ಮೇ 13ರಂದು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸೋತು ಸುಣ್ಣ ಆಗಿದ್ರೆ, ಕಾಂಗ್ರೆಸ್ ಗೆದ್ದು ಬೀಗಿತ್ತು. ಹೀಗಾಗಿ ವಿರೋಧ ಪಕ್ಷದ ನಾಯಕನಾಗಿದ್ದ ಸಿದ್ದರಾಮಯ್ಯ, ಆಡಳಿತ ಪಕ್ಷಕ್ಕೆ ಬಂದಿದ್ದರು. ಕಾಂಗ್ರೆಸ್ ಅಧಿಕಾರ ಹಂಚಿಕೆ ವಿಚಾರದಲ್ಲಿ ನಾಲ್ಕೈದು ದಿನಗಳು ತಡವಾಯ್ತು. ಮೇ 20ರಂದು ಸಿಎಂ, ಡಿಸಿಎಂ, ಸಚಿವರು ಪ್ರಮಾಣ ಸ್ವೀಕಾರ ಮಾಡಿದ್ದರು.

ಆದರೆ ಮೇ 13ರಿಂದಲೇ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಇರಲಿಲ್ಲ. ರಾಜ್ಯ ಸರ್ಕಾರ ಅಧಿಕೃತ ವಿರೋಧ ಪಕ್ಷದ ನಾಯಕರು ಇಲ್ಲದೆ 60 ದಿನಗಳನ್ನು ಕಳೆದಂತಾಗಿದೆ. ರಾಜ್ಯ ಬಿಜೆಪಿ ನಾಯಕರು ವಿರೋಧ ಪಕ್ಷದ ನಾಯಕನಿಲ್ಲದೆ ಕಾಂಗ್ರೆಸ್ ನಾಗಾಲೋಟಕ್ಕೆ ಬ್ರೇಕ್ ಹಾಕುವುದು ಹೇಗಪ್ಪಾ ಎಂದು ತಲೆ ತಲೆ ಚಚ್ಚಿಕೊಳ್ಳುವಂತಾಗಿದೆ.

ಅನಿವಾರ್ಯವಾಗಿ ಕೆಲವು ಬಿಜೆಪಿ ಶಾಸಕರು ಸದನದಲ್ಲಿ ಭಾಗಿಯಾಗುತ್ತಿದ್ರೆ, ಮತ್ತಷ್ಟು ಶಾಸಕರು ಸದನದ ಕಡೆಗೆ ತಿರುಗಿಯೂ ನೋಡ್ತಿಲ್ಲ. ಬಿಜೆಪಿ ಹೈಕಮಾಂಡ್ ಮಾತ್ರ ಏನೂ ಗೊತ್ತಿಲ್ಲ ಎನ್ನುವಂತೆ ಮೌನಕ್ಕೆ ಶರಣಾಗಿದೆ. ಇದರ ಪರಿಣಾಮ ರಾಜ್ಯದ ಮೇಲಾಗಿದೆ.
ರಾಜ್ಯಕ್ಕೆ ಅಧಿಕೃತ ವಿರೋಧ ಪಕ್ಷ ನಾಯಕ ಇರಬೇಕು..!

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಣೋತ್ಸಾಹದಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಅಸಲಿಗೆ ಬಿಜೆಪಿ ಅಧಿಕೃತ ವಿಪಕ್ಷ ಆದರೂ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಅಧಿಕೃತ ವಿರೋಧ ಪಕ್ಷದ ನಾಯಕ ರಾಜ್ಯಕ್ಕೆ ಅವಶ್ಯಕತೆ ಇರುತ್ತದೆ.

ಸರ್ಕಾರ ತಪ್ಪು ಮಾಡಿದಾಗ ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ವಿಪಕ್ಷ ನಾಯಕ ಮಾಡಬೇಕಿದೆ. ಮಾಜಿ ಸಿಎಂ ಕುಮಾರಸ್ವಾಮಿ ವಿಪಕ್ಷ ನಾಯಕನಾಗಿ ಸರ್ಕಾರವನ್ನು ಹೆಜ್ಜೆ ಹೆಜ್ಜೆಯನ್ನೂ ಗಮನಿಸುತ್ತಿದ್ದು, ವಿರೋಧ ಪಕ್ಷದ ನಾಯಕನ ಆಯ್ಕೆಯಾದರೆ ಆ ಸ್ಥಾನಕ್ಕೆ ಕೆಲವೊಂದು ವಿನಾಯ್ತಿಗಳು ಸಿಗುತ್ತವೆ.
ಸರ್ಕಾರಕ್ಕೆ ಎದುರಾಳಿಯಾಗಿ ನಿಂತು ಮಾತನಾಡುವ ಅವಕಾಶ ಹೆಚ್ಚಾಗಿತ್ತದೆ. ಸಿಎಂ ಸ್ಥಾನಕ್ಕೆ ಸರಿಸಮಾನವಾದ ಪಾತ್ರವನ್ನು ವಿಪಕ್ಷ ನಾಯಕ ನಿರ್ವಹಣೆ ಮಾಡುವುದರಿಂದ ಆದಷ್ಟು ಬೇಗ ವಿಪಕ್ಷನ ನಾಯಕನ ಆಯ್ಕೆ ಆಗಬೇಕಿದೆ. ಇದೀಗ ಬಿಜೆಪಿಯಲ್ಲಿ ಎಲ್ಲರೂ ಎದ್ದು ನಿಲ್ಲುತ್ತಿದ್ದು, ವಿಪಕ್ಷ ನಾಯಕನಾಗಲು ಸದನದೊಳಗೇ ಪೈಪೋಟಿ ನಡೆಯುತ್ತಿದ್ಯಾ..? ಅನ್ನೋ ಅನುಮಾನ ಮೂಡುವಂತೆ ಆಗಿದೆ.
ನೀನು ವಿಪಕ್ಷ ನಾಯಕ ಆಗಲ್ಲ ಯತ್ನಾಳ್ – ಸಿಎಂ ಸಿದ್ದು

ಚುನಾವಣೆಯಲ್ಲಿ ಸೋತು ಸುಣ್ಣ ಆಗಿರುವ ಬಿಜೆಪಿಯನ್ನು ಲೋಕಸಭಾ ಚುನಾವಣೆ ಸೇರಿದಂತೆ ಬಿಬಿಎಂಪಿ ಹಾಗು ರಾಜ್ಯ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಅಣಿ ಮಾಡಬೇಕಿದೆ. ಹೀಗಿರುವಾಗ ಬಿಜೆಪಿ ನಾಯಕರು ತಮ್ಮೊಳಗೆ ಕಚ್ಚಾಡುವ ಸ್ಥಿತಿಗೆ ತಲುಪಿದ್ದಾರೆ. ಈಗಾಗಲೇ ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಅದ್ಧೂರಿಯಾಗಿ ಗೆಲ್ಲಿಸಿರುವ ಉಮೇಧಿನಲ್ಲಿರುವ ಕಾಂಗ್ರೆಸ್, ಯಾರೇ ವಿರೋಧ ಪಕ್ಷದ ನಾಯಕ ಆದರೂ ಕ್ಯಾರೇ ಎನ್ನುವ ಹಂತಕ್ಕೆ ತಲುಪಿದೆ.
ಹೀಗಿರುವಾಗ 2 ತಿಂಗಳುಗಳೇ ಕಳೆದು ಹೋದರೂ ವಿಪಕ್ಷ ನಾಯಕನ ಆಯ್ಕೆ ಆಗದಿರುವುದು ಕಾಂಗ್ರೆಸ್ಗೆ ಹಾಲು ಅನ್ನ ಉಂಡಷ್ಟೇ ಸಂತೋಷ ಆಗುತ್ತಿದೆ. ಹೀಗಿರುವಾಗ ಸದನದಲ್ಲಿ ಸದಾ ಎದ್ದು ನಿಂತು ಮಾತನಾಡಲು ಯತ್ನಿಸುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಛೇಡಿಸಿರುವ ಸಿಎಂ ಸಿದ್ದರಾಮಯ್ಯ, ಹೇಯ್.. ಯತ್ನಾಳ್ ನೀನು ಎಷ್ಟು ಬಾರಿ ಎದ್ದು ಮಾತನಾಡಲು ಯತ್ನಿಸಿದ್ರೂ ನನಗಿರುವ ಮಾಹಿತಿ ಪ್ರಕಾರ ನೀನು ವಿರೋಧ ಪಕ್ಷದ ನಾಯಕ ಆಗುವುದಿಲ್ಲ ಕುಳಿತಿಕೋ.. ಎಂದಿದ್ದಾರೆ.
ಈ ರೀತಿ ಬಿಜೆಪಿ ನಾಯಕರು ಸದನದಲ್ಲಿ ಮುಜುಗರಕ್ಕೆ ಒಳಗಾಗ್ತಿದ್ದಾರೆ. ಆದರೆ ಹೈಕಮಾಂಡ್ ಮಾತ್ರ ಏನೂ ಗೊತ್ತಿಲ್ಲ ಎನ್ನುವಂತೆ ನಟಿಸುತ್ತಿದೆ.
ಬಿ.ಎಸ್ ಯಡಿಯೂರಪ್ಪ ಬಳಿ ಮಾಹಿತಿ ಪಡೆದಿದ್ದು ಏನು..?

ರಾಜ್ಯ ವಿಧಾನಸಭಾ ಅಧಿವೇಶನ ಆರಂಭಕ್ಕೂ ಮೊದಲೇ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಹೈಕಮಾಂಡ್ ನಾಯಕರು ಸುಧೀರ್ಘವಾಗಿ ಚರ್ಚೆ ನಡೆಸಿದ್ದರು. ಆ ಬಳಿಕ ರಾಜ್ಯಕ್ಕೂ ವೀಕ್ಷಕರನ್ನು ಕಳುಹಿಸಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ್ದರು.
ಆದರೆ ಅಧಿವೇಶನ ಆರಂಭವಾಗಿಯೇ 10 ದಿನಗಳು ಕಳೆದರೂ ವಿಪಕ್ಷ ನಾಯಕನ ಆಯ್ಕೆಯಾಗಲಿಲ್ಲ. ಇನ್ನು ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಅವರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡುವುದು ಸೂಕ್ತ ಎಂದು ತಿಳಿಸಿದ್ದಾರೆ ಎನ್ನುವುದು ಪ್ರತಿಧ್ವನಿಗೆ ಸಿಕ್ಕಿರುವ ಮಾಹಿತಿ. ಆದರೆ ಸಂತೋಷ್ ಬಳಗ ಯಡಿಯೂರಪ್ಪ ಹಿಂಬಾಲಕರನ್ನು ವಿಪಕ್ಷ ನಾಯಕನ್ನಾಗಿ ಮಾಡಬಾರದು. ಕಾಂಗ್ರೆಸ್ಗೆ ಟಫ್ ಫೈಟ್ ಕೊಡುವುದಕ್ಕೆ ಯಾರಾದರೂ ಅರ್ಹರು ಎಂದರೆ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ.

ಯತ್ನಾಳ್ನನ್ನೇ ವಿಪಕ್ಷ ನಾಯಕನನ್ನಾಗಿ ಮಾಡಿ ಎಂದು ಹಠ ಹಿಡಿದಿದ್ದಾರೆ ಎನ್ನಲಾಗಿದೆ. ಇವರಿಬ್ಬರ ಕಿತ್ತಾಟದಿಂದಲೇ ಬಿಜೆಪಿ ಹೈಕಮಾಂಡ್ ಥಂಡಾ ಹೊಡೆದಿದ್ದು, ಒಮ್ಮತದ ಅಭಿಪ್ರಾಯಕ್ಕೆ ಬರುವುದು ಸಾಧ್ಯವಾಗ್ತಿಲ್ಲ. ಇಬ್ಬರಲ್ಲಿ ಯಾರನ್ನೇ ವಿಪಕ್ಷ ನಾಯಕನನ್ನಾಗಿ ಮಾಡಿದರೂ ಬಿಜೆಪಿಯಲ್ಲಿ ಒಳರಾಜಕೀಯ ನಡೆಯುವುದು ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕೃಷ್ಣಮಣಿ