
ಅಮೃತಸರ : ಶ್ರೀಲಂಕಾದ ಇಬ್ಬರು ಪ್ರಜೆಗಳನ್ನು ಅಪಹರಿಸಿ, ಬಿಡುಗಡೆಗೊಳಿಸಲು ಅವರ ಸ್ನೇಹಿತರಿಂದ $8,000 ( ಸುಮಾರು 6.70 ಲಕ್ಷ ರೂ) ಬೇಡಿಕೆಯಿಟ್ಟ ಆರೋಪದ ಮೇಲೆ ಅಮೃತಸರ ಪೊಲೀಸರು ಇಬ್ಬರನ್ನು ಬುಧವಾರ ಬಂಧಿಸಿದ್ದಾರೆ. ಅಮೃತಸರ ಪೊಲೀಸ್ ಕಮಿಷನರ್ ಗುರುಪ್ರೀತ್ ಸಿಂಗ್ ಭುಲ್ಲರ್ ನೀಡಿದ ಮಾಹಿತಿಯ ಪ್ರಕಾರ, ಶ್ರೀಲಂಕಾದ ಆರು ಮಂದಿ—ಜೆಹಾನ್, ಕರ್ಬಿಕಾ, ಲಲಿತ್ ಪಿಯಾಂಥಾ, ಕನಿಷ್ಕಾ, ಸುಮರ್ಧನ್ ಮತ್ತು ನಿಲುಜತಿನ್—ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದರು. ದೆಹಲಿಯಲ್ಲಿದ್ದ ಶ್ರೀಲಂಕಾದ ಇನ್ನೊಬ್ಬ ವ್ಯಕ್ತಿ ಅಸಿತಾಳೊಂದಿಗೆ ಭೇಟಿ ನಂತರ ಅವರು ಅಮೃತಸರಕ್ಕೆ ಪ್ರಯಾಣಿಸಿದರು.

ಅವರು ಖಾಸಗಿ ಹೋಟೆಲ್ನಲ್ಲಿ ತಂಗಿದ್ದು, ಅಪಹರಣಕಾರರಾದ ಅಂಕಿತ್ ಮತ್ತು ಇಂದರ್ಜಿತ್ ಸಿಂಗ್ ಅವರ ಪರಿಚಯ ಮಾಡಿಕೊಂಡು ವಿಶ್ವಾಸ ಗಳಿಸಿದ್ದರು. ನಂತರ, ಇಬ್ಬರು ಆ ಪುರುಷ ಮತ್ತು ಮಹಿಳೆಯನ್ನು ಹೋಟೆಲ್ನಿಂದ ಅಪಹರಿಸಿ, ಮತ್ತೊಂದು ಸ್ಥಳಕ್ಕೆ ಕರೆದೊಯ್ದರು . ಅಪಹರಣಕಾರರು $8,000 ವಿಮೋಚನೆಗೆ ಒತ್ತಾಯಿಸಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಅಮೃತಸರ ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ಹೋಶಿಯಾರ್ಪುರ ಪೊಲೀಸರ ಸಹಕಾರದಿಂದ ಫೋನ್ ಟ್ರೇಸಿಂಗ್ ತಂತ್ರಜ್ಞಾನ ಬಳಸಿಕೊಂಡು ಅಪಹರಣಕಾರರನ್ನು ಪತ್ತೆ ಹಚ್ಚಿ ಬಂಧಿಸಿದರು. ಸಂತ್ರಸ್ತರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು.
ಮೂರನೇ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.ಇದರಲ್ಲಿ ಪ್ರಮುಖ ಆರೋಪಿ ಅಂಕಿತ್ನನ್ನು ಈ ಹಿಂದೆ ಕೆನಡದಿಂದ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. “ಶ್ರೀಲಂಕಾದ ಪ್ರಜೆಗಳಿಗೆ ಭಾರತದಲ್ಲಿ ತಂಗುವ ಅವಧಿಯಲ್ಲಿ ಸಂಪೂರ್ಣ ಸುರಕ್ಷತೆಯನ್ನು ಖಾತರಿಪಡಿಸಲಾಗುವುದು. ಈ ಪ್ರಕರಣದಲ್ಲಿ ಸಂಬಂಧಪಟ್ಟ ಎಲ್ಲ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಕಮಿಷನರ್ ಭುಲ್ಲರ್ ತಿಳಿಸಿದ್ದಾರೆ.




