ಕೇರಳದ ಎರ್ನಾಕುಲಂನ ಕನ್ವೆನ್ಷನ್ ಸೆಂಟರ್ನಲ್ಲಿ ಟಿಫಿನ್ ಬಾಕ್ಸ್ನಲ್ಲಿ IED ಇರಿಸಿ ಸ್ಫೋಟ ಮಾಡಿರುವ ಘಟನೆ ನಡೆದಿದೆ. ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 50ಕ್ಕು ಹೆಚ್ಚು ಮಂದಿಗೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಕಲಮಸ್ಸೆರಿಯ ‘ಯೆಹೋವ ವಿಟ್ನೆಸ್’ ಸಮಾವೇಶದಲ್ಲಿ, ಕೇವಲ 5 ರಿಂದ 10 ಸೆಕೆಂಡ್ಗಳಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ. ಸಮಾವೇಶದಲ್ಲಿ 2,000ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ. ಟಿಫಿನ್ ಬಾಕ್ಸ್ನಲ್ಲಿ ಐಇಡಿ ಇರಿಸಿ ಸ್ಫೋಟಿಸಿದ್ದು ನಾನೇ ಎಂದು ಓರ್ವ ಆರೋಪಿ ಶರಣಾಗಿದ್ದು, ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. NIA, ಬಾಂಬ್ ಸ್ಕ್ವಾಡ್, ವಿಧಿ ವಿಜ್ಞಾನ ತಂಡ ಪರಿಶೀಲನೆ ನಡೆಸಿದ್ದು, ಘಟನೆ ಹಿನ್ನೆಲೆ ತನಿಖೆ ಮಾಡಲಾಗ್ತಿದೆ.
ಸ್ಫೋಟದ ಹೊಣೆ ಹೊತ್ತು ಮಾರ್ಟಿನ್ ಎಂಬಾತ ಶರಣು..!
ತ್ರಿಶ್ಯೂರ್ ಗ್ರಾಮೀಣ ಭಾಗದ ಕೊಡಕ್ರಾ ಪೊಲೀಸ್ ಠಾಣೆಯಲ್ಲಿ ಓರ್ವ ವ್ಯಕ್ತಿ ಶರಣಾಗಿದ್ದು, ಆತನನ್ನು ಡೊಮಿನಿಕ್ ಮಾರ್ಟಿನ್ ಎಂದು ಗುರ್ತಿಸಲಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಷಾ ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಕರೆ ಮಾಡಿ ಸ್ಫೋಟದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಸಭೆ ಮಾಡುತ್ತಿದ್ದ ಜನರಿಗೆ ಸಂಬಂಧಿಸಿದ ವ್ಯಕ್ತಿಯೇ ಮಾರ್ಟಿನ್ ಎಂದು ಮಾಹಿತಿ ಹೊರಬಿದ್ದಿದೆ. ಆದರೆ ನಾವು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ ಎಂದು ಕೇರಳ ADGP (ಕಾನೂನು ಸುವ್ಯವಸ್ಥೆ ವಿಭಾಗ) ಅಜಿತ್ ಕುಮಾರ್ ಮಾಹಿತಿ ನೀಡಿದ್ದಾರೆ. ಓರ್ವ ಮಹಿಳೆ ಸಾವನ್ನಪ್ಪಿದ್ದು, ಐದು ಮಂದಿ ಸ್ಥಿತಿ ಗಂಭೀರ ಆಗಿದೆ. ತೀವ್ರ ನಿಗಾಘಟಕದಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. ಆರೋಗ್ಯ ಸಿಬ್ಬಂದಿ ರಜೆಯನ್ನು ರದ್ದು ಮಾಡಿಕೊಂಡು ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
![](https://pratidhvani.com/wp-content/uploads/2023/10/PTI10-29-2023-000044A-0_1698563811292_1698563844440.jpg)
ಕೇರಳದಲ್ಲಿ ಸ್ಫೋಟ.. ಪ್ಯಾಲೆಸ್ಟೀನ್ ಪರ ಸಿಎಂ ಪ್ರತಿಭಟನೆ..!
ಕೇರಳದಲ್ಲಿ ಟಿಫಿನ್ ಬಾಕ್ಸ್ ಬಾಂಬ್ ಸ್ಫೋಟ ಸಂಭವಿಸಿದರೂ ಕೇರಳ ಸಿಎಂ ಪಿಣರಾಯಿ ವಿಜಯನ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇಸ್ರೇಲ್ ಹಾಗು ಪ್ಯಾಲೆಸ್ಟೀನ್ ಯುದ್ಧದಲ್ಲಿ ಪ್ಯಾಲೆಸ್ಟೀನ್ಗೆ ಬೆಂಬಲ ಸೂಚಿಸಿ ನಡೆದ ಧರಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೇರಳ ಸಿಎಂ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಸಿಪಿಎಂನ ಧರಣಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ್ದು, ಸಿಪಿಎಂ ಪಾಲಿಟ್ಬ್ಯೂರೋ ಮತ್ತು ಕೇಂದ್ರ ಸಮಿತಿ ಸದಸ್ಯರು ಸಹ ಪಾಲ್ಗೊಂಡಿದ್ದರು. ದೆಹಲಿಯ ಎಕೆಜಿ ಭವನದ ಮುಂದೆ ಪ್ಯಾಲೆಸ್ಟೀನ್ ಬೆಂಬಲಿಸಿ ಈ ಧರಣಿ ನಡೆದಿದ್ದು, ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಲಾಗಿದೆ.
ಗಾಜಾದ ಹಮಾಸ್ಗೂ ಬ್ಲಾಸ್ಟ್ಗೂ ಲಿಂಕ್ ಇದ್ಯಾ..? ಇಲ್ವಾ..?
ಟಿಫಿನ್ ಬಾಕ್ಸ್ನಲ್ಲಿ IED ಬಾಂಬ್ ಸ್ಫೋಟ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಸರ್ವಪಕ್ಷಗಳ ಸಭೆ ಕರೆದಿದ್ದಾರೆ ಸಿಎಂ ಪಿಣರಾಯಿ ವಿಜಯನ್. ಆದರೆ ಇದಕ್ಕೂ ಮುನ್ನ ಅಂದರೆ ಶನಿವಾರ ಗಾಂಜಾದಲ್ಲಿ ಹಮಾಸ್ ಸಂಘಟನೆ ಹೋರಾಟವನ್ನು ಬೆಂಬಲಿಸಿ, ಸಭೆ ಮಾಡಲಾಗಿತ್ತು. ಆ ಸಭೆಯನ್ನು ಉದ್ದೇಶಿಸಿ ಹಮಾಸ್ ಸಂಘಟನೆಯ ಮಾಜಿ ನಾಯಕ ಖಲೇದ್ ಮಶ್ಹಾಲ್ ಎಂಬಾತ ಮಾತನಾಡಿದ್ದನು. ಈ ವೇಳೆ ಯುವಕರನ್ನು ಪ್ರಚೋದಿಸಿ, ಇಸ್ರೇಲ್ ವಿರುದ್ಧ ಯುವಕರು ಸಿಡಿದೇಳುವಂತೆ ಕರೆ ನೀಡಿದ್ದನು. ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಪ್ಯಾಲೆಸ್ಟೀನ್ ನಡೆಸುತ್ತಿರುವ ಯುದ್ಧದ ಬಗ್ಗೆ ಪ್ರಚಾರ ನಡೆಸುವಂತೆ ಸೂಚಿಸಿದ್ದನು. ಅದಾದ ಒಂದೇ ದಿನದಲ್ಲಿ ಈ ಸ್ಟೋಟ ನಡೆಸಿದ್ದು, ಹಮಾಸ್ ಸಂಘಟನೆ ಪ್ರಚೋದನೆ ಇದೆ ಎನ್ನಲಾಗಿದೆ. ಆದರೆ ಇಸ್ರೇಲ್ ಹಾಗು ಹಮಾಸ್ ಯುದ್ಧಕ್ಕೂ ಕೇರಳಕ್ಕೂ ಲಿಂಕ್ ಇಲ್ಲ ಎನ್ನುತ್ತಿದೆ ಕೇರಳ ಪೊಲೀಸ್ ಮೂಲಗಳು.