

ಮೇಲಿನ ಹೆಡ್ಲೈನ್ ನೋಡಿ ಶಾಕ್ ಆಗಬೇಡಿ, ಕೊಡಗಿನಲ್ಲಿ(Kodagu) ಧಾರಾಕಾರ ಮಳೆಯಾಯ್ತಾ ಅಂದುಕೊಳ್ಳಬೇಡಿ. ಆದರೆ ಪ್ರತಿವರ್ಷ ಈ ರೀತಿಯ ಹೆಡ್ಲೈನ್ ಕೆಲದಿನಗಳ ಕಾಲ ಕಾಯಂ. ಮಳೆಗಾಲ ಶುರುವಾದ ಬಳಿಕ ಭಾರೀ ಮಳೆಯ ಪರಿಣಾಮ ಕಾವೇರಿ ಭೋರ್ಗರೆದು ಹರಿಯುತ್ತಾಳೆ. ಅದರಲ್ಲೂ ಕಾವೇರಿಯ ಉಗಮಸ್ಥಾನ(Origin Of Kaveri) ಭಾಗಮಂಡಲದಲ್ಲಿ ಜಲಾವೃತವಾಗುವ ಪರಿಣಾಮ ವಾಹನ ಸಂಚಾರ ಮಾಡುವುದೂ ದುಸ್ತರ ಎನ್ನುವಂತಾಗುತ್ತದೆ. ಆದರೆ ಇನ್ಮುಂದೆ ಭಾಗಮಂಡಲ ಜಲಾವೃತ, ವಾಹನ ಸಂಚಾರ ನಿಷಿದ್ಧ ಎನ್ನುವ ಮಾತು ಕೇಳಿಬರುವುದಿಲ್ಲ. ಆದರೆ ಭಾಗಮಂಡಲದಲ್ಲಿ ತುಂಬಿ ಹರಿಯುವ ನದಿಯನ್ನು ಕಣ್ತುಂಬಿಕೊಳ್ಳುವ ಅವಕಾಶವೊಂದು ತೆರೆದುಕೊಂಡಿದೆ.

ಹಾಲಿ ಇಂಧನ ಸಚಿವರಾಗಿ ಕೆಲಸ ಮಾಡುತ್ತಿರುವ ಕೆ.ಜೆ ಜಾರ್ಜ್, 2018ರಲ್ಲೂ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ ಜಾರ್ಜ್ ಅವರ ದೂರದೃಷ್ಟಿ ಯೋಜನೆ ಇಂದು ಸಾಕಾರಗೊಂಡಿದೆ. ಭಾಗಮಂಡಲದಲ್ಲಿ 880 ಮೀಟರ್ ಉದ್ದದ ಮೇಲ್ಸೇತುವೆ ಯೋಜನೆಗೆ ಒಪ್ಪಿಗೆ ಪಡೆದಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಕೊಡಗಿನ ಜನರ ಸಂಕಷ್ಟಕ್ಕೆ ತೆರೆಬೀಳುವ ವಿಶ್ವಾಸ ಮೂಡಿಸಿದೆ.

ಭಾಗಮಂಡಲದ ಪ್ರವಾಹ ಪೀಡಿತ ಪ್ರದೇಶದಲ್ಲಿ ಅತ್ಯಂತ ಅಗತ್ಯವಾಗಿದ್ದ ಈ ಸೇತುವೆಯನ್ನು ನಿರ್ಮಿಸುವಲ್ಲಿ ಜಾರ್ಜ್ ಅವರ ಪ್ರಯತ್ನದ ಫಲ ಇಂದು ಮೇಲ್ಸೇತುವೆ ಕಾಮಗಾರಿ ಮುಕ್ತಾಯವಾಗಿದೆ. ಮಳೆಗಾಲದಲ್ಲಿ ಸದಾ ಒಂದಕ್ಕೊಂದು ಪ್ರದೇಶಗಳ ಸಂಪರ್ಕ ಕಡಿದುಕೊಳ್ಳುವ ಅಪಾಯ ಪ್ರತಿವರ್ಷವೂ ಎದ್ದು ಕಾಣುತ್ತಿತ್ತು. ಆದರೆ ಇದೀಗ ಮೇಲ್ಸೇತುವೆ ಉದ್ಘಾಟನೆಗೆ ಸಜ್ಜಾಗಿ ನಿಂತಿದ್ದಾರೆ. ನೂರಾರು ವರ್ಷಗಳಿಂದ ಮಳೆಗಾಲದಲ್ಲಿ ಜೀವ ಕೈಲಿಡಿದು ಸಂಚಾರ ಮಾಡುತ್ತಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

2018ರಲ್ಲಿ ಕೊಡಗು ಉಸ್ತುವಾರಿ ಸಚಿವರಾಗಿದ್ದ ಸಚಿವ ಕೆ.ಜೆ ಜಾರ್ಜ್, ಭಾಗಮಂಡಲ ಸಮಸ್ಯೆ ಬಗ್ಗೆ ಅರಿತುಕೊಂಡಿದ್ದರು. ಭಾಗಮಂಡಲ, ಚೇರಂಗಾಲ, ಕೋರಂಗಾಲ, ತಲಕಾವೇರಿ ಮತ್ತು ಅಯ್ಯಂಗೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳನ್ನು ಸಂಪರ್ಕಿಸಲು ಈ ಸೇತುವೆಯ ಅಗತ್ಯವನ್ನು ಸಂಪುಟದಲ್ಲಿ ಪ್ರಸ್ತಾಪಿಸಿದರು. ಮಳೆಗಾಲದಲ್ಲಿ ಈ ಪ್ರದೇಶದ ಜೀವನಾಡಿ ಕಾವೇರಿ ನದಿಯ ಆರ್ಭಟದಲ್ಲಿ ಈ ಪ್ರದೇಶಗಳ ಸಂಪರ್ಕ ಕಡಿತ ಆಗುವ ಬಗ್ಗೆ ಸರ್ಕಾರದ ಗಮನ ಸೆಳೆದು ಯೋಜನೆ ತಂದಿದ್ದರು. ಇದೀಗ ಸಚಿವ ಜಾರ್ಜ್ ಕಾರ್ಯ ಜನಮನ್ನಣೆ ಪಡೆಯುತ್ತಿದೆ.

ರಾಜಕೀಯ ನಾಯಕರು ಎನಿಸಿಕೊಂಡವರು ಜೀವನದಲ್ಲಿ ಸಾಕಷ್ಟು ರಾಜಕಾರಣ ಮಾಡುತ್ತಾರೆ. ಜೊತೆಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಾರೆ. ಆದರೆ ಅದರಲ್ಲಿ ಕೆಲವೊಂದು ಯೋಜನೆಗಳು ಭಾವನಾತ್ಮಕ ಸ್ಥಾನ ಪಡೆದುಕೊಳ್ಳುತ್ತವೆ. ತಮ್ಮ ಜೀವನದಲ್ಲಿ ಸಾರ್ಥಕತೆಯ ಮೈಲಿಗಲ್ಲು ಸ್ಥಾಪಿಸುತ್ತವೆ. ಅದೇ ರೀತಿ ಸಚಿವ ಕೆ.ಜೆ ಜಾರ್ಜ್ ಭಾಗಮಂಡಲ ಯೋಜನೆ ಮೂಲಕ ಸಾರ್ಥಕತೆ ಪಡೆದುಕೊಂಡಂತಿದೆ. ಆದರೂ ಶತಮಾನಗಳ ಸಮಸ್ಯೆಗೆ ಮುಕ್ತಿ ಕೊಟ್ಟಿರುವುದು ಆ ಭಾಗದ ಜನರ ನೆಮ್ಮದಿಗೆ ಕಾರಣವಾಗಿದೆ.

ಕೃಷ್ಣಮಣಿ