‘ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆ ನಡೆಸಲು ಕೋರಿದ್ದ ಅನುಮತಿಯನ್ನು ರಾಜ್ಯಪಾಲರು ಕಾನೂನುಬಾಹಿರವಾಗಿ ನಿರಾಕರಿಸಿ, ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ’ ಎಂದು ಮಾಜಿ ಸಂಸ್ದರಾದ ವಿ.ಎಸ್ ಉಗ್ರಪ್ಪ ಆರೋಪಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಹೆಚ್.ಎಂ ರೇವಣ್ಣ ಅವರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಉಗ್ರಪ್ಪ ಅವರು, ‘ಶ್ರೀರಾಮುಲು ಅವರಿಗೆ ಮಾನ ಮರ್ಯಾದೆ ಇದ್ದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಮೊಮ್ಮಗ ಹಾಗೂ ಇತರ ಸದಸ್ಯರ ವಿರುದ್ಧ ಬಿಡಿಎ ಅಪಾರ್ಟ್ಮೆಂಟ್ ನಿರ್ಮಾಣ ವಿಚಾರದಲ್ಲಿ 25 ಕೋಟಿ ಲಂಚವನ್ನು ಶೆಲ್ ಕಂಪನಿಗಳಿಂದ ಆರ್ ಟಿಜಿಎಸ್ ಮೂಲಕ ಪಡೆದಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನಿಮ್ಮ ಮುಂದೆ ಹಾಗೂ ವಿಧಾನ ಸಭೆಯಲ್ಲಿ ಇಟ್ಟಿದ್ದರು. ಇನ್ನು ಭದ್ರಾ ಮೇಲ್ದಂಡೆ ಹಾಗೂ ನೀರಾವರಿ ಇಲಾಖೆ ಟೆಂಡರ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಅಂತಾ ಅವರದೇ ಪಕ್ಷದ ಶಾಸಕರು ಹೇಳಿದ್ದಾರೆ. ಇಂದು ರಾಜ್ಯದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದ್ದು, ಇದರ ಉಗಮ ಸ್ಥಾನ ರಾಜ್ಯದ ಮುಖ್ಯಮಂತ್ರಿಗಳ ನಿವಾಸವಾಗಿದೆ. ನಮ್ಮ ಸರ್ಕಾರ ಇದ್ದಾಗ ಕಮಿಷನ್ ಸರ್ಕಾರ ಎಂದಿದ್ದರು. ಆದರೆ ಇಂದು ಅವರದೇ ಪಕ್ಷದ ಶಾಸಕರು ಇವರ ಕಮಿಷನ್ ಕಥೆಯಗಳನ್ನು ಬಿಚ್ಚಿಡುತ್ತಿದ್ದಾರೆ’ ಎಂದರು.
‘ಆರ್ ಟಿಜಿಎಸ್ ಮೂಲಕ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಜೆ. ಅಬ್ರಾಹಂ ಎಂಬುವವರು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಇಡಿ ಆ ದೂರಿನ ಅನ್ವಯ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರ ವಿಚಾರಣೆ ನಡೆಸುತ್ತಿದೆ ಎಂದು ಮಾಧ್ಯಮಗಳೇ ವರದಿ ಮಾಡಿವೆ. ಇದರ ಜೊತೆಗೆ ಕ್ರಿಮಿನಲ್ ಪ್ರೊಸೀಜರ್ 200 ಅಡಿಯಲ್ಲಿ ಈ ದೂರನ್ನು ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪಿಸಿಆರ್ 40/2021 ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 19ನೇ ಸೆಕ್ಷನ್ ಅಡಿಯಲ್ಲಿ ವಿಚಾರಣೆ ನಡೆಸಲು ಅನುಮತಿಯನ್ನು ರಾಜ್ಯಪಾಲರು ನೀಡಬೇಕು ಎಂದು ಅಬ್ರಾಹಂ ಅವರು ಮನವಿ ಮಾಡಿದ್ದರು. ಆದರೆ ರಾಜ್ಯಪಾಲರು ಸುಮಾರು ಏಳುವರೆಯಿಂದ ಎಂಟು ತಿಂಗಳು ಸಮಯಾವಕಾಶ ತೆಗೆದುಕೊಂಡಿದ್ದಾರೆ’ ಎಂದು ವಿವರಿಸಿದರು.
‘ಈ ಹಿಂದೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ವಿಜಿಲೆನ್ಸ್ ಕಮಿಷನ್ ತೀರ್ಪಿನ ಪ್ರಕಾರ ಯಾವುದೇ ಅನುಮತಿಯನ್ನು ಅನುಮತಿ ನೀಡಬೇಕಾದವರು 3+1 ತಿಂಗಳ ಒಳಗಾಗಿ ಅನುಮತಿ ನೀಡಬೇಕು. ಒಂದು ವೇಳೆ ಈ ಕಾಲಮಿತಿಯಲ್ಲಿ ತನ್ನ ತೀರ್ಮಾನ ತಿಳಿಸದಿದ್ದರೆ ಅದನ್ನು ವಿಚಾರಣೆ ನಡೆಸಲು ಪರೋಕ್ಷ ಒಪ್ಪಿಗೆ ಎಂದು ಪರಿಗಣಿಸಬೇಕು ಎಂದು ಹೇಳಿತ್ತು. ಆದರೆ ನಮ್ಮ ರಾಜ್ಯ ಪಾಲರು ಈ ವಿಚಾರವಾಗಿ ಏಳುವರೆ ತಿಂಗಳ ನಂತರ ಅನುಮತಿ ನಿರಾಕರಿಸಿದ್ದಾರೆ. ರಾಜ್ಯಪಾಲರು ತಮ್ಮ ಆದೇಶವನ್ನು ಅರ್ಜಿದಾರರಿಗೆ ನೀಡದೇ, ನೇರವಾಗಿ ಪೊಲೀಸ್ ಅಧಿಕಾರಿ ಹಾಗೂ ಪ್ರಾಸಿಕ್ಯೂಷನ್ ಅವರಿಗೆ ಕಳುಹಿಸಿದ್ದಾರೆ’ ಎಂದು ತಿಳಿಸಿದರು.
‘ಯಾವುದೇ ರಾಜ್ಯಪಾಲರ ಅಧಿಕಾರ ಅವಧಿ 5 ವರ್ಷ. ಒಂದುವೇಳೆ ಅವರ ಅಧಿಕಾರ ಮುಂದುವರಿಯಬೇಕಾದರೆ ಅಧಿಕಾರ ವಿಸ್ತರಣೆ ಆಗಬೇಕು. ಆದರೆ ನಮ್ಮ ರಾಜ್ಯಪಾಲರು ಅಧಿಕಾರಕ್ಕೆ ಬಂದು 7 ವರ್ಷವಾಗಿದೆ. ಅಧಿಕಾರ ಅವಧಿ ಮುಗಿದಿದ್ದರೂ ಅಧಿಕಾರ ವಿಸ್ತರಣೆಯನ್ನು ಪಡೆದಿಲ್ಲ, ರಾಜಿನಾಮೆ ಕೊಟ್ಟು ಹೋಗಿಲ್ಲ. ರಾಜ್ಯಪಾಲರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಮುಖ್ಯಮಂತ್ರಿಗಳು ಯಡಿಯೂರಪ್ಪ ಹಾಗೂ ಅವರ ಸಂಪುಟದ ಮಂತ್ರಿಗಳ ಮೇಲೆ ಇರುವ ಪ್ರಕರಣದ ವಿಚಾರಣೆ ನಡೆಸಲು ಏಳುವರೆ ತಿಂಗಳ ನಂತರ ಅನುಮತಿ ನಿರಾಕರಿಸಿದೆ. ಇದು ಬೇಲಿನೆ ಎದ್ದು ಹೊಲ ಮೇಯುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಸಾಕ್ಷಿ. ಯಾರು ಸಂವಿಧಾನ ರಕ್ಷಣೆ ಮಾಡಿ, ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ಶಿಕ್ಷೆ ನೀಡಬೇಕಿತ್ತೋ, ಅವರೇ ರಕ್ಷಣೆಗೆ ನಿಂತಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಯಡಿಯೂರಪ್ಪನವರ ಕಲೆಕ್ಷನ್ ನಲ್ಲಿ ರಾಜ್ಯಪಾಲರಿಗೂ ಪಾಲು ಇದೆಯಾ ಎಂದು ಜನಸಾಮಾನ್ಯರು ಮಾತನಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.
‘ಇಷ್ಟು ತಡವಾಗಿ ವಿಚಾರಣೆ ನಿರಾಕರಿಸಿರುವುದೇಕೆ? ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ವಿಜಿಲೆನ್ಸ್ ಸಮಿತಿ ನಿರ್ದೇಶನದಂತೆ 4 ತಿಂಗಳವರೆಗೂ ತೀರ್ಮಾನ ಪ್ರಕಟಿಸದಿದ್ದರೆ ಅದನ್ನು ವಿಚಾರಣೆಗೆ ಒಪ್ಪಿಗೆ ಎಂದೇ ಪರಿಗಣಿಸಬೇಕು. ಆದರೆ ಏಳುವರೆ ತಿಂಗಳ ನಂತರ ವಿಚಾರಣೆ ನಿರಾಕರಿಸಿರುವುದೇಕೆ? ಈ ಪ್ರಕರಣದಲ್ಲಿ ಯಡಿಯೂರಪ್ಪನವರಿಗೆ, ಪ್ರಾಸಿಕ್ಯೂಟರ್ ಅವರಿಗೆ, ರಾಜ್ಯ ಸರ್ಕಾರಕ್ಕೆ ನೋಟೀಸ್ ಇಲ್ಲ. ಆದರೂ ಮುಖ್ಯಮಂತ್ರಿಗಳ ಪರವಾಗಿ ಪ್ರಾಸಿಕ್ಯೂಟರ್ ಹಾಗೂ ಎಸಿಬಿಯ ಡಿವೈಎಸ್ ಪಿ ಅವರು ವಿಚಾರಣೆಗೆ ಹಾಜರಾಗಿ, ರಾಜ್ಯಪಾಲರು ವಿಚಾರಣೆ ಅನುಮತಿ ನಿರಾಕರಿಸುವ ಆದೇಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ನ್ಯಾಯಾಧೀಶರು ವಿಚಾರಣೆ ಪ್ರಕ್ರಿಯೆ ವೇಳೆ ಹೇಳಿರುವ ದಾಖಲೆ ಇದೆ. ರಾಜ್ಯಪಾಲರು ಅರ್ಜಿದಾರರಿಗೆ ತಮ್ಮ ನಿರಾಕರಣೆ ಆದೇಶವನ್ನು ರವಾನಿಸದೇ, ಪ್ರಾಸಿಕ್ಯೂಟರ್ ಹಾಗೂ ಡಿವೈಎಸ್ ಪಿ ಅವರಿಗೆ ಕಳುಹಿಸಿದ್ದೇಕೆ? ಅಂದರೆ ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಕಚೇರಿ ಅಥವಾ ರಾಜ್ಯಪಾಲರ ಕಚೇರಿಯ ಅಧಿಕಾರ ದುರ್ಬಳಕೆಯಾಗಿರುವುದು ಸ್ಪಷ್ಟವಾಗಿದೆ’ ಎಂದು ಆರೋಪಿಸಿದರು.

‘ಇಷ್ಟೆಲ್ಲಾ ಆದ ಮೇಲೆ ರಾಜ್ಯಪಾಲರು, ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಪ್ರಧಾನಮಂತ್ರಿಗಳು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೋ ಗೊತ್ತಿಲ್ಲ’ ಎಂದರು.
‘ಶ್ರೀರಾಮುಲು ಅವರು ಮಂತ್ರಿ ಆದ ನಂತರ ಅವರ ಆಪ್ತ ಸಹಾಯಕರು ನಿಗೂಢವಾಗಿ ಸಾವನ್ನಪ್ಪುತ್ತಾರೆ. ಆ ಆಪ್ತಸಹಾಯಕರು ಇದ್ದ ಸ್ಥಳದಲ್ಲೇ ರಾಮುಲು ಅವರ ಮತ್ತೊಬ್ಬ ಆಪ್ತರು ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗುತ್ತಾರೆ. ನಿನ್ನೆ ಬಂಧನಕ್ಕೆ ಒಳಗಾಗಿರುವ ರಾಜಣ್ಣ ಎಂಬುವವರು, ಶ್ರೀರಾಮುಲು ಅವರು ಮಂತ್ರಿಯಾದಾಗಲೆಲ್ಲಾ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಈತ ಮುಖ್ಯಮಂತ್ರಿಗಳು, ಅವರ ಪುತ್ರರ ಹೆಸರು ಬಳಸಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಇವರ ವಿರುದ್ಧ ವಂಚನೆ ಪ್ರಕರಣದಲ್ಲಿ ದೂರು ನೀಡಿರುವವರು ಬೇರಾರೂ ಅಲ್ಲ ಸ್ವತಃ ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ.
ಇವರು ಮಾಡಿರುವ ಅನಾಚಾರಗಳು ಹೊರಗೆ ಬರುತ್ತದೆ. ಇವುಗಳಿಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರೇ ನೇರ ಹೊಣೆ ಎಂದು ಬಯಲಾಗುತ್ತದೆ ಎಂದು ವಿಜಯೇಂದ್ರ ಅವರು ಈ ದೂರು ನೀಡಿ ತಪ್ಪಿಸಿಕೊಳ್ಳು ಪ್ರಯತ್ನಿಸಿದ್ದಾರೆ. ಇಷ್ಟಾದರೂ ಶ್ರೀರಾಮುಲು ಅವರು ಹೇಗೆ ಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ? ರಾಮುಲು ಅವರು ಇಷ್ಟು ದಿನ ಆತನನ್ನು ರಕ್ಷಣೆ ಮಾಡಿಕೊಂಡು ಬಂದಿದ್ದರು. ದೇಶದ ಪ್ರಧಾನಿಗಳು ಮಾತೆತ್ತಿದರೆ ನಾನು ತಿನ್ನುವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ ಅಂತಾರೆ. ಅದು ನಿಜವೇ ಆದರೆ ಕೂಡಲೇ ಯಡಿಯೂರಪ್ಪನವರು ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕ್ರಮ ಜರುಗಿಸಬೇಕು. ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣದಲ್ಲಿ ವಿಚಾರಣೆಗೆ ಅವಕಾಶ ನೀಡಬೇಕು, ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿಚಾರಣೆಯೂ ಆಗಬೇಕು. ಶ್ರೀರಾಮುಲು ಅವರು ರಾಜೀನಾಮೆ ಕೊಟ್ಟು ವಿಚಾರಣೆಗೆ ಹಾಜರಾಗಬೇಕು’ ಎಂದು ಆಗ್ರಹಿಸಿದರು.
ವಾಲ್ಮೀಕಿ ಸಮಾಜದ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಲಾಗಿದೆ:
‘ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಆಸೆ ತೋರಿಸಿದ ಬಿಜೆಪಿ ನಾಯಕರು ಇಬ್ಬರು ವಾಲ್ಮೀಕಿ ಸಮುದಾಯಕ್ಕೆ ಸೇರಿದ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸುತ್ತಿದ್ದಾರೆ. ಕುರಿಯನ್ನು ಕೊಬ್ಬಿಸಿ ಬಲಿ ಕೊಡುವ ಹಾಗೆ ಇವರನ್ನು ಈಗ ಬಲಿಕೊಟ್ಟಿದ್ದಾರೆ. ಬಳ್ಳಾರಿ ದಣಿಗಳು ಎಂದು ಶ್ರೀರಾಮುಲು ಅವರನ್ನು, ಬೆಳಗಾವಿ ಸಾಹುಕಾರ್ ಎಂದು ರಮೇಶ್ ಜಾರಕಿಹೊಳಿ ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದವರು, ಈಗ ಅವರನ್ನು ಹಂತಹಂತವಾಗಿ ಮುಗಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಬೆಳಗಾವಿ ನಾಯಕರೇ ತಮ್ಮ ವಿರುದ್ಧ ಅವರದೇ ಪಕ್ಷದ ನಾಯಕರು ಷಡ್ಯಂತ್ರ ನಡೆಸಿದ್ದಾರೆ ಅಂತಾ ಹೇಳಿದ್ದಾರೆ. ವಾಲ್ಮೀಕಿ ಸಮುದಾಯ ಎಂದರೆ ಪ್ರಾಮಾಣಿಕತೆ ಹಾಗೂ ಬದ್ಧತೆಗೆ ಹೆಸರುವಾಸಿಯಾದ ಸಮಾಜ. ಈ ಇಬ್ಬರು ನಾಯಕರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಇಷ್ಟು ಹೊತ್ತಿಗೆ ರಾಜೀನಾಮೆ ಕೊಟ್ಟು ಅವರ ವಿರುದ್ಧ ತೊಡೆತಟ್ಟಿ ನಿಲ್ಲಬೇಕಿತ್ತು. ಈ ಷಡ್ಯಂತ್ರದ ವಿರುದ್ಧ ವಾಲ್ಮೀಕಿ ಸಮಾಜ ಬಿಜೆಪಿಗೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ’ ಎಂದರು.
ನಂತರ ಮಾತನಾಡಿದ ಮಾಜಿ ಸಚಿವ ಹೆಚ್.ಎಂ ರೇವಣ್ಣ ಅವರು, ‘ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ಈ ರೀತಿ ಭ್ರಷ್ಟಾಚಾರ ಆರೋಪ ಹೊತ್ತಿದ್ದನ್ನು ನಾವು ನೋಡಿದ್ದೇವೆ. ಅಂದು ಚೆಕ್ ಮೂಲಕ ಇದ್ದ ವ್ಯವಹಾರ, ಇಂದು ಆರ್ ಟಿಜಿಎಸ್ ಮೂಲಕ ನಡೆಯುತ್ತಿದೆ. ಆದರೆ ಇಂದು ಚರ್ಚೆ ಆಗುತ್ತಿರುವುದು ರಾಮುಲು ಅವರ ಆಪ್ತರ ವಿರುದ್ಧ ಮುಖ್ಯಮಂತ್ರಿ ಅವರ ಪುತ್ರರು ತಮ್ಮ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ದೂರು ನೀಡಿರುವುದು ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬಂತೆ ಸಾಬೀತಾಗುತ್ತದೆ. ಅವರ ಪಕ್ಷದ ನಾಯಕರೇ ಕೊಟ್ಟಿರುವ ಹೇಳಿಕೆ ನೋಡಿದರೆ ಇದು ಅಪ್ಪ ಮಕ್ಕಳ ಡಬಲ್ ಡೆಕ್ಕರ್ ಸರ್ಕಾರವಾಗಿದೆ. ಅದಕ್ಕೆ ಪೂರಕವಾಗಿ ಈ ಪ್ರಕರಣವೂ ಸಾಕ್ಷಿಯಾಗಿದೆ’ ಎಂದರು.
‘ಈಶ್ವರಪ್ಪ ಅವರು ಅಧಿಕಾರಕ್ಕೆ ಬಂದ ನಂತರ ಅವರ ಮಾತುಗಳಿಗೆ ಹಾಗೂ ಅವರ ನಡೆಗೆ ಸಂಬಂಧವೇ ಇಲ್ಲದಂತಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿದ್ದ ಈಶ್ವರಪ್ಪ ಅವರು ನಂತರ ನಾನು ರಾಜ್ಯಪಾಲರ ಜತೆ ಚರ್ಚೆ ಮಾಡಲು ಹೋಗಿದ್ದೆ ಎಂದರು. ಈ ರೀತಿ ಅಸಂಬದ್ಧ ಹೇಳಿಕೆ ನೀಡುವುದರಲ್ಲಿ ಯಾರಾದರು ಮೊದಲಿಗರಿದ್ದರೆ ಅದು ಈಶ್ವರಪ್ಪನವರು. ಅದೇ ರೀತಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ. ಈ ಹಿಂದೆ ಯಡಿಯೂರಪ್ಪನವರು ಇದೇ ರೀತಿ ಹೇಳಿಕೆ ಕೊಟ್ಟಿದ್ದರು, ಆದರೆ ಜನ ಮಾತ್ರ ಪದೇ ಪದೆ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಕೋವಿಡ್ ಸಮಯದಲ್ಲಿ ಅವರ ಆಡಳಿತ, ನಡುವಳಿಕೆ, ಭ್ರಷ್ಟಾಚಾರವನ್ನು ಜನ ನೋಡುತ್ತಿದ್ದಾರೆ. ಅವರೇ ತೀರ್ಮಾನಿಸುತ್ತಾರೆ. ಉಪಮುಖ್ಯಮಂತ್ರಿಯಾಗಿದ್ದ ಅವರು ಈಗ ಮಂತ್ರಿಸ್ಥಾನಕ್ಕೆ ತೃಪ್ತರಾಗಿರುವುದನ್ನು ನಾನು ಅಭಿನಂದಿಸುತ್ತೇನೆ. ಇನ್ನುಮುಂದಾದರೂ ಅವರು ಅರ್ಥಪೂರ್ಣವಾದ ಹೇಳಿಕೆ ನೀಡಲಿ’ ಎಂದು ತಿರುಗೇಟು ನೀಡಿದರು.