ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಗರ್ಭಗುಡಿ ಬಾಗಿಲು ಮತ್ತು ದ್ವಾರಪಾಲಕರ ವಿಗ್ರಹಗಳ ಲೇಪನದ ವೇಳೆ ಸುಮಾರು 4.5 ಕೆಜಿ ಚಿನ್ನ ಕಳವು ಪ್ರಕರಣವು(Sabarimala Gold Theft case) ಕೇರಳ ಮಾತ್ರವಲ್ಲ ಕರ್ನಾಟಕದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಬಗ್ಗೆ ಎಸ್ಐಟಿ ತನಿಖೆ ಚುರುಕುಗೊಳಿಸಿರುವ ನಡುವೆಯೇ ಪ್ರತಿಪಕ್ಷದ ಶಾಸಕರು ಪ್ರತಿಭಟನೆ ವಿಧಾನಸಭೆ ಒಳಗೂ ಹೊರಗೂ ಪ್ರತಿಭಟನೆ ನಡೆಸಿ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.

ಈ ಬಗ್ಗೆ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್( V.D. Satheesan) ಪ್ರತಿಕ್ರಿಯಿಸಿದ್ದು, ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಆರೋಪಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಒಳಗೂ ಹೊರಗೂ ಪ್ರತಿಪಕ್ಷದ ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಪದೇ ಪದೇ ಎಚ್ಚರಿಸಿದಂತೆ ತನಿಖೆ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ. ಜೈಲಿನಲ್ಲಿ ಇರಬೇಕಾದ ಎಲ್ಲಾ ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಅವರನ್ನು ಬಂಧಿಸಲು ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿದರು.

ಸಿಪಿಐ(ಎಂ) ಹಾಗೂ ಸರ್ಕಾರಕ್ಕೆ ಹತ್ತಿರವಾದ ಕೆಲವರಿಗೆ ತನಿಖೆಯ ಬಿಸಿ ತಟ್ಟದಂತೆ ಮುಖ್ಯಮಂತ್ರಿ ಕಚೇರಿ ಹಸ್ತಕ್ಷೇಪ ಮಾಡುತ್ತಿದೆ ಎಂದು ವಿ.ಡಿ. ಸತೀಶನ್ ಆರೋಪಿಸಿದರು. ಈ ತನಿಖೆ ಅವರವರೆಗೆ ತಲುಪಿದರೆ ಸರ್ಕಾರವೇ ಕುಸಿಯುವ ಭಯ. ಇದೇ ಕಾರಣಕ್ಕೆ ಪ್ರಮುಖ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು.

ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ್ದ ಪ್ರಮುಖ ಆರೋಪಿಗಳು ಈಗ ಕೇರಳದಲ್ಲಿ ಕಾನೂನುಬದ್ಧ ಜಾಮೀನಿನಲ್ಲಿ ಬಿಡುಗಡೆಯಾಗುತ್ತಿದ್ದಾರೆ. ಕಳವಾಗಿರುವ ಚಿನ್ನಾಭರಣಗಳನ್ನು ಇನ್ನೂ ಪತ್ತೆಹಚ್ಚಿಲ್ಲ. ಜೊತೆಗೆ ತನಿಖೆ ಕೂಡ ಸ್ತಬ್ಧವಾಗಿದೆ. ಈ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಯು ದಿನದಿಂದ ದಿನಕ್ಕೆ ಮಸುಕಾಗಿ ಹೋಗುತ್ತಿದೆ ಎಂದು ವಿ.ಡಿ. ಸತೀಶನ್ ಆಕ್ರೋಶ ವ್ಯಕ್ತಪಡಿಸಿದರು.






