ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಲೋಕಾಯುಕ್ತ ಸಂಸ್ಥೆಯನ್ನು ಬರ್ಕಾಸ್ತು ಮಾಡಿದ್ದರು. ಆ ಬಳಿಕ ACB (Anti corruption bureau karnataka) ಸ್ಥಾಪನೆ ಮಾಡಿದ್ದರು. ಆ ಬಳಿಕ ಲೋಕಾಯುಕ್ತ ಸಂಸ್ಥೆ ಮುಚ್ಚಿದ್ದ ನಿರ್ಧಾರವನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಹೀಗಾಗಿ ಮತ್ತೆ ACB ರದ್ದು ಆಗಿ ಲೋಕಾಯುಕ್ತ ಜಾರಿಗೆ ಬಂದಿತ್ತು. ಇದೀಗ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ಲೋಕಾಯುಕ್ತಕ್ಕೆ ಹೋಗಿದ್ದು, ಸಿದ್ದರಾಮಯ್ಯ ರಕ್ಷಣೆಗೆ ಲೋಕಾಯುಕ್ತರೇ ಗತಿಯಾದರು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
X ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಶ್ರೀಮಾನ್ ಸಿದ್ದರಾಮಯ್ಯನವರೇ, ನಿಮ್ಮ ‘ದ್ವಿಲಾಸ’ಕ್ಕೆ ಉಘೇ ಉಘೇ ಎನ್ನಲೇಬೇಕು. ಅಂದು ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ, ಎಸಿಬಿ ರಚನೆ ಮಾಡಿಕೊಂಡಿರಿ. ಇಂದು ಮುಡಾ ಹಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇ ಗತಿಯಾಗಿದೆ. ಕರ್ಮ ಹಿಂತಿರುಗಿ ಬರುತ್ತದೆ Karma Hit back ಎಂದರೇ ಇದೇ ಅಲ್ಲವೇ ಸಿದ್ದರಾಮಯ್ಯನವರೇ..? ಎಂದು ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು. ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ರಕ್ಷಣೆ ಪಡೆಯಲು ಮುಂದಾಗಿದ್ದೀರಿ. ಇನ್ನು ಸ್ವಾಯತ್ತ ಸಂಸ್ಥೆ ಆಗಿರುವ ಸಿಬಿಐ ಭ್ರಷ್ಟಾಚಾರ ಪ್ರಕರಣದಲ್ಲಿ ರಾಜ್ಯ ಪ್ರವೇಶಕ್ಕೆ ಬರುವುದನ್ನು ತಡೆಯಲು ಸಚಿವ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ. ಅಲ್ಲಿಗೆ ಆರೋಪಿ ಆಗಿರುವ ನೀವು ಅಪರಾಧಿಯಾದಿರಿ ಎಂದೇ ಲೆಕ್ಕ. ಸಿದ್ದಾ ಅಪರಾಧ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ. ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು.. ನಿಮಗೂ ಭಯವಿದೆ. ಅದೇ ಈ ನೆಲದ ಕಾನೂನಿನ ಶಕ್ತಿ ಎಂದು ಕುಟುಕಿದ್ದಾರೆ.
ಸಿಎಂ ಸಿದ್ದರಾಮಯ್ಯ ನಾನು ತಪ್ಪು ಮಾಡಿಲ್ಲ ಎಂದೇ ವಾದಿಸುತ್ತಿದ್ದಾರೆ. ಆದರೆ ಸಿಬಿಐ ತನಿಖೆ ಬರುವ ಭೀತಿಯಿಂದಲೇ ಕೂಡಲೇ ಹಳೇ ನೋಟಿಫಿಕೇಷನ್ ರದ್ದು ಮಾಡಿರುವುದು ಕುಮಾರಸ್ವಾಮಿ ಅವರ ಗುಮಾನಿಗೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಕೂಡ ರಕ್ಷಣಾತ್ಮಕ ಆಟ ಆಡುವುದಕ್ಕೆ ಮುಂದಾಗಿದ್ದಾರೆ. ಇದೀಗ ಸಿಬಿಐ ತನಿಖೆ ತಡೆಯುವ ಉದ್ದೇಶದಿಂದ ಸಂಪುಟ ತೆಗೆದುಕೊಂಡಿರುವ ನಿರ್ಧಾರ ಕೂಡ ಕೋರ್ಟ್ ಎದುರು ಬರಲಿದ್ದು, ಕೋರ್ಟ್ ಯಾವ ತೀರ್ಮಾನ ಮಾಡಲಿದೆ ಅನ್ನೋದು ಮುಖ್ಯ ಆಗುತ್ತದೆ. ಆದರೆ ಸೈಟ್ ಪಡೆದ ವಿಚಾರ ರಾಜಕೀಯ ದಾಳಕ್ಕೆ ಸಿಲುಕಿದ್ದು, ಸಿದ್ದರಾಮಯ್ಯ ರಾಜಕೀಯ ಅಂತಿಮ ಘಟ್ಟದಲ್ಲಿ ನೈತಿಕತೆ ಪ್ರಶ್ನೆ ಮಾಡಿಸಿಕೊಳ್ಳುವಂತಾಗಿದೆ ಅನ್ನೋದು ಮಾತ್ರ ಸತ್ಯ.