ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಸತತ ಆರೋಪಗಳನ್ನೇ ಮಾಡುತ್ತ ಬಂದಿರುವ ಕೆ ಆರ್ ನಗರದ ಜೆ ಡಿ ಎಸ್ ಶಾಸಕ ಸಾ ರಾ ಮಹೇಶ್ ಅವರು ಜೂನ್ 5ರಂದು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ಸುದೀರ್ಘವಾದ ಪತ್ರವೊಂದನ್ನು ಬರೆದಿದ್ದರು. ‘ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯಿಲ್ಲದೆ ‘ ಜಿಲ್ಲಾದಿಕಾರಿಗಳ ನಿವಾಸ ಜಲಸನ್ನಿಧಿ’ಯಲ್ಲಿ ನವೀಕರಣ ಕಾಮಗಾರಿ ನಡೆಸಿ, ನೆಲಹಾಸಿಗೆ ವಿಟ್ರಿಫೈಡ್ ಟೈಲ್ಸ್ ಅಳವಡಿಸಿದ ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಅಮಾನತುಗೊಳಿಸಬೇಕು’ ಎಂದು ಸಾ.ರಾ.ಮಹೇಶ್ ಆ ಪತ್ರದಲ್ಲಿ ಆಗ್ರಹಿಸಿದ್ದರು. ಯಾವ್ಯಾವ ನಿಯಮಾವಳಿ ಉಲ್ಲಂಘನೆಯಾಗಿದ್ದವು ಎಂಬುದನ್ನು ಉಲ್ಲೇಖಿಸಿದ್ದರು.ಶಾಸಕರ ಈ ದೂರಿನ ಅನ್ವಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತನಿಖೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ಜೂನ್ 18ರಂದು ಆದೇಶಿಸಿದ್ದಾರೆ. ಇದರಿಂದ ರೋಹಿಣಿ ಸಿಂಧೂರಿಗೆ ಮತ್ತೊಂದು ತನಿಖೆಯ ಕಂಟಕ ಎದುರಾಗಿದೆ. ಈ ನವೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಏಳು ದಿನದೊಳಗೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರಿಗೆ ಆದೇಶಿಸಿದ್ದಾರೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಹಲವು ಆರೋಪಗಳನ್ನು ಮಾಡುವ ಮೂಲಕ ಮಾತಿನ ಸಮರ ನಡೆಸುತ್ತಿದ್ದ ಮೈಸೂರಿನ ರಾಜಕೀಯ ನಾಯಕರು ಇದೀಗ ನಿರ್ಗಮಿತ ಜಿಲ್ಲಾಧಿಕಾರಿ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ಮೈಸೂರಿನ ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದ ಅವರ ವಿರುದ್ಧ ಜಟಾಪಟಿ ನಡೆಸುತ್ತಿದ್ದ ಶಾಸಕ ಸಾ.ರಾ. ಮಹೇಶ್ ಹಾಗೂ ಚಾಮರಾಜನಗರದ ಬಿಜೆಪಿ ಮುಖಂಡ ಮಲ್ಲೇಶ್, ನಿರ್ಗಮಿತ ಜಿಲ್ಲಾಧಿಕಾರಿ ವಿರುದ್ಧ ದೂರು ನೀಡುವ ಮೂಲಕ, ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಸಮರ ಸಾರಿದ್ದಾರೆ. ದೇಶದ ಗಮನ ಸೆಳೆದಿದ್ದ ಚಾಮರಾಜನಗರದ ಆಕ್ಸಿಜನ್ ದುರಂತ ಪ್ರಕರಣಕ್ಕೆ ರೋಹಿಣಿ ಸಿಂಧೂರಿ ಅವರೇ ಕಾರಣ ಎಂದಿದ್ದ ಚಾಮರಾಜನಗರದ ಬಿಜೆಪಿ ಮುಖಂಡ, ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ತನಿಖಾಧಿಕಾರಿಗೆ ದೂರು ನೀಡಿದ್ದಾರೆ. ಆಕ್ಸಿಜನ್ ದುರಂತದ ತನಿಖೆಗೆ ಸರ್ಕಾರ ನೇಮಕ ಮಾಡಿರುವ ಬಿ.ಎ.ಪಾಟೀಲ್ ಸಮಿತಿಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮನವಿ ಪತ್ರ, ಪೆನ್ಡ್ರೈವ್ ಹಸ್ತಾಂತರ ಮಾಡಿದ್ದಾರೆ.
ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೇಮಿಸಿದ್ದ ವೇಣುಗೋಪಾಲ್ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಇದರಲ್ಲಿ ರೋಹಿಣಿ ಸಿಂಧೂರಿ ತಪ್ಪಿಲ್ಲ ಅಂತ ಹೇಳಲಾಗಿದೆ. ಆದರೆ ಅವರು ಇದುವರೆಗೂ ಚಾಮರಾಜನಗರಕ್ಕೆ ಬಂದು ತನಿಖೆ ಮಾಡಿಲ್ಲ ಹಾಗೂ ಪ್ರತಿವಾದಿಗಳ ಹೇಳಿಕೆ ದಾಖಲಿಸಿಕೊಂಡಿಲ್ಲ. ಅಲ್ಲದೇ ಸರ್ಕಾರ ನೇಮಿಸಿರುವ ಬಿ.ಎ.ಪಾಟೀಲ್ ಹಾಗೂ ಶಿವಯೋಗಿ ಕಳಸದ್ ಅವರಿಂದಲೂ ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ ಪ್ರಕರಣದಲ್ಲಿ ಸಂಭವಿಸಿದ 24 ಸಾವುಗಳು ರೋಹಿಣಿ ಸಿಂಧೂರಿ ಮಾಡಿದ ಕೊಲೆಯಾಗಿದ್ದು, ಅವರ ವಿರುದ್ಧ ಐಪಿಸಿ ಕಾಯ್ದೆ 302 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಬೇಕು. ಜತೆಗೆ ರೋಹಿಣಿ ಸಿಂಧೂರಿ ಅವರ ಸ್ವಂತ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮೃತ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ. ಮಹೇಶ್ ನಡುವೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪದ ಜಟಾಪಟಿ ಇದೀಗ ಕಾನೂನಿನ ಮೆಟ್ಟಿಲೇರಿದೆ. ತಮ್ಮ ವಿರುದ್ಧ ಭೂ ಒತ್ತುವರಿ ಆರೋಪ ಮಾಡಿರುವ ನಿರ್ಗಮಿತ ಜಿಲ್ಲಾಧಿಕಾರಿ ವಿರುದ್ಧ ತೊಡೆತಟ್ಟಿರುವ ಸಾ.ರಾ.ಮಹೇಶ್, ಮೈಸೂರು ಜಿಲ್ಲಾಧಿಕಾರಿ ಅಧಿಕೃತ ಸರಕಾರಿ ನಿವಾಸದ ನವೀಕರಣಕ್ಕೆ ಪಾರಂಪರಿಕ ಸಂರಕ್ಷಣಾ ಸಮಿತಿ ಅನುಮತಿ ಇಲ್ಲದೆ ಕಟ್ಟಡ ನವೀಕರಿಸಿ, ನಿವಾಸದ ನೆಲ ಹಾಸಿಗೆಯ ನವೀಕರಣ ಮಾಡಲಾಗಿದೆ. ಇದರ ತನಿಖೆಗೆ ಒತ್ತಾಯಿಸಿ ದೂರು ನೀಡುವ ಮೂಲಕ ತಿರುಗೇಟು ನೀಡಿದ್ದಾರೆ. ಶಾಸಕ ಸಾ.ರಾ. ಮಹೇಶ್ ನೀಡಿರುವ ದೂರಿನ ಅನ್ವಯ ಈಗಾಗಲೇ ತನಿಖೆಗೆ ಮುಂದಾಗಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಶಾಸಕರು ನೀಡಿರುವ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ಆದೇಶ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸಿ 7 ದಿನಗಳ ಒಳಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಪ್ರಧಾನ ಕಾರ್ಯದರ್ಶಿಗಳು ಮೈಸೂರು ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.
ಒಟ್ಟಾರೆ ರೋಹಿಣಿ ಸಿಂಧೂರಿ ಮೈಸೂರಿನಿಂದ ವರ್ಗಾವಣೆಯಾಗಿ ಹೋದರು ಅವರ ಮೇಲೆ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ನಾಯಕರ ಸಿಟ್ಟು ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ನಿರ್ಗಮಿತ ಡಿಸಿ ವಿರುದ್ಧ ಸ್ಥಳೀಯ ರಾಜಕೀಯ ನಾಯಕರು, ಕಾನೂನು ಹೋರಾಟದ ಅಸ್ತ್ರ ಪ್ರಯೋಗಿಸಿದ್ದು, ತಮ್ಮ ಎದುರಾಳಿಗಳ ತಂತ್ರಕ್ಕೆ ರೋಹಿಣಿ ಸಿಂಧೂರಿ ಯಾವ ಪ್ರತಿತಂತ್ರ ಹುಡುಕುತ್ತಾರೆ? ಎಂಬುದು ಎಲ್ಲರಲ್ಲಿ ಕುತೂಹಲ ಸೃಷ್ಟಿಸಿದೆ.
ತಮ್ಮ ಕಾರ್ಯವೈಖರಿಯಿಂದ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಎಸ್ ಅಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದರು. ಮೈಸೂರಿನ ಪಾಸಿಟಿವ್ ರೇಟ್ ಇಡೀ ರಾಜ್ಯದಲ್ಲೇ ಹೆಚ್ಚಿತ್ತು. ಮೇ ತಿಂಗಳಲ್ಲೇ ಶೇ28 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇತ್ತು. ಇದು ಸರಿಹೋಗಬೇಕು ಅಂತಲೇ ಇಡೀ ಆಡಳಿತ ವ್ಯವಸ್ಥೆ ಹಳ್ಳಿ ಕಡೆ ಹೋಗಬೇಕು ಎಂದಿದ್ದೆ. ನನ್ನ ಮಾತು ಇವತ್ತು ಮಾಧ್ಯಮದವರಿಗೂ ಅರಿವಾಗಿದೆ. ಮೈಸೂರಿನಲ್ಲಿ ಮೇ ತಿಂಗಳು ಒಂದರಲ್ಲೇ ಸಾವಿರಕ್ಕಿಂತ ಹೆಚ್ಚು ಜನ ಬಲಿಯಾಗಿದ್ದಾರೆ.
ಗ್ರಾಮಾಂತರ ಭಾಗದಿಂದ ಕ್ರಿಟಿಕಲ್ ಕಂಡೀಷನ್ ಇರುವವರು ಇಲ್ಲಿ ಬಂದು ತೀರಿಕೊಳ್ತಿದ್ದಾರೆ. ಇದರ ನಡುವೆ ಸರಿಯಾದ ಯೋಜನೆ ಮಾಡದೇ ಪಾಸಿಟಿವ್ ರೇಟ್ ಹೆಚ್ಚಾಗಿರೋದು ಬೇಸರ ತಂದಿದೆ. ಈಗ ಸಹ 10ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇದ್ದು, ಸರಿಪಡಿಸಬೇಕಿದೆ.. ಇದಕ್ಕಾಗಿ ಕಳೆದ 10ದಿನಗಳಿಂದ ಸಮರೋಪಾದಿಯಲ್ಲಿ ಕೆಲಸ ಮಾಡ್ತಿದ್ದೀವಿ ಎಂದರು. ಇದೇ ವೇಳೆ ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಅಧಿಕಾರಿಗಳನ್ನ ಜೊತೆಗೆ ತೆಗೆದುಕೊಂಡು ಕೆಲಸ ಮಾಡ್ತಿದ್ದಾರೆ. ಶೀಘ್ರದಲ್ಲೇ ಪಾಸಿಟಿವಿಟಿ ರೇಟ್ 5ಕ್ಕಿಂತ ಕಡಿಮೆ ಮಾಡಿ ಅನ್ಲಾಕ್ ಮಾಡುವಂತೆ ಕೆಲಸ ಮಾಡ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.