‘ಪಠ್ಯ ಪರಿಷ್ಕರಣೆಗೆ ಅವರನ್ನು ಏಕೆ ಸೇರಿಸಿಕೊಂಡಿದ್ದು, ಇದನ್ನು ಏಕೆ ಸೇರಿಸಿದ್ದು ಎಂದು ಕೆಲವರು ಕೇಳುತ್ತಾರೆ. ಹಾಗೆ ಕೇಳುವವರು ಕೂಪಮಂಡೂಕಗಳು. ಇದು ಭಾರತೀಕರಣ ಮತ್ತು ತುಕ್ಡೇ ಗ್ಯಾಂಗ್ ನಡುವಿನ ಸಂಘರ್ಷ. ರಾಷ್ಟ್ರೀಕರಣದ ಚಿಂತನೆ ಹಾಗೂ ವೈಚಾರಿಕತೆ ಮೂಲಕ ಅದನ್ನು ಎದುರಿಸಬೇಕು. ಇದರ ವಿರುದ್ಧ ದೀರ್ಘ ಕಾಲ ಹೋರಾಟ ಮಾಡಬೇಕಿದೆ. ಇಂಥ ಎಲ್ಲ ಕಾಯಿಲೆಗಳಿಗೂ ನಮ್ಮಲ್ಲಿರುವ ರಾಮಬಾಣ ಭಾರತೀಯತೆ’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸಿಟಿಜನ್ಸ್ ಕೌನ್ಸಿಲ್ನ ಮಂಗಳೂರು ಘಟಕವು ಇಲ್ಲಿ ಶನಿವಾರ ಏರ್ಪಡಿಸಿದ್ದ ‘ಪಠ್ಯ ರಾಜಕಾರಣ- ಸತ್ಯ- ಮಿಥ್ಯ’ ಸಂವಾದದಲ್ಲಿ ಮಾತನಾಡಿದ ಅವರು, ‘ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ನೈಜ ಭಾರತೀಯತೆ ಪರಿಚಯಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ. ಇದರಿಂದ ಈಗಾಗಲೇ ಕೆಲವರಿಗೆ ಮರ್ಮಾಘಾತವಾಗಿ ವಿಲ ವಿಲ ಒದ್ದಾಡುತ್ತಿದ್ದಾರೆ. ಹಾಗಾಗಿ, ಎಲ್ಲಿ ಹಿಡಿಯಬೇಕೋ ಅಲ್ಲೇ ಹಿಡಿದಿದ್ದೇವೆ. ಇನ್ನಷ್ಟು ಬಲವಾಗಿ ಹಿಡಿಯಬೇಕು. ಅವರು ಇನ್ನಷ್ಟು ಒದ್ದಾಡ ಬೇಕು…..’ ಎಂದು ಹೇಳಿದ್ದಾರೆ.
‘ಸರ್ಕಾರ ಈ ವಿಚಾರದಲ್ಲಿ ಹೇಡಿತನದಿಂದ ವರ್ತಿಸುವ ಪ್ರಶ್ನೆಯೇ ಇಲ್ಲ. ಕೇವಲ ಅಧಿಕಾರ ಹಿಡಿಯಲು ನಾವು ಸರ್ಕಾರದ ಭಾಗವಾಗಿದ್ದಲ್ಲ. ನಮಗೆ ವೈಚಾರಿಕ ಉದ್ದೇಶ ಇದೆ. ಅದನ್ನು ಈಡೇರಿಸಲೆಂದೇ ಸರ್ಕಾರದ ಭಾಗ ಆಗಿದ್ದೇವೆ’ ಎಂದು ಹೇಳಿದ್ದಾರೆ.
‘ಪಠ್ಯ ಪರಿಷ್ಕರಣೆಗೆ ಅವರನ್ನು ಏಕೆ ಸೇರಿಸಿಕೊಂಡಿದ್ದು, ಇದನ್ನು ಏಕೆ ಸೇರಿಸಿದ್ದು ಎಂದು ಕೆಲವರು ಕೇಳುತ್ತಾರೆ. ಹಾಗೆ ಕೇಳುವವರು ಕೂಪಮಂಡೂಕಗಳು. ಸತ್ಯ ಹೊರಬಾರದಂತೆ ಮತ್ತು ಭಾರತೀಯರು ಅಭಿಮಾನಪಡದಂತೆ ನೋಡಿಕೊಳ್ಳುವುದೇ ಅವರ ಉದ್ದೇಶ. ಅವರ ಹುನ್ನಾರ ಅರ್ಥಮಾಡಿಕೊಂಡು ಈ ವೈಚಾರಿಕ ಯುದ್ಧದಲ್ಲಿ ಸತ್ಯ ಹಾಗೂ ಭಾರತೀಯತೆ ಗೆಲ್ಲುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನಕಾರಾತ್ಮಕ ಅಭಿಪ್ರಾಯ ಸೃಷ್ಟಿಸುವುದರ ವಿರುದ್ಧ ಹೋರಾಡಬೇಕಿದೆ. ಇದು ಭಾರತೀಕರಣ ಮತ್ತು ತುಕ್ಡೇ ಗ್ಯಾಂಗ್ ನಡುವಿನ ಸಂಘರ್ಷ. ರಾಷ್ಟ್ರೀಕರಣದ ಚಿಂತನೆ ಹಾಗೂ ವೈಚಾರಿಕತೆ ಮೂಲಕ ಅದನ್ನು ಎದುರಿಸಬೇಕು. ಇದರ ವಿರುದ್ಧ ದೀರ್ಘ ಕಾಲ ಹೋರಾಟ ಮಾಡಬೇಕಿದೆ. ಇಂಥ ಎಲ್ಲ ಕಾಯಿಲೆಗಳಿಗೂ ನಮ್ಮಲ್ಲಿರುವ ರಾಮಬಾಣ ಭಾರತೀಯತೆ’ ಎಂದರು.
‘ನಮಗೆ ಸಂಬಂಧವೇ ಇಲ್ಲದ ಲೆನಿನ್ ಬಗ್ಗೆ ಮಾರ್ಕ್ಸ್ ಬಗ್ಗೆ ಪುಸ್ತಕಗಟ್ಟಲೆ ಬರೆದರೂ ನಾವು ಓದಬೇಕಂತೆ. ಭಾರತಕ್ಕೆ ಸ್ವಾತಂತ್ರ್ಯವೇ ಸಿಗದ ಕಾಲದಲ್ಲಿ ಇಡೀ ದೇಶದಲ್ಲಿ ರಾಷ್ಟ್ರೀಯತೆ ಭಾವನೆಯನ್ನು ಹಿಂದುತ್ವದ ಮೂಲಕ ಡಾ.ಹೆಡಗೇವಾರ್ ಅವರು ಜಾಗೃತಿ ಗೊಳಿಸಿದರು. ಇದನ್ನು ತಿಳಿದುಕೊಳ್ಳುವುದಕ್ಕಾದರೂ ಅವರ ಬಗ್ಗೆ ಓದಬೇಕಲ್ಲವೇ. ವಿರೋಧ ಮಾಡಬೇಕು ಎಂದಾದರೂ ಆ ವಿಚಾರವನ್ನು ಅಧ್ಯಯನ ಮಾಡಬೇಕಲ್ಲವೇ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್, ಕಮ್ಯುನಿಷ್ಟ್ ಹಾಗೂ ಮತಾಂತರ ಮಾಫಿಯಾ ಸೇರಿ ದೇಶದ ನೈಜ ಇತಿಹಾಸವನ್ನು ಮರೆಮಾಚಿವೆ. ಮತಗಳನ್ನು ಪಡೆಯುವುದಷ್ಟೇ ಕಾಂಗ್ರೆಸ್ನ ರಾಜಕೀಯ ಕಾರ್ಯಸೂಚಿ. ರಾಷ್ಟ್ರೀಯತೆಯ ನೆಲೆಯು ಕಮ್ಯುನಿಸಂ ಕಳೆಯನ್ನು ಬೆಳೆಯಲು ಬಿಡುವುದಿಲ್ಲ. ಹಾಗಾಗಿ ರಾಷ್ಟ್ರೀಯತೆಯನ್ನು ದುರ್ಬಲಗೊಳಿಸುವುದೇ ಕಮ್ಯುನಿಷ್ಟರ ಕಾರ್ಯಸೂಚಿ. ನಮ್ಮತನದ ಬಗ್ಗೆ ಅಭಿಮಾನ ಪಡುವ ಸಂಗತಿಗಳನ್ನು ಮರೆಮಾಚುವುದು ಮತಾಂತರ ಮಾಫಿಯಾದ ಉದ್ದೇಶ. ಈ ಮೂವರು ಸೇರಿ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸಲು ಸಂಚು ರೂಪಿಸಿದ್ದಾರೆ’ ಎಂದು ಆರೋಪಿಸಿದರು.
‘ಅಜಂತಾ, ಎಲ್ಲೋರಾ, ಬೇಲೂರು ಹಳೆಬೀಡಿನಂತಹ ಶಿಲ್ಪವನ್ನು ಕಾಡುಜನ ನಿರ್ಮಾಣ ಮಾಡಲು ಸಾಧ್ಯವಾಗುತ್ತಿತ್ತಾ. ಪ್ರಾಚೀನ ಸಂಸ್ಕೃತಿ ಪರಂಪರೆ ಜ್ಞಾನ ಕಲಿಸುವಾಗ ಇವರು ವಿಲವಿಲ ಒದ್ದಾಡುತ್ತಾರೆ. ಗಣಿತ ಜ್ಞಾನ, ನಮ್ಮ ತರ್ಕ, ಶರೀರಶಾಸ್ತ್ರ, ವಾಸ್ತುಶಿಲ್ಪ, ಶಿಲ್ಪಕಲೆ ಇದನ್ನೆಲ್ಲ ಕಲಿಸಿದರೆ ಭಾರತ ಎದ್ದು ನಿಲ್ಲುತ್ತದೆ ಎಂಬ ಆತಂಕ ಅವರದು’ ಎಂದರು.