಜಿ GUJACWOOD Oil ಅನ್ನು ಪ್ರತಿ ಕೆಜಿಗೆ 815 ರೂಗಳಂತೆ ಮತ್ತು ….. ಕಂಪೆನಿಯಿಂದ 29520 ಕೆಜಿ Abbalide/Musk ಅನ್ನು ಪ್ರತಿ ಕೆಜಿಗೆ 4349 ರೂಗಳಂತೆ ಸರಬರಾಜು ಮಾಡಲು ಖರೀದಿ ಆದೇಶ ನೀಡಿದ ಕೂಡಲೇ ಕೊಡಬೇಕಾಗಿರುತ್ತದೆ ಎಂದು ತಿಳಿಸಿದ್ದು ನಂತರ ನಾನು ಈ ವಿಚಾರವನ್ನು ….ರವರಿಗೆ ತಿಳಿಸಿದಾಗ ಅದಕ್ಕೆ ಅವರು ಸಹ ಒಪ್ಪಿರುತ್ತಾರೆ.
ನಂತರ ನಾನು ಪ್ರಶಾಂತ್ ಮಾಡಳ್ ಅವರು ಬೇಡಿಕೆಯಿಟ್ಟಂತೆ 81 ಲಕ್ಷ ಹಣವನ್ನು ಕೊಡುವುದಾಗಿ ಒಪ್ಪಿಕೊಂಡೆನು. ಈ ಸಮಯದಲ್ಲಿ ನಾವು ನಡೆಸಿದ ಸಂಭಾಷಣೆಯನ್ನು ರೆಕಾರ್ಡಿಂಗ್ ಮಾಡಿಕೊಳ್ಳಲು ಸಾಧ್ಯವಾಗಿರುವುದಿಲ್ಲ.
ನಂತರ ಪ್ರಶಾಂತ್ ಮಾಡಳ್ರವರು ಮೇಲ್ಕಂಡಂತೆ ನಮ್ಮ ಕಂಪೆನಿಗಳಿಗೆ ಟೆಂಡರ್ ಅನ್ನ ಸಹ ಮಂಜೂರು ಮಾಡಿಸಿ ನಂತರ ದಿನಾಂಕ 28-01-2023ರಂದು …. ಕಂಪೆನಿಗೆ ಮತ್ತು ದಿನಾಂಕ 30-01-2023ರಂದು ನಮ್ಮ ಕಂಪೆನಿಗೆ ಖರೀದಿ ಆದೇಶ (ಪರ್ಚೇಸ್ ಅರ್ಡರ್) ಅನ್ನು ಸಹ ಕೊಡಿಸಿರುತ್ತಾರೆ.
ಇದಾದ ನಂತರ ದಿನಾಂಕ 08-02-2023ರಂದು ಬೆಳಿಗ್ಗೆ ಸುಮಾರು 11.30 ಗಂಟೆ ಸಮಯದಲ್ಲಿ ಪ್ರಶಾಂತ್ ಮಾಡಳ್ರವರು ಅವರ ಮೊಬೈಲ್ ಸಂಖ್ಯೆ 90083…… ರಿಂದ ನನ್ನ ಮೊಬೈಲ್ ನಂಬರ್ 98863…… ಗೆ ವ್ಯಾಟ್ಸಾಪ್ ಕಾಲ್ ಮಾಡಿ ಅವರು ಬೇಡಿಕೆಯಿಟ್ಟಿದ್ದ ಹಣದ ಕುರಿತಂತೆ ವಿಚಾರಿಸಿ ಈ ಬಗ್ಗೆ ಮಾತನಾಡಲು ಶೇಷಾದ್ರಿಪುರಂನಲ್ಲಿರುವ ತನ್ನ ಕಚೇರಿ ಹತ್ತಿರ ಸಂಜೆ ಸುಮಾರು 05 ಗಂಟೆಗೆ ಬರುವಂತೆ ತಿಳಿಸಿದರು. ಅದರಂತೆ ನಾನು ಅದೇ ದಿನ ಸಂಜೆ 5.10 ಗಂಟೆಗೆ ಅವರ ಕಚೇರಿಗೆ ಹೋಗಿ ಪ್ರಶಾಂತ್ ಮಾಡಾಳ್ ರವನ್ನು ಭೇಟಿ ಮಾಡಿ, ಆ ಸಮಯದಲ್ಲಿ ನಾನು ಬೇರೆ ಕೆಲಸದ ಟೆಂಡರ್ ಸಲುವಾಗಿ ಮಾತನಾಡಿದಾಗ ಅವರು ಈಗಾಗಲೇ ಮಂಜೂರು ಮಾಡಿರುವ ಟೆಂಡರ್ನ ಕುರಿತಂತೆ ನೀಡಲಾದ ಖರೀದಿ ಆದೇಶದ ಸಂಬಂಧ ಸರಬರಾಜು ಮಾಡಿದ ರಾಸಾಯನಿಕ ಸರಕಿಗೆ ಯಾವುದೇ ಅಡೆತಡೆಯಿಲ್ಲದೆ ಬಿಲ್ನ ಮೊತ್ತವನ್ನು ಬಿಡುಗಡೆ ಮಾಡಲು ನೀಡಬೇಕಾಗಿರುವ 81 ಲಕ್ಷ ಲಂಚದ ಹಣದ ಕುರಿತು ಮಾತನಾಡಿದ್ದು, ಆಗ ನಾನು ಹಣ ನೀಡಲು ಸ್ವಲ್ಪ ಸಮಯ ಕೊಡುವಂತೆ ಕೇಳಿಕೊಂಡು ಇನ್ನೆರಡು ದಿನಗಳಲ್ಲಿ ಬಂದು ಹಣ ನೀಡುವುದಾಗಿ ತಿಳಿಸಿದೆನು. ಈ ಸಮಯದಲ್ಲಿ ನಾನು ಪ್ರಶಾಂತ್ ಜೊತೆಗೆ ನಡೆಸಿದ ಸಂಭಾಷಣೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿರುತ್ತೇನೆ.
ನಾನು ಕಾರಣಾಂತರಗಳಿಂದಾಗಿ ವ್ಯವಹಾರದ ಸಂಬಂಧ ತುರ್ತಾಗಿ ಕೋಲ್ಕತ್ತಾಗೆ ಹೋಗಿದ್ದರಿಂದ ಪ್ರಶಾಂತ್ ಮಾಡಾಳ್ ರವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಸಮಯದಲ್ಲಿ ಹಲವಾರು ಬಾರಿ ಪ್ರಶಾಂತ್ ಮಾಡಾಳ್ರವರು ಮೇಲ್ಕಂಡ ನನ್ನ ಮೊಬೈಲ್ ನಂಬರ್ ಗೆ ಅವರ ಮೊಬೈಲ್ ನಂಬರ್ ನಿಂದ ವ್ಯಾಟ್ಸಾಪ್ ಕರೆ ಮಾಡಿ ಹಣದ ಕುರಿತು ಮಾತನಾಡಿದ್ದು ನಾನು ಅವರಿಗೆ ಬೆಂಗಳೂರಿಗೆ ವಾಪಾಸ್ ಬಂದ ಕೂಡಲೇ ಭೇಟಿ ಮಾಡಿ ಹಣ ತಲುಪಿಸುವುದಾಗಿ ತಿಳಿಸಿದೆನು.
ಅದೇ ರೀತಿ ದಿನಾಂಕ 28-02-2023ರಂದು ಸಂಜೆ ಸುಮಾರು 5 ಗಂಟೆಯಿಂಗ 7 ಗಂಟೆ ನಡುವೆ ಪ್ರಶಾಂತ್ರವರು ಅವರ ಮೊಬೈಲ್ ನಂಬರ್ನಿಂದ ನನ್ನ ಮೊಬೈಲ್ ನಂಬರ್ಗೆ ಕರೆ ಮಾಡಿದ್ದು ನಾನು ಸ್ವೀಕರಿಸಿರುವುದಿಲ್ಲ. ನಂತರ 01-03-2023ರಂದು ಪ್ರಶಾಂತ್ ಮಾಡಾಳ್ ರವರು ನಾನು ಕೋಲ್ಕತ್ತಾದಿಂದ ವಾಪಾಸ್ ಬಂದಿರುವ ಬಗ್ಗೆ ವಿಚಾರಿಸಿ ಮೇಲ್ಕಂಡ ವ್ಯವಹಾರ ಸಂಬಂಧ ಈ ದಿನ ಅಂದ್ರೆ 02-03-2023ರಂದು ಸಂಜೆ 5.30 ಗಂಟೆಗೆ ಬಂದು ಭೇಟಿಯಾಗುವಂತೆ ತಿಳಿಸಿರುತ್ತಾರೆ. ಅವರು ಈ ಹಿಂದೆ ಬೇಡಿಕೆಯಿಟ್ಟ ಲಂಚದ ಹಣವನ್ನು ಪಡೆದುಕೊಳ್ಳುವ ಸಂಬಂಧ ನನಗೆ ಭೇಟಿಯಾಗಲು ತಿಳಿಸಿರುತ್ತಾರೆ.
ಮೇಲ್ಕಂಡಂತೆ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗ ಪ್ರಶಾಂತ್ ಮಾಡಾಳ್ ಅವರು ಬೇಡಿಕೆಯಿಟ್ಟಿದ್ದ ಲಂಚದ ಹಣ ನೀಡಲು ನನಗೆ ಇಷ್ಟವಿಲ್ಲದ ಕಾರಣ ಈ ಸಂಬಂಧ ನಾನು…. ರವರ ಜೊತೆಗೆ ಕೂಲಂಕುಷವಾಗಿ ಚರ್ಚಿಸಲಾಗಿ ಅವರು ಸಹ ಲಂಚದ ಹಣ ನೀಡಲು ಇಷ್ಟವಿಲ್ಲದ ಕಾರಣ ಲೋಕಾಯುಕ್ತಕ್ಕೆ ದೂರು ನೀಡೋಣವೆಂದು ನಿರ್ಧರಿಸಿ, ನನಗೆ ದೂರು ನೀಡುವಂತೆ ಅವರ ಕಂಪೆನಿಯಂದ ಅಥರೈಷೇಶನ್ ಪತ್ರವನ್ನು ನೀಡಿರುತ್ತಾರೆ.
ಆದ್ದರಿಂದ ನನ್ನ ಮತ್ತು ಪರಿಚಯಸ್ಥರಾದ … ಕಂಪೆನಿಯಿಂದ ಪಡೆದಿರುವ ಟೆಂಡರ್ ಮಂಜೂರು ಮಾಡಿಸಲು ಮತ್ತು ಕಂಪೆನಿಗಳಿಂದ ಕೆಮಿಕಲ್ ಆಯಿಲ್ ಸರಬರಾಜು ಮಾಡಲು 80 ಲಕ್ಷ ಲಂಚದ ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿರುವ ಎಂಎಲ್ಎ ಮಾಡಾಳ್ ವಿರೂಪಾಕ್ಷಪ್ಪ, ಅಧ್ಯಕ್ಷರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಮತ್ತು ಅವರ ಮಗನಾದ ಪ್ರಶಾಂತ್ ಮಾಡಾಳ್ ವಿರುದ್ಧ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಿರುತ್ತೇವೆ.
ಈ ದೂರಿನೊಂದಿಗೆ ಪ್ರಶಾಂತ್ ಮಾಡಾಳ್ ಅವರ ಲಂಚದ ಹಣದ ಕುರಿತು ನನ್ನ ಜೊತೆಗೆ ನಡೆಸಿದ ಸಂಭಾಷಣೆಯ ರೆಕಾರ್ಡಿಂಗ್ ಇರುವ ವಿಡಿಯೋ ಸಂಭಾಷಣೆ, ಅವರು ಬೇಡಿಕೆ ಇಟ್ಟಿರುವ ಲಂಚದ ಹಣದ ಸಂಬಂಧ 40 ಲಕ್ಷ ರೂಗಳನ್ನು ಬ್ಯಾಗ್ನಲ್ಲಿ ಇರಿಸಿ ಈ ದೂರಿನೊಂದಿಗೆ ಹಾಜರುಪಡಿಸಿರುತ್ತೇನೆ.