ಇನ್ನೆರಡು ದಿನಗಳಲ್ಲಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಇದೇ ಮೇ 10ರಂದು ಚುನಾವಣೆ ನಡೆಯಲಿದ್ದು, 13ರಂದು ಫಲಿತಾಂಶ ಹೊರಬೀಳಲಿದೆ. ಈಗಾಗಲೇ ರಾಜಕೀಯ ನಾಯಕರು ರಾಜ್ಯದ ಮೂಲೆ ಮೂಲೆಗೂ ತಿರುಗಿ, ಅಬ್ಬರದ ಪ್ರಚಾರ ನಡೆಸಿದ್ದು, ಬಹಿರಂಗ ಪ್ರಚಾರಕ್ಕೆ ಇಂದು ಕಡೆಯ ದಿನವಾಗಿದೆ. ಈ ಮಧ್ಯೆ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಿಸಿ, ಕಾಂಗ್ರೆಸ್ ನೀಡಿರುವ ಜಾಹಿರಾತನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು ನೀತಿ ಸಂಹಿತೆ ಉಲ್ಲಂಘನೆ ದೂರಿನ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.

ಕಾಂಗ್ರೆಸ್ ಮಾಡಿರುವ ನಿರ್ದಿಷ್ಟ ಆರೋಪಗಳ ಕುರಿತಾಗಿ ಸಾಕ್ಷ್ಯಾಧಾರ ಹಾಜರುಪಡಿಸುವಂತೆ ತಾಕೀತು ಮಾಡಿತ್ತು. ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದರು. ರೇಟ್ ಕಾರ್ಡ್ ಕೊಟ್ಟಿದ್ದು ನಾನಲ್ಲ, ಬಿಜೆಪಿಯವರೇ. ರೇಟ್ ಕಾರ್ಡ್ ನೀಡಿದ್ದು ಯತ್ನಾಳ್, ಗೂಳಿಹಟ್ಟಿ ಶೇಖರ್, ಹೆಚ್.ವಿಶ್ವನಾಥ್ ಎಂದು ಡಿಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದರು. ಸಿಎಂ ಸ್ಥಾನಕ್ಕೆ ರೇಟ್ ಎಷ್ಟು ಎಂಬುವುದನ್ನು ಬಿಜೆಪಿಯವರೇ ಹೇಳಿದ್ದಾರೆ. ಮಂತ್ರಿ ಸ್ಥಾನಕ್ಕೆ ಎಷ್ಟು ರೇಟ್, ಮಠಗಳ ಸ್ವಾಮೀಜಿಗಳಿಂದ ಎಷ್ಟು ರೇಟ್. ಈ ರೇಟ್ ಕಾರ್ಡ್ ನೀಡಿದ್ದು ಬಿಜೆಪಿಯವರೇ. ಬಿಜೆಪಿಯವರೇ ನೀಡಿದ ರೇಟ್ ಕಾರ್ಡ್ನ್ನು ನಾವು ನೀಡಿದ್ದೇವೆ ಅಷ್ಟೇ ಎಂದಿದ್ದರು. ಸದ್ಯ ಈಗ ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟಿದ್ದು ಕ್ರಿಮಿನಲ್ ಡಿಫಾಮೇಷನ್ ಲೀಗಲ್ ನೋಟಿಸ್ ನೀಡಿದೆ. ಸೋಮವಾರದೊಳಗೆ ಜಾಹೀರಾತು ಹಿಂಪಡೆದು ಕ್ಷಮೆಯಾಚಿಸಬೇಕು. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕಾಂಗ್ರೆಸ್ ನಾಯಕರಿಗೆ ಲೀಗಲ್ ನೋಟಿಸ್ ಕಳಿಸಲಾಗಿದೆ.