ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ವಿರೋಧ ಪಕ್ಷದ ನಾಯಕ ಆಗುವುದು ಕನ್ಫರ್ಮ್ ಆಗಿದ್ಯಾ..? ಹೀಗೊಂದು ಅನುಮಾನ ಬರುವುದಕ್ಕೆ ಕಾರಣ ಹಾಲಿ ಸಚಿವ ಎಂ.ಬಿ ಪಾಟೀಲ್ ಟ್ವೀಟ್. ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕ ಆಗಲಿರುವ ಶ್ರೀ ಕುಮಾರಸ್ವಾಮಿ ಅವರಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಸಚಿವ ಎಂಬಿ ಪಾಟೀಲ್, ಕರ್ನಾಟಕ ಬಿಜೆಪಿ ಬಸವರಾಜ ಬೊಮ್ಮಾಯಿ ಅವರನ್ನು ಮೂಲೆಗುಂಪು ಮಾಡಲು ನಿರ್ಧಾರ ಮಾಡಿದೆ. ಬಸವರಾಜ ಬೊಮ್ಮಾಯಿ ಅವರಿಗೂ ಜಗದೀಶ್ ಶೆಟ್ಟರ್ ಹಾಗು ಬಿ.ಎಸ್ ಯಡಿಯೂರಪ್ಪ ಅವರಿಗೆ ಬಂದ ಸ್ಥಿತಿಯೇ ಬರಲಿದೆ ಎಂದು ರಾಜ್ಯ ಬಿಜೆಪಿಯನ್ನು ಕುಟುಕಿದ್ದಾರೆ.
ಕಾಂಗ್ರೆಸ್ ಸೇರುವಂತೆ ಬಸವರಾಜ ಬೊಮ್ಮಾಯಿಗೆ ಆಹ್ವಾನ..!
ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ನಾಯಕರುಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಪರೋಕ್ಷವಾಗಿ ಹೇಳಿರುವ ಸಚಿವ ಎಂಬಿ ಪಾಟೀಲ್, ಕಾಂಗ್ರೆಸ್ ಸೇರುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಸಲಹೆ ನೀಡಿದ್ದಾರೆ. ಬಿಜೆಪಿ ಎಂಬುದು ಕುಸಿಯುವ ಕಾರ್ಡ್ಗಳ ಮನೆ ಆಗಿದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದಿನಂತೆ ಜಾತ್ಯಾತಿತ ನಿಲುವುಗಳಿಗೆ ವಾಪಸ್ ಆದರೆ ಕಾಂಗ್ರೆಸ್ ಹೈಕಮಾಂಡ್ ಕೂಡ ಪರಿಗಣಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತದೆ ಯೋಜನೆ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಲಿಂಗಾಯತ ನಾಯಕರನ್ನು ಬೆಳೆಯುವುದಕ್ಕೆ ಬಿಡಲ್ಲ, ಬಿಜೆಪಿಯಲ್ಲಿ ಕೇವಲ ಬ್ರಾಹ್ಮಣ ನಾಯಕರಿಗೆ ಮಾತ್ರ ಆದ್ಯತೆ ಎಂದು ಕಿಚಾಯಿಸಿದ್ದಾರೆ.
ಕುಮಾರಸ್ವಾಮಿ ವಿಪಕ್ಷ ನಾಯಕ ಕಾನೂನು ಏನು ಹೇಳುತ್ತೆ..!?
ಮಾಜಿ ಸಿಎಂ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕನಾಗಲು ಕಾನೂನಿನಲ್ಲಿ ಅವಕಾಶವಿದ್ಯಾ..? ಅನ್ನೋ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕುಮಾರಸ್ವಾಮಿ ಜಯಗಳಿಸಿದ್ದು ಜೆಡಿಎಸ್ ಚಿಹ್ನೆಯಿಂದ. ವಿಧಾನಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸಿರುವುದು ಬಿಜೆಪಿ. ಹೀಗಿರುವಾಗ ಕುಮಾರಸ್ವಾಮಿ ಅವರು ವಿಪಕ್ಷ ನಾಯಕನಾಗಲು ತಾಂತ್ರಿಕ ಸಮಸ್ಯೆ ಆಗುವುದಿಲ್ಲವೇ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಮಾತನಾಡಿರುವ ಮಾಜಿ ಕಾನೂನು ಸಚಿವ ಟಿ.ಬಿ ಜಯಚಂದ್ರ, ವಿಧಾನಸಭೆ ಒಳಗೆ ಸಂಖ್ಯಾಬಲದ ಆಧಾರದಲ್ಲಿ ಆಯ್ಕೆ ಮಾಡುವ ಕಾರಣದಿಂದ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಆಗಲು ಯಾವುದೇ ಸಮಸ್ಯೆ ಇಲ್ಲ. ಸಂಖ್ಯಾಬಲ ಅಷ್ಟೇ ಮುಖ್ಯವಾಗುತ್ತದೆ. ಸಂವಿಧಾನದಲ್ಲಿ ಈ ರೀತಿಯ ಆಯ್ಕೆ ಮಾಡಲು ಅವಕಾಶವಿದೆ ಎಂದಿದ್ದಾರೆ.
ಬಿಜೆಪಿಯಲ್ಲಿ ಲಿಂಗಾಯತ ನಾಯಕರಿಗೆ ಮಾನ್ಯತೆ ಯಾಕಿಲ್ಲ..?
ಸಚಿವ ಎಂ.ಬಿ ಪಾಟೀಲ್ ಮಾಡಿರುವ ಟ್ವೀಟ್ ಲಿಂಗಾಯತ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡಿದೆ. ಹೌದು, ಲಿಂಗಾಯತ ನಾಯಕರನ್ನು ಬಿಜೆಪಿ ಹೈಕಮಾಂಡ್ ಬೇಕಾದಾಗ ಬಳಸಿ ಬಿಸಾಡುತ್ತಿರುವುದು ಏಕೆ..? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುವಂತಾಗಿದೆ. ಎಂಬಿ ಪಾಟೀಲ್, ಕೊಟ್ಟಿರುವ ನಿದರ್ಶನಗಳನ್ನೇ ನೋಡುವುದಾದರೆ ಮಾಜಿ ಸಿಎಂ ಯಡಿಯೂರಪ್ಪ ಇಡೀ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕ. ಆದರೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸೂಕ್ತ ಸ್ಥಾನಮಾನ ಕೊಡಲಿಲ್ಲ.
ಹೈಕಮಾಂಡ್ಗೆ ಸಡ್ಡು ಹೊಡೆದು ಪಡೆದುಕೊಂಡರು. ಇನ್ನು ಮತ್ತೋರ್ವ ಮಾಜಿ ಸಚಿವ ಜಗದೀಶ್ ಶೆಟ್ಟರ್ಗೆ ಬೇಕೆಂದೇ ಮೂಲೆಗುಂಪು ಮಾಡುವ ಪ್ರಯತ್ನ ನಡೀತು. ಆ ಬಳಿಕ ಅವರು ಕಾಂಗ್ರೆಸ್ ಕಡೆಗೆ ಹೊರಟರು. ಇದೀಗ ಇನ್ನೋರ್ವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿರೋಧ ಪಕ್ಷದ ನಾಯಕನಾಗ್ತಾರೆ ಎಂದುಕೊಂಡಿದ್ದರೆ ಅದೂ ಸುಳ್ಳಾಗುತ್ತಿದೆ. ಒಕ್ಕಲಿಗ ಸಮುದಾಯದ ಕುಮಾರಸ್ವಾಮಿ ಕಡೆಗೆ ಬಿಜೆಪಿ ನಾಯಕರ ಕಣ್ಣು ಹೊರಳಿದೆ ಎನ್ನಲಾಗ್ತಿದೆ. ಮುಂದಿನ ದಿನಗಳಲ್ಲಿ ಇನ್ಯಾವ ತಿರುವು ಪಡೆಯುತ್ತದೆ ಕಾದು ನೋಡೋಣ..
ಕೃಷ್ಣಮಣಿ