ದಕ್ಷಿಣ ಕಾಶ್ಮೀರ ಕುಲ್ಲಾಮ್ ಜಿಲ್ಲೆಯಲ್ಲಿ ರಜೆ ಕಳೆಯಲೆಂದು ಊರಿಗೆ ಬಂದಿದ್ದ ಭಾರತೀಯ ಸೇನೆಯ ಯೋಧರೊಬ್ಬರು ನಾಪತ್ತೆಯಾಗಿರುವುದು ಭಾನುವಾರ (ಜು.30) ಬೆಳಕಿಗೆ ಬಂದಿದೆ. ಐೋಧನ ಪತ್ತೆಗೆ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ.
25 ವರ್ಷದ ಜಾವೇದ್ ಅಹ್ಮದ್ ನಾಪತ್ತೆಯಾಗಿರುವ ಯೋಧ. ಇವರು ಕಾಶ್ಮೀರ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜಾವೇದ್ ಅವರು ಈದ್ ಹಬ್ಬದ ನಿಮಿತ್ತ ತಮ್ಮ ಊರಿಗೆ ರಜೆಗೆ ತೆರಳಿದ್ದರು. ಆಗಸ್ಟ್ 1 ರಂದು ಅವರು ಹಾಜರಾಗಬೇಕಿತ್ತು ಎಂದು ಭದ್ರತಾ ಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಜೆಗೆ ತಮ್ಮ ಮನೆಗೆ ಬಂದಿದ್ದ ಜಾವೇದ್ ಶನಿವಾರ ಸಂಜೆ 6.30ರ ಹೊತ್ತಿಗೆ ಸಾಮಾನುಗಳನ್ನು ಖರೀದಿ ಮಾಡಲು ಅವರು ತಮ್ಮ ಕಾರಿನಲ್ಲಿ ಮಾರುಕಟ್ಟೆಗೆ ತೆರಳಿದ್ದರು. ಆದರೆ ಅವರು ರಾತ್ರಿ 9 ಗಂಟೆಯಾದರೂ ಹಿಂತಿರುಗಿ ಬಾರದೇ ಇದ್ದಾಗ ಕುಟುಂಬದವರು ಹುಡುಕಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಜಾವೇದ್ ಅವರ ಕಾರು ಮಾರುಕಟ್ಟೆ ಸಮೀಪದಲ್ಲಿ ಪತ್ತೆಯಾಗಿದ್ದು ಅದರಲ್ಲಿ ರಕ್ತದ ಕಲೆಗಳು ಇವೆ ಎಂದು ಕಾಶ್ಮೀರದ ಪೊಲೀಸರು ಹೇಳಿದ್ದಾರೆ.
ಜಾವೇದ್ನನ್ನು ಭಯೋತ್ಪಾದಕರು ಅಪಹರಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಯೋಧನ ಕುಟುಂಬದವರು ವಿಡಿಯೊ ಹೇಳಿಕೆ ನೀಡಿ ಆತನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ | ಪ್ರಕರಣ ದಾಖಲಿಸಿದ ಸಿಬಿಐ
ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವು ಶಂಕಿತರನ್ನು ಬಂಧಿಸಿದ್ದಾರೆ. ಯೋಧನ ಪತ್ತೆಗೆ ಭಾರತೀಯ ಸೇನೆ ಮತ್ತು ಪೊಲೀಸರು ಭಾರೀ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹಿಂದೆಯೂ ಕಾಶ್ಮೀರ ಪ್ರದೇಶದಲ್ಲಿ ರಜೆಯ ಮೇಲೆ ಮನೆಯಲ್ಲಿದ್ದ ಹಲವಾರು ಸೈನಿಕರನ್ನು ಭಯೋತ್ಪಾದಕರು ಅಪಹರಿಸಿ ಹತ್ಯೆಗೈದಿದ್ದರು.