ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿಗೆ ಸಂಬಂಧಪಟ್ಟಂತೆ ಕೇವಲ ರಾಜ್ಯಮಟ್ಟದಲ್ಲಿ ಮಾತ್ರವಲ್ಲದೇ, ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಜೀತೆಗೆ ರಾಜ್ಯದಲ್ಲಿ ಈ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈಗಾಗಲೇ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಕೂಡ ಹೊರಡಿಸಿತ್ತು. ಈ ಬೆನ್ನಲೇ ರಾಜ್ಯದ ಲೋಕಾಯುಕ್ತ ಸಂಸ್ಥೆ ಈ ಪ್ರಕರಣದಲ್ಲಿ ಸ್ವಯಂ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದೆ.
ಪಶ್ಚಿಮ ಬಂಗಾಳದ ಕಂಪನಿಯೊಂದು ಸರಬರಾಜು ಮಾಡಿದ್ದ ಕಳಪೆ ಗುಣಮಟ್ಟದ ಐ.ವಿ. ದ್ರಾವಣವಾದ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಣಂತಿಯರಿಗೆ ನೀಡಿದ ಪರಿಣಾಮ ಆರು ಜನ ಸ್ತ್ರೀಯರು ಮೃತಪಟ್ಟಿದ್ದ ವಿಷಯವು ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ವಿಷಯವಾಗಿತ್ತು.

ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿದ ಗೌರವಾನ್ವಿತ ಲೋಕಾಯುಕ್ತರವರಾದ ನ್ಯಾಯಮೂರ್ತಿ ಶ್ರೀ. ಬಿ.ಎಸ್. ಪಾಟೀಲ್ ಸಾಹೇಬರು ಲೋಕಾಯುಕ್ತ ಕಾಯ್ದೆಯಡಿಯಲ್ಲಿ ಅವರಿಗಿರುವ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಲು ಕಛೇರಿಗೆ ನಿರ್ದೇಶಿಸಿ ಈ ಬಗ್ಗೆ ವಿವರವಾದ ಪ್ರತ್ಯೇಖ ಆದೇಶವನ್ನು ದಿನಾಂಕ: 06.12.2024ರಂದು ಹೊರಡಿಸಿರುತ್ತಾರೆ.
ಈ ದೇಶದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಔಷಧ ನಿಯಂತ್ರಕರು ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು, ಹಾಗೂ ಬಳ್ಳಾರಿ ಸರ್ಕಾರಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ವಿರುದ್ಧ ಮಾತ್ರವಲ್ಲದೇ, ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶಿಸಿರುತ್ತಾರೆ.
ಈ ಆದೇಶದಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆಯ ಭಾಗವಾಗಿ ಬಳ್ಳಾರಿ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರಿಗೆ ಪ್ರತ್ಯೇಖವಾಗಿ ಸರ್ಚ್ ವಾರೆಂಟ್ಗಳನ್ನು ನೀಡಿ. ಘಟನೆ ನಡೆದ ಆಸ್ಪತ್ರೆ ಹಾಗೂ ಔಷಧ ಉಗ್ರಾಣವನ್ನು ತಪಾಸಣೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅಲ್ಲದೇ, ಈ ರೀತಿಯ ಘಟನೆಗಳು ಬೇರೆ ಯಾವುದಾದರೂ ಜಿಲ್ಲೆಯಲ್ಲಿಯೂ ಸಹಾ ಜರುಗಿರಬಹುದಾದ ಸಂಭವವಿರುವುದರಿಂದ, ಆ ಜಿಲ್ಲೆಗಳಲ್ಲಿ ಸದರಿ ಔಷಧಿ ಸರಬರಾಜು ಮಾಡಿರುವ ಬಗ್ಗೆ ಹಾಗೂ ಸದರಿ ಔಷಧಿಯಿಂದ ಆಗ ಬಹುದಾದ ದುರ್ಘಟನೆಯನ್ನು ತಡೆಯುವ ಸದುದ್ದೇಶದಿಂದ, ಆ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸುವಂತೆ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಗೌರವಾನ್ವಿತ ಲೋಕಾಯುಕ್ತರವರು ಸ್ವಯಂ ಪ್ರೇರಿತ ಆದೇಶದಲ್ಲಿ ಈ ಕೆಳಕಂಡಂತೆ ನಿರ್ದೇಶನಗಳನ್ನು ನೀಡಿರುತ್ತಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಪ್ರಧಾನ ಕಾರ್ಯದರ್ಶಿಗಳಿಗೆ. ಘಟನೆ ಸಂಬಂಧ ವಿವರವಾದ ವರದಿ. ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಜವಾಬ್ದಾರಿ ಗುರಿತಿಸುವಂತೆ ಹಾಗೂ ದುರ್ಘಟನೆಗೆ ಕಾರಣವಾದ ಔಷಧವವನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಮ್ಮ ತಮ್ಮ ಜಿಲ್ಲೆಗಳಲ್ಲಿ ಮೇಲ್ಕಂಡ ಕಳಪೆ ಗುಣಮಟ್ಟದ ಔಷಧವನ್ನು ನಿಯಂತ್ರಿಸುವ ಸಲುವಾಗಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಈ ದುರ್ಘಟನೆಯಿಂದ ಮರಣ ಹೊಂದಿರುವ ಬಾಣಂತಿಯರ ಕುಟುಂಬ ವರ್ಗಕ್ಕೆ ನೀಡಿರುವ ಪರಿಹಾರದ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಕಾರ್ಯ ವೈಖರಿಯನ್ನು ಪರಿಶೀಲಿಸಲು ಸೂಚಿಸಲಾಗಿದೆ.
ಬಾಣಂತಿಯರ ಸಾವಿಗೆ ಕಾರಣವಾದ ಸಾಕ್ಷಿ ಸಂಗ್ರಹದ ಸಲುವಾಗಿ ತಕ್ಷಣಕ್ಕೆ ಘಟನೆ ನಡೆದ ಆಸ್ಪತ್ರೆ ಹಾಗೂ ಔಷಧಿ ವಿತರಿಸುವ ಉಗ್ರಾಣವನ್ನು ತಪಾಸಣೆ ಕೈಗೊಳ್ಳಲು ಸರ್ಚ್ ವಾರೆಂಟ್ಗಳನ್ನು ನೀಡಿ. ತಪಾಸಣೆ ಕೈಗೊಂಡು ವರದಿ ಸಲ್ಲಿಸಲು ಸೂಚಿಸಲಾಗಿದೆ






