ಮತ್ತೆ ಲಾಕ್ ಡೌನ್ ವಿಚಾರ ಮುನ್ನೆಲೆಗೆ ಬಂದು ಭಾರೀ ಚರ್ಚೆಗೆ ಆದಿಯಾಡಿದೆ. ಮೊದಲ ಮತ್ತು ಎರಡನೇ ಅಲೆ ನೋಡಿ ಜನರು ಕೊರೋನಾಗಿಂತ ಹೆಚ್ಚು ಸೋತಿದ್ದು ಸರ್ಕಾರದ ಈ ಅವೈಜ್ಞಾನಿಕ ಲಾಕ್ ಡೌನ್ಗೆ. ಇದೀಗ ಮತ್ತೆ ಮೂರನೇ ಅಲೆ ಆರಂಭವಾಗಿದ್ದು, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಅರ್ಥಾತ್ ವೀಕೆಂಡ್ ಲಾಕ್ ಡೌನ್ಗೆ ಜಾರಿಯಾಗಿದೆ. ಅಲ್ಲದೆ ಹುಚ್ಚು ಸರ್ಕಾರದ ತುಚ್ಛ ಆಟಕ್ಕೆ ಲಾಕ್ ಡೌನ್ ಜಾರಿಯಾದರೂ ಅಚ್ಚರಿ ಪಡಬೇಕಿಲ್ಲ.
ಜನವರಿ 7ರ ನಂತರ ಮತ್ತೆ ಹೊಸದಾದ ಮಾರ್ಗಸೂಚಿ ಜಾರಿಯಾಗುತ್ತಿದ್ದು, ಈ ಪೈಕಿ ವೀಕೆಂಡ್ ಕರ್ಫ್ಯೂ ಕೂಡ ಒಂದು. ಎಂದರೆ ಹೆಚ್ಚು ಕಮ್ಮಿ ವಾರದ ಎರಡು ದಿನಗಳ ಲಾಕ್ ಡೌನ್ ಜಾರಿಯಾಗುತ್ತಿದೆ. ಈಗಾಗಲೇ ಕಳೆದ ಕೆಲ ಲಾಕ್ ಡೌನ್ ನಲ್ಲಿ ನರಕಯಾತನೆ ಅನುಭವಿಸಿ ರೋಸಿಹೋಗಿರುವ ಜನರು ಈಗ ಮತ್ತೊಂದು ಲಾಕ್ ಡೌನ್ ಎಂಬ ನಾಟಕಕ್ಕೆ ಸಜ್ಜಾಗ ಬೇಕಿದೆ. ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲಿ ಸ್ವೀಡನ್ ದೇಶದ ಸಾಂಕ್ರಾಮಿಕ ಶಾಸ್ತ್ರತಜ್ಞ ಮಾರ್ಟಿನ್ ಕಾಲ್ಡಾರ್ಫ್ ಈ ಲಾಕ್ ಡೌನ್ ಬೇಕು ಬೇಡಗಳ ಬಗ್ಗೆ ಬಹಳ ಪರಿಣಾಮಕಾರಿಯಾಗಿ ವಿಷಯ ಮಂಡಿಸಿದ್ದರು.
ಈ ವೇಳೆ ಕೊರೋನಾ ತಡೆಗಟ್ಟುವಲ್ಲಿ ಲಾಕ್ ಡೌನ್ ಎಷ್ಟರ ಮಟ್ಟಿಗೆ ಪಾತ್ರವಹಿಸಲಿದೆ ಎಂಬುವುದರ ಕುರಿತು ವಿಸ್ತ್ರತವಾಗಿ ಮಾತನಾಡಿದ್ದರು. ʻʻಸಾಂಕ್ರಾಮಿಕ ರೋಗಶಾಸ್ತ್ರತಜ್ಞರು 2020ರ ಮಾರ್ಚ್ನಲ್ಲಿ ಏನನ್ನು ಮನಗಂಡಿದ್ದರೋ ಅದೀಗ ಎಲ್ಲರಿಗೂ ಸ್ಪಷ್ಟವಾಗಿದೆ. ಕೋವಿಡ್ ಅನ್ನು ನಿಗ್ರಹಿಸಲು ಸಾಧ್ಯವಿಲ್ಲ. ಲಾಕ್ ಡೌನ್ಗಳು ಸೋಂಕು ಹರಡುವಿಕೆಯನ್ನು ಮುಂದೂಡುತ್ತವೆ ಮತ್ತು ಸಾಂಕ್ರಾಮಿಕ ಅವಧಿಯನ್ನು ವಿಸ್ತರಿಸುತ್ತವೆ. ಅಲ್ಲದೆ ಸಾರ್ವಜನಿಕ ಆರೋಗ್ಯ ಹಾಗೂ ಶಿಕ್ಷಣಕ್ಕೂ ಧಕ್ಕೆಯುಂಟು ಮಾಡುತ್ತವೆʼʼ ಎಂದು ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.
ಒಂದು ತಾತ್ವಿಕ ನೆಲೆಗಟ್ಟಿನಲ್ಲಿ ಯೋಚಿಸಿದರೆ ಲಾಕ್ ಡೌನ್ ಎಂಬುವುದು ಕೊರೋನಾ ವೈರಾಣು ಹರಡುವುದನ್ನು ತಡೆಯುವ ಬದಲು ಮುಂದೂಡುತ್ತದೆ ಎನ್ನುವುದು ಮನಗಾಣಬಹುದು. ಆದರೆ ಇಲ್ಲಿನ ಸರ್ಕಾರ ವೈರಾಣು ಶಾಸ್ತ್ರದ, ಸಾಂಕ್ರಾಮಿಕ ಶಾಸ್ತ್ರದ ಗಂಧಗಾಳಿ ಗೊತ್ತಿಲ್ಲದ ವೈದ್ಯರನ್ನು ಸಲಹಾ ಸಮಿತಿಯಲ್ಲಿಟ್ಟುಕೊಂಡು ಪದೇ ಪದೇ ಲಾಕ್ ಡೌನ್ ಹೇರಲು ಮುಂದಾಗುತ್ತಿರುವುದು ಒಪ್ಪೊತ್ತಿನ ಹಿಟ್ಟಿಗಾಗಿ ಹೋರಾಡುವ ಬಡ ಜನರ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ ಎಂಬ ಕನಿಷ್ಠ ಜ್ಞಾನವನ್ನು ಕಳಕೊಂಡಿದ್ದಾರೆ.
![](https://pratidhvani.com/wp-content/uploads/2022/01/WhatsApp-Image-2022-01-06-at-7.28.47-PM.jpeg)
ಇದೇ ವಿಚಾರವಾಗಿ ನಗರದ ಪ್ರತಿಷ್ಠ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರ ಜೊತೆಗೆ ಮಾತನಾಡಿದ ಪ್ರತಿಧ್ವನಿ, ಸೋಂಕು ತಡೆಗಟ್ಟುವಲ್ಲಿ ಲಾಕ್ ಡೌನ್ ಪಾತ್ರ ನಿಜಕ್ಕೂ ಇದೆಯೇ ಎಂದು ಕೇಳಿತ್ತು. ಇದಕ್ಕೆ ಉತ್ತರಿಸಿದ ಹೆಸರು ಹೇಳಲು ಇಚ್ಚಿಸದ 55 ವರ್ಷದ ಹಿರಿಯ ವೈದ್ಯರೊಬ್ಬರು, ಇವೆಲ್ಲವೂ ರಾಜಕೀಯ ನಾಟಕ ಎಂದು ಒಂದೇ ಮಾತಿನಲ್ಲಿ ಸೋಂಕು ತಡೆಗಟ್ಟುವಲ್ಲಿ ಲಾಕ್ ಡೌನ್ ಪಾತ್ರ ದೊಡ್ಡದು ಎಂಬ ಸರ್ಕಾರದ, ತಾಂತ್ರಿಕ ಸಲಹಾ ಸಮಿತಿಯ ಹಾಗೂ ಮಾಧ್ಯಮಗಳ ವಾದವನ್ನು ತಳ್ಳಿಹಾಕಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಸೋಂಕು ತಡೆಗಟ್ಟಲು ಬೇಕಿರುವು ಜನರಲ್ಲಿ ತಿಳುವಳಿಕೆ ಮೂಡಿಸುವುದು. ಅಗತ್ಯಕ್ಕೂ ಮೀರಿ ವೈದ್ಯಕೀಯ ಕ್ಷೇತ್ರದಲ್ಲಿನ ಬದಲಾವಣೆ ಹಾಗೂ ಲಸಿಕೆಯನ್ನು ಪರಿಣಾಮಕಾರಿಯಾಗಿ ನೀಡುವುದು ಎಂದರು.
ಈಗಾಗಲೇ ದಿನದಿಂದ ದಿನಕ್ಕೆ ಸರ್ಕಾರ ಕೊಡುತ್ತಿರುವ ಮಾಹಿತಿಯ ಪ್ರಕಾರ ಸೋಂಕು ಹೆಚ್ಚಳವಾಗುತ್ತಿದೆ. ಇದೇ ರೀತಿಯಲ್ಲಿ ಮುಂದುವರೆದರೆ ದಿನವೊಂದಕ್ಕೆ 25 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಕೊರೋನಾ, ಓಮೈಕ್ರಾನ್ಗಿಂತ ಭೀಕರವಾದ ಲಾಕ್ ಡೌನ್ಗೆ ಜನರು ಹೈರಾಣಾಗಿ ಹೋಗಲಿದ್ದಾರೆ. ಗತಿಗೆಟ್ಟ ಸರ್ಕಾರ ಇಂಥಾ ಮತಿಗೆಟ್ಟ ನಿರ್ಧಾರಗಳಿಗೆ ಬಡವರು ಹಾಗೂ ತಳವರ್ಗದವರು ತಮ್ಮ ಬದುಕನ್ನು ಕಾಣಿಕೆಯಾಗಿ ನೀಡಬೇಕಿದೆ. ಅಂತರರಾಷ್ಟ್ರೀಯ ವೈದ್ಯರೂ ಕೂಡ ಲಾಕ್ ಡೌನ್ ನಿಂದ ಸೋಂಕು ತಡೆಗಟ್ಟಲು ಸಾಧ್ಯವೇ ಇಲ್ಲ ಎಂದು ಶರಾ ಬರೆಯುವ ಹೊತ್ತಲ್ಲಿ ಇಲ್ಲಿನ ಸರ್ಕಾರಗಳು ಮತ್ತೊಂದು ಲಾಕ್ ಡೌನ್ ಎನ್ನುತ್ತಲೇ ಜನರ ಜೀವ ಹಿಂಡುತ್ತಿದೆ. ಸರ್ಕಾರ ಈ ಲಾಕ್ ಡೌನ್ ನಾಟಕಕ್ಕೆ ಸಿಲುಕಿದ ಜನರು, ರಾಮೇಶ್ವರಕ್ಕೆ ಹೋದರು ತಪ್ಪಿಲ್ಲ ಶನೇಶ್ವರನ ಕಾಟ ಎಂಬ ಮಾತುಗಳನ್ನು ಒಳಗೊಳಗಿಂದಲೇ ಆಡಿಕೊಳ್ಳುವಂತಾಗಿದೆ.