ಧಾರವಾಡ (Dharwad): ಕರ್ನಾಟಕ ರತ್ನ (Karnataka Ratna) ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಗೆ (Dr. Puneeth Rajkumar Hrudaya Jyothi Yojana) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಚಾಲನೆ ನೀಡಿದರು.
ಇಂದು ಧಾರವಾಡದಲ್ಲಿ ಯೋಜನೆಗೆ ಚಾಲನೆ ನೀಡಿದ ಸಚಿವರು ಪುನೀತ್ ರಾಜಕುಮಾರ್ ಅವರನ್ನ ನೆನಪಿಸಿಕೊಂಡರು.
ಹಠಾತ್ ಹೃದಯಾಘಾತಗಳನ್ನ ತಡೆಯುವಲ್ಲಿ ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಮಹತ್ತರ ಪಾತ್ರ ವಹಿಸಲಿದೆ. ಜನರ ಜೀವ ಉಳಿಸುವ ಇಂಥಹ ಕಾರ್ಯಕ್ರಮಗಳಿಗೆ ಪುನೀತ್ ರಾಜಕುಮಾರ್ ಅವರು ಮೇಲಿಂದಲೇ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೇ ಹಠಾತ್ ಹೃದಯಘಾತ ಆಗದಂತೆ ಜೀವರಕ್ಷಕ ಚುಚ್ಚುಮದ್ದುಗಳನ್ನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದಯಾಘಾತ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದುಬಾರಿ ಬೆಲೆಯ ಚುಚ್ಚುಮದ್ದು ಟೆನೆಕ್ಟೆಪ್ಲೇಸ್ ಅನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಉಚಿತವಾಗಿ ಪಡೆಯಬಹುದಾಗಿದೆ. ನಮ್ಮ ಗ್ರಾಮೀಣ ಪ್ರದೇಶದ ಜನರು ಇದರ ಉಪಯೋಗ ಪಡೆದುಕೊಳ್ಳಿ. ಯಾರಿಗೇ ಎದುನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಇಸಿಜಿ ಮಾಡಿಸಿಕೊಳ್ಳಿ ದಿನೇಶ್ ಗುಂಡೂರಾವ್ ಮನವಿ ಮಾಡಿದರು.
ಏನಿದು ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ?
ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಹೃದಯಾಘಾತದಿಂದ ಜನರ ಜೀವ ರಕ್ಷಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, 71 ತಾಲೂಕು ಆಸ್ಪತ್ರೆಗಳು ಸೇರಿದಂತೆ ಒಟ್ಟು 86 ಸರ್ಕಾರಿ ಆಸ್ಪತ್ರೆಗಳನ್ನ ಸ್ಪೋಕ್ ಕೇಂದ್ರಗಳನ್ನಾಗಿ ಹಾಗೂ ಜಯದೇವ ಸೇರದಂತೆ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನ ಹಬ್ ಕೇಂದ್ರಗಳನ್ನಾಗಿ ರಚಿಸಲಾಗಿದೆ. ಎದೆನೋವು ಕಾಣಿಸಿಕೊಂಡವರು ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ 6 ನಿಮಿಷದೊಳಗೆ ಅವರ ಕಂಡಿಷನ್ ಕ್ರಿಟಕಲ್ ಹಂತದಲ್ಲಿದೆಯೋ ಇಲ್ಲವೋ ಎಂಬುದನ್ನ AI ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಲಾಗುವುದು.

Tricog ಸಂಸ್ಥೆಯವರ AI ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ನಡೆಸಿ, ಎದೆನೋವು ಕಾಣಿಸಿಕೊಂಡವರ ಇಸಿಜಿ (ECG) ಪರೀಕ್ಷೆಯಲ್ಲಿ ತೀವ್ರ ಹೃದಯಾಘಾತವಾಗುವ ಮೂನ್ಸೂಚನೆಯನ್ನ ನೀಡುತ್ತಾರೆ. ಕ್ರಿಟಿಕಲ್ ಎಂದು ಖಚಿತವಾದ ತಕ್ಷಣವೇ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಅನ್ನ ಸ್ಪೋಕ್ ಕೇಂದ್ರಗಳಾದ ತಾಲೂಕು ಆಸ್ಪತ್ರೆಯಲ್ಲೇ ನೀಡಲಾಗುವುದು. ಇದರಿಂದ ಹಠಾತ್ ಹೃದಯಾಘಾತವನ್ನ ತಡೆಯುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಅತ್ಯಾಧುನಿಕ ಅಂಬ್ಯುಲೆನ್ಸ್ ನಲ್ಲಿ ಹಬ್ ಕೇಂದ್ರಳಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಳಿಸಿಕೊಡಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿಯೂ ಉಚಿತ ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಗೋಲ್ಡನ್ ಹವರ್ ಒಳಗಡೆ ಜೀವ ಉಳಿಸುವ ಚಿಕಿತ್ಸೆ ದೊರೆಯುವಂತೆ ಯೋಜನೆ ರೂಪಿಸಲಾಗಿದೆ.
ಮೊದಲ ಹಂತದಲ್ಲಿಯೇ ಗಮನ ಸೆಳೆದ ಯೋಜನೆ
ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಮೊದಲನೇ ಹಂತದಲ್ಲಿ STEMI ಹೆಸರಲ್ಲಿ ಹಬ್ ಸ್ಪೋಕ್ ಮಾದರಿಯನ್ನ ಜಯದೇವ (Jayadeva) ಹೃದ್ರೋಗ ಸಂಸ್ಥೆಯೊಂದಿಗೆ 45 ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿತ್ತು. ಆದರೆ ಮೊದಲ ಹಂತದ ಯೋಜನೆಯಲ್ಲಿ ಜೀವರಕ್ಷಕವಾಗಿರುವ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಲಭ್ಯವಿರಲಿಲ್ಲ. ಇಂದಿನಿಂದ ಈ ಚುಚ್ಚುಮದ್ದು ಲಭ್ಯವಾಗಲಿ̧ದ್ದು, ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ಸೇವೆ ಒದಗಿಸುವಲ್ಲಿ ಅನುಕೂಲವಾಗಲಿದೆ.

ಮೊದಲ ಹಂತದಲ್ಲಿ ಇಲ್ಲಿಯವರೆವಿಗೂ ಸುಮಾರು 1,23,607 ಹೃದಯ ಸಂಬಂಧಿ ರೋಗ ಲಕ್ಷಣ ಹೊಂದಿರುವವರನ್ನು ಈ ಕೇಂದ್ರಗಳಲ್ಲಿ ತಪಾಸಣೆ ಮಾಡಲಾಗಿದ್ದು, 1,27,999 ECG ಗಳನ್ನು ತೆಗೆಯಲಾಗಿದೆ ಮತ್ತು 2,088 ಹೃದಯಾಘಾತ ರೋಗಿಗಳಿಗೆ ಉನ್ನತ ಮಟ್ಟದ ಹಬ್ ಆಸ್ಪತ್ರೆಗಳಲ್ಲಿ 511 ಥಂಬೋಲಿಸಿಸ್, 371 ಆಂಜಿಯೋಪ್ಲಾಸ್ಟಿ, ಮತ್ತು 07 ಬೈಪಾಸ್ ಸರ್ಜರಿಗಳನ್ನ ನಡೆಸಲಾಗಿದೆ. ಇನ್ನು ಉಳಿದವರು ಔಷಧಿ ಚಿಕಿತ್ಸೆಯನ್ನು ಮುಂದುರೆಸಿರುತ್ತಾರೆ.
ಕಾರ್ಯಕ್ರಮದ ಎರಡನೇ ಹಂತದ ವಿವರ
15 ಜಿಲ್ಲೆಗಳಲ್ಲಿ – 8 HUBs (ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬಾಗಲಕೋಟೆ, ಮತ್ತು ಬಳ್ಳಾರಿ ಹಬ್)
41 SPOKES (05 ಜಿಲ್ಲಾ ಮತ್ತು 36 ತಾಲ್ಲೂಕು, ಆಸ್ಪತ್ರೆಗಳಲ್ಲಿ)
ರಾಜ್ಯದ 71 ತಾಲೂಕು ಆಸ್ಪತ್ರೆಗಳು, 15 ಜಿಲ್ಲಾಸ್ಪತ್ರೆಗಳಲ್ಲಿ ಯೋಜನೆ ಜಾರಿ, ಹಠಾತ್ ಹೃದಯಾಘಾತ ತಡೆಗೆ ತಾಲೂಕು ಆಸ್ಪತ್ರೆಗಳಲ್ಲೇ ಚಿಕಿತ್ಸೆ
ಹಠಾತ್ ಹೃದಯಾಘಾತ ರೋಗಿಗಳ ಚಿಕಿತ್ಸೆಗಾಗಿ ಹೆಚ್ಚು ಪರಿಣಾಮಕಾರಿಯಾದ ಔಷಧಿ 25,000/- ರಿಂದ ರೂ.30,000 ಸಾವಿರ ಮೌಲ್ಯದ Injection Tenecteplase (30mg, 40mg) ಎಲ್ಲಾ ತೀವ್ರ ಹೃದಯಾಘಾತ ರೋಗಿಗಳಿಗೆ SPOKES ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ನೀಡಲಾಗುತ್ತದೆ. ಹೃದಯಾಘಾತ ರೋಗಿಗಳ ಉತ್ತಮ ಹಾಗೂ ಗುಣ ಮಟ್ಟದ ನಿರ್ವಹಣೆಗಾಗಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ 2 ದಿವಸದ CCLS (Coronary Care Life Support) ತರಬೇತಿಯನ್ನು ಮತ್ತು 01 ದಿನದ STLS (Safe Transport Life Support) ತರಬೇತಿಯನ್ನು ಜೀವರಕ್ಷ ಟ್ರಸ್ಟ್ ವತಿಯಿಂದ ನೀಡಲಾಗುವುದು.

41 AED – Automated External Defibrillator ಸಾಧನಗಳನ್ನು ಜನದಟ್ಟನೆಯ ಸಾರ್ವಜನಿಕ ಸ್ಥಳಗಳಲ್ಲಿ (ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು, ನ್ಯಾಯಾಲಯ ಸಂಕೀರ್ಣಗಳು ಆಸ್ಪತ್ರೆಗಳಲ್ಲಿ) ಹಠಾತ್ ಹೃದಯಾಘಾತ ದಿಂದಾಗುವ ಮರಣಗಳನ್ನು ತಪ್ಪಿಸಲು 2ನೇ ಹಂತದ ಪ್ರಮುಖ ಅಂಶವಾಗಿದ್ದು ಅತಿ ಶೀಘ್ರದಲ್ಲಿ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
#karnataka #bengaluru #DrPuneethRajkumarHrudayaJyothiYojana #puneethrajkumar #dineshgundurao #cardiacarrest