ಕೊರೋನಾ ಲಾಕ್ಡೌನ್ ನಿಂದಾಗಿ ರಾಜ್ಯ ಸಾರಿಗೆ ನಿಗಮಗಳು ಮಕಾಡೆ ಮಲಗಿವೆ. ಸದ್ಯ ಅನ್ ಲಾಕ್ ಆಗಿ ಸಂಪೂರ್ಣ ಬಸ್ ಸಂಚಾರ ಆರಂಭವಾದರೂ ನೌಕರರಿಗೆ ಸಂಬಳವನ್ನೂ ಕೊಡಲಾರದ ಸ್ಥಿತಿಗೆ ನಿಗಮಗಳು ಬಂದು ನಿಂತಿದೆ. ಯಾವಾಗಲೂ ತಿಂಗಳ ಆರಂಭದಲ್ಲಿ ಸಂಬಳ ಪಡೆಯುತ್ತಿದ್ದ ನೌಕರರಿಗೆ ಅಕ್ಟೋಬರ್ ಬಂದರೂ ಆಗಸ್ಟ್ ತಿಂಗಳ ಅರ್ಧ ಸಂಬಳ ಕೈ ಸೇರಿಲ್ಲ. ಅರ್ಧ ಸಂಬಳದಲ್ಲಿ ಬದುಕೋದು ಹೇಗೆ ಅಂತ ನೌಕರರು ಪ್ರಶ್ನೆ ಮಾಡ್ತಿದ್ದಾರೆ.
ಒಂದೂವರೆ ತಿಂಗಳ ಸಂಬಳ ಸಿಗದೆ ಪರದಾಡುತ್ತಿರುವ ಸಾರಿಗೆ ನೌಕರರು.!!
ಕೊರೊನಾ ಬಂದಾಗಿಂದ ಸಾರಿಗೆ ಇಲಾಖೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಅರಿತ ಸರ್ಕಾರ ನೌಕರರ ಸಂಬಳಕ್ಕಾಗಿ ಪ್ರತಿ ತಿಂಗಳು 50% ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಈ ಬಾರಿ ಸಾರಿಗೆ ನೌಕರರಿಗೆ ಆಗಸ್ಟ್ ತಿಂಗಳ ಅರ್ಧ ಸಂಬಳವೇ ಆಗಿಲ್ಲ. ಅಕ್ಟೋಬರ್ ಮೊದಲ ವಾರ ಕಳೆದರೂ ಆಗಸ್ಟ್ ನ ಅರ್ಧ ಸಂಬಳ ಹಾಗೂ ಸೆಪ್ಟೆಂಬರ್ ಪೂರ್ತಿ ಸಂಬಳ ನೌಕರರ ಕೈ ಸೇರಿಲ್ಲ. ಹೀಗಾಗಿ ಮನೆ ಬಾಡಿಗೆ, ಕರೆಂಟ್, ಬಿಲ್, ನೀರಿನ ಬಿಲ್, ಖರ್ಚಿಗೂ ಹಣ ಇಲ್ಲದೆ ನೌಕರರು ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೆ ದಸರಾ, ದೀಪಾವಳಿ ಹಬ್ಬಗಳು ಇದ್ದು ವೇತನವಿಲ್ಲದೇ ಸಾರಿಗೆ ನೌಕರರಿಗೆ ಹಬ್ಬದ ಸಂಭ್ರಮವೇ ಇಲ್ಲದಾಗಿದೆ. ಸಾರಿಗೆ ನಿಗಮಗಳು ಕೊರೊನಾದಿಂದ ಕಷ್ಟ ಅನುಭವಿಸಿದ ಕಾರಣದಿಂದಾಗಿ ಸರ್ಕಾರ ಕಳೆದ ವರ್ಷ ವೇತನಕ್ಕೆ ಅಂತ 2,133 ಕೋಟಿ ಬಿಡುಗಡೆ ಮಾಡಿತ್ತು. ಕೊರೊನಾ ಎರಡನೇ ಅಲೆಯಲ್ಲಿಯೂ ಜುಲೈ ವರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದ್ರೆ ಆಗಸ್ಟ್ ತಿಂಗಳ ವೇತನಕ್ಕೆ ಪೂರ್ತಿ ಅನುದಾನ ಬಿಡುಗಡೆ ಆಗದ ಕಾರಣ ನಿಗಮದಲ್ಲಿ ವೇತನ ನೀಡಲು ದುಡ್ಡಿಲ್ಲ. ರಾಜ್ಯಾದ್ಯಂತ 1.30 ಲಕ್ಷ ಸಾರಿಗೆ ನೌಕರರಿದ್ದು 320 ಕೋಟಿ ಹಣ ಬೇಕು. ಕೊರೊನಾ ಬಂದಾಗಿಂದ ನಿಗಮಗಳು 50% ಹಾಗೂ ಸರ್ಕಾರ 50% ಸಂಬಳಕ್ಕೆ ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಈ ಬಾರಿ ಒಂದೂವರೆ ತಿಂಗಳ ಸಂಬಳ ಬಾಕಿ ಇದ್ದು, ನೌಕರರ ಪರದಾಡುತ್ತಿದ್ದಾರೆ.
ಸಾರಿಗೆ ನೌಕರರಿಗೆ ಸಂಬಳ ನೀಡದಿದ್ದಕ್ಕೆ ಮಾಜಿ ಸಿಎಂ ಹೆಚ್ಡಿಕೆ ಕಿಡಿ.!!
ಸಾರಿಗೆ ನೌಕರರಿಗೆ ಸಂಬಳ ಆಗದ ಹಿನ್ನಲೆ ಮಾಜಿ ಸಿಎಂ ಕುಮಾರಸ್ವಾಮಿಯವರು ಆದಷ್ಟು ಬೇಗ ಸರ್ಕಾರ ಹಣ ಬಿಡುಗಡೆ ಮಾಡಿ ಎಂದು ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದರು. ಸಾರಿಗೆ ನೌಕರರಿಗೆ ವೇತನ ವಿಳಂಬ ಮಾಡುವುದು ಸರಿಯಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಸಕಾಲಕ್ಕೆ ವೇತನ ನೀಡುವಂತೆ ಸರ್ಕಾರ ಹಾಗೂ ಸಾರಿಗೆ ಸಚಿವರಿಗೆ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಶ್ರೀ ರಾಮುಲು, ನಾನು ಈಗಾಗಲೇ ಆರ್ಥಿಕ ಇಲಾಖೆ ಜೊತೆಗೆ ಮಾತಾಡಿದ್ದಿನಿ. ನೌಕರರಿಗೆ ಯಾವುದೇ ತೊಂದರೆ ಆಗಲು ಬಿಡುವುದಿಲ್ಲ. ಹಬ್ಬದೊಳಗೆ ಸಂಬಳ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಸಾರಿಗೆ ನೌಕರನಿಂದ ಆತ್ಮಹತ್ಯೆಗೆ ಯತ್ನ.!!
ಒಂದ್ಕಡೆ ನೌಕರರಿಗೆ ಸಂಬಳ ಆಗಿಲ್ಲ ಎನ್ನುವುದಾದರೆ, ಮತ್ತೊಂದೆಡೆ ಜೀವ ನಿರ್ವಹಣೆಗೆ ಇಲಾಖೆಯಿಂದ ವಜಾಗೊಂಡ ನೌಕರರು ಬದುಕು ಮೂರಾಬಟ್ಟೆಯಾಗಿದೆ. ವಜಾಗೊಂಡಿರುವ ಹಿನ್ನೆಲೆ ಕೇಶವ ಎಂಬ ಸಾರಿಗೆ ನೌಕರ ಇತ್ತೀಚೆಗೆ ಆತ್ಮಹತ್ಯೆ ಯತ್ನಿಸಿರುವ ಘಟನೆ ನಡೆದಿತ್ತು. ಬೆಂಗಳೂರಿನ ಇಂದಿರಾನಗರದ ಡಿಪೋ 6ರ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಹಳೆ ಬಯ್ಯಪ್ಪನಹಳ್ಳಿಯಲ್ಲಿ ವಾಸವಾಗಿದ್ದ ಕೇಶವ, ಅಕ್ಟೋಬರ್ 7ರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಡಿಪೋ ಮ್ಯಾನೇಜರ್ ಮುಂದೆಯೇ ವಿಷ ಸೇವಿಸಿ ಆಕ್ರೋಶ ಹೊರಹಾಕಿದ್ದರು. ತಕ್ಷಣ ಕೇಶವನನ್ನ ಬೋರಿಂಗ್ ಆಸ್ಪತ್ರೆಗೆ ದಾಖಲು ಮಾಡಿದ ಹಿನ್ನೆಲೆ ಜೀವಾಪಾಯದಿಂದ ಪಾರಾಗಿದ್ದಾರೆ. ಅಂದಹಾಗೆ, ಏಪ್ರಿಲ್ ನಲ್ಲಿ ನಡೆದ ಮುಷ್ಕರದ ವೇಳೆ 4 ಸಾವಿರಕ್ಕೂ ಅಧಿಕ ವಜಾಗೊಂಡಿದ್ದರು. ಕೊರೊನಾ ಹೆಚ್ಚಾಗಿದ್ದಾಗ ಬಸ್ ಸಂಚಾರವಿಲ್ಲದೆ, ಪ್ರಯಾಣಿಕರಿಲ್ಲದೇ ನಿಗಮಗಳು ನಷ್ಟದಲ್ಲಿದ್ದವು. ಸದ್ಯ ಬಸ್ ಸಂಚಾರ ಯಥಾಸ್ಥಿತಿಯಲ್ಲಿದ್ದರೂ, ನಿಗಮಗಳಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಹಾಗೂ ಸಾರಿಗೆ ನಿಗಮಗಳು ಆದಾಯದ ಮೂಲ ಸೃಷ್ಟಿಸಿ ಸಂಬಳದ ಸಮಸ್ಯೆಗೆ ಅಂತ್ಯ ಹಾಡಬೇಕಿದೆ.
ಕೊರೋನಾ ಲಾಕ್ಡೌನ್ ನಿಂದಾಗಿ ರಾಜ್ಯ ಸಾರಿಗೆ ನಿಗಮಗಳು ಮಕಾಡೆ ಮಲಗಿವೆ. ಸದ್ಯ ಅನ್ ಲಾಕ್ ಆಗಿ ಸಂಪೂರ್ಣ ಬಸ್ ಸಂಚಾರ ಆರಂಭವಾದರೂ ನೌಕರರಿಗೆ ಸಂಬಳವನ್ನೂ ಕೊಡಲಾರದ ಸ್ಥಿತಿಗೆ ನಿಗಮಗಳು ಬಂದು ನಿಂತಿದೆ. ಯಾವಾಗಲೂ ತಿಂಗಳ ಆರಂಭದಲ್ಲಿ ಸಂಬಳ ಪಡೆಯುತ್ತಿದ್ದ ನೌಕರರಿಗೆ ಅಕ್ಟೋಬರ್ ಬಂದರೂ ಆಗಸ್ಟ್ ತಿಂಗಳ ಅರ್ಧ ಸಂಬಳ ಕೈ ಸೇರಿಲ್ಲ. ಅರ್ಧ ಸಂಬಳದಲ್ಲಿ ಬದುಕೋದು ಹೇಗೆ ಅಂತ ನೌಕರರು ಪ್ರಶ್ನೆ ಮಾಡ್ತಿದ್ದಾರೆ.