ಲೋಕಾಯುಕ್ತ, ಉಪಲೋಕಾಯುಕ್ತ ಮತ್ತು ನ್ಯಾಯಾಂಗ ಅಧಿಕಾರಿಗಳು ಗುರುವಾರ (ಆಗಸ್ಟ್ 3) ನಗರದಾದ್ಯಂತ ಬಿಬಿಎಂಪಿಯ ಕಂದಾಯ ಮತ್ತು ನಗರ ಯೋಜನಾ ವ್ಯಾಪ್ತಿಯ 45 ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಕಡತಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ದುರಾಡಳಿತದ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆ ದಾಳಿಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಡತಗಳನ್ನು ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ಸಿಬ್ಬಂದಿ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ದೂರುಗಳು ಬಂದಿದ್ದವು.
ಪಾಲಿಕೆ ಕಚೇರಿಗಳಲ್ಲಿ ದಾಖಲೆ ಇರದ ನಗದು ಮತ್ತು ಹಲವು ಕಡತಗಳನ್ನು ಅಧಿಕಾರಿಗಳು ದಾಳಿ ವೇಳೆ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಾರ್ಯಾಚರಣೆಯಲ್ಲಿ, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮತ್ತು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಕೆಲವು ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರು ಪೂರ್ವ, ಬೊಮ್ಮನಹಳ್ಳಿ, ಯಲಹಂಕ, ಮಹದೇವಪುರ, ಮಲ್ಲೇಶ್ವರಂ, ರಾಜಾಜಿನಗರ, ಬನಶಂಕರಿ, ವಿಜಯನಗರ, ಬಸವನಗುಡಿ, ರಾಜರಾಜೇಶ್ವರಿ ನಗರ, ಯಶವಂತಪುರ ಮತ್ತು ದಾಸರಹಳ್ಳಿಯ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿವೆ.
13 ನ್ಯಾಯಾಂಗ ಅಧಿಕಾರಿಗಳು, 7 ಪೊಲೀಸ್ ವರಿಷ್ಠಾಧಿಕಾರಿಗಳು, 19 ಉಪ ಪೊಲೀಸ್ ವರಿಷ್ಠಾಧಿಕಾರಿಗಳು, 26 ಪೊಲೀಸ್ ಇನ್ಸ್ಪೆಕ್ಟರ್ಗಳು ಮತ್ತು ಹಲವು ಪೊಲೀಸರು ಈ ಕಾರ್ಯಾಚರಣೆಯ ಭಾಗವಾಗಿದ್ದರು.
ಕರ್ನಾಟಕ ಲೋಕಾಯುಕ್ತದ ಡಿಜಿಪಿ ಮತ್ತು ಐಜಿಪಿ ಮೇಲ್ವಿಚಾರಣೆಯಲ್ಲಿ ದಾಳಿ ನಡೆಸಲಾಗಿದೆ. ನಗರದ ಅಕ್ಕಪಕ್ಕದ ಜಿಲ್ಲೆಗಳ ಲೋಕಾಯುಕ್ತ ಕಚೇರಿಯ ಪೊಲೀಸರು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ | “ಇಂಡಿಯಾ”ಗೆ ಕರ್ನಾಟಕದಿಂದ ಕನಿಷ್ಟ 20 ಲೋಕಸಭೆ ಸೀಟುಗಳನ್ನು ಗೆಲ್ಲಿಸಿ ಕೊಡುತ್ತೇವೆ ; ಡಿ.ಕೆ. ಶಿವಕುಮಾರ್
ಕಂದಾಯ ಮತ್ತು ಪಟ್ಟಣ ಯೋಜನಾ ಕಚೇರಿಗಳ ಸಿಬ್ಬಂದಿ ಯಾವುದೇ ಪ್ರಮಾಣ ಪತ್ರ ನೀಡಬೇಕಿದ್ದರೂ 50 ಸಾವಿರ ರೂ. ಗೂ ಹೆಚ್ಚು ಲಂಚಕ್ಕೆ ಬೇಡಿಕೆಯಿಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಖಾತೆ ವರ್ಗಾವಣೆ, ಖಾತೆ ನೋಂದಣಿ, ಕಟ್ಟಡಗಳಿಗೆ ಪರವಾನಗಿ, ಪ್ರಾರಂಭಿಕ ಪ್ರಮಾಣ ಪತ್ರ, ವಾಣಿಜ್ಯ ಪರವಾನಗಿ, ಜನನ ಮತ್ತು ಮರಣ ಪ್ರಮಾಣ ಪತ್ರ ಮತ್ತು ಇತರ ದಾಖಲೆಗಳನ್ನು ನೀಡಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದರು ಎಂದು ದೂರಲಾಗಿದೆ.
ಬಿಬಿಎಂಪಿ ಸಿಬ್ಬಂದಿ ವಿರುದ್ಧ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.