ಮೈಸೂರು: ರಾಜ್ಯದಲ್ಲಿ ಬರ ಇರುವುದರಿಂದ ಈ ಬಾರಿ ಸಾಂಪ್ರದಾಯಿಕವಾಗಿ ದಸರಾ ಮಹೋತ್ಸವ ಆಚರಿಸಲಾಗುತ್ತಿದೆ. ಆದರೆ, ಬರದ ನೆಪದಲ್ಲಿ ಪ್ರವಾಸೋದ್ಯಮಕ್ಕೆ ಹೊಡೆತ ಬೀಳಬಾರದೆಂಬ ಉದ್ದೇಶದಿಂದ ಜಿಲ್ಲಾಡಳಿತ ಪ್ರಾಯೋಜಕತ್ವದಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿದೆ. ಅದರಂತೆ ಕೆಲವು ಖಾಸಗಿ ಕಂಪನಿಗಳು, ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿದೆ. ಕಳೆದ ವರ್ಷ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಒಟ್ಟು 26 ಕೋಟಿ ರೂ. ಖರ್ಚಾಗಿತ್ತು. ಈ ವರ್ಷವೂ 30 ಕೋಟಿ ರೂ. ವೆಚ್ಚದಲ್ಲಿದಸರಾ ಮಹೋತ್ಸ ವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಮುಂದಾಗಿತ್ತು.

ಆದರೆ, ಬರದ ಹಿನ್ನೆಲೆಯಲ್ಲಿಸರಕಾರ ಅದ್ಧೂರಿ ದಸರಾ ಕೈಬಿಟ್ಟು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಿದೆ. ಹೀಗಾಗಿ ರಾಜ್ಯ ಸರಕಾರದಿಂದ ಎಷ್ಟು ಅನುದಾನ ಸಿಗಬಹುದೆಂಬ ನಿಖರ ಮಾಹಿತಿ ಲಭ್ಯವಿಲ್ಲದ ಕಾರಣ ಜಿಲ್ಲಾಡಳಿತ ಪ್ರಾಯೋಜಕತ್ವದ ಮೊರೆ ಹೋಗುವಂತಾಗಿದೆ. ಈಗಾಗಲೇ ಕಡಿಮೆ ಅಂದಾಜು ವೆಚ್ಚದ ಕಾರ್ಯಕ್ರಮ ರೂಪಿಸುತ್ತಿರುವ ಜಿಲ್ಲಾಡಳಿತ ಅನಗತ್ಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದೆ.