ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಲಿ ಅಂದೇ ಅವರ ಅಂತಿಮಯಾತ್ರೆ ಎಂದು ಸಕಲೇಶಪುರ ಭಜರಂಗದಳದ ನಾಯಕ ರಘು ಎನ್ನುವವರು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡುವವರು ದೇಶದ್ರೋಹಿ ಚಟುವಟಿಕೆಯ ಒಂದು ಭಾಗ ಆಗುತ್ತಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆದರಿಕೆಯ ವೀಡಿಯೋ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಟಿಪ್ಪು ರಾಜ್ಯವಲ್ಲದೇ ದೇಶಕ್ಕೆ ಕಂಟಕ ತಂದಿರುವ ವ್ಯಕ್ತಿ ಇಂತಹ ವ್ಯಕ್ತಿಯ ಒಂದೇ ಒಂದು ಅಡಿ ಪ್ರತಿಮೆ ನಿರ್ಮಾಣವಾದರೂ ಅಂದೆ ಅವರ ಅಂತಿಮಯಾತ್ರೆ ಎಂದು ವಿಡಿಯೋದಲ್ಲಿ ಹೇಳುವುದು ಕಂಡು ಬರುತ್ತದೆ.
ತನ್ವೀರ್ ಸೇಠ್ ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಈಗಾಗಲೇ ಸಾಕಷ್ಟು ಪರ-ವಿರೋಧದ ಚರ್ಚೆ ನಡೆಯುತ್ತಿದೆ.






