ಕೊರೋನಾ ಹೆಚ್ಚಾದಾಗ ವೀಕೆಂಡ್ ಕರ್ಫ್ಯೂ ಹೇರಿದ್ದ ಸರ್ಕಾರ ಈಗ ವೀಕೆಂಡ್ ಲಾಕ್ ಗೆ ಇತಿಶ್ರೀ ಹಾಡಿದೆ. ಸಾರ್ವಜನಿಕ ವಲಯಗಳಲ್ಲಿ ಹಾಗೂ ಉದ್ಯಮಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ ನೈಟ್ ಕರ್ಫ್ಯೂ ಹಾಗೂ ಇತರೆ ನಿರ್ಬಂಧಗಳು ಮುಂದುವರೆಯಲಿದೆ.
ವೀಕೆಂಡ್ ಕರ್ಫ್ಯೂ ಮಾತ್ರ ಇಲ್ಲ.. ಉಳಿದೆಲ್ಲಾ ನಿರ್ಬಂಧಗಳು ಮುಂದುವರಿಕೆ !
ಇಂದು ಸಿಎಂ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ಸಭೆ ನಡೆಸಿದ್ದು ಎಲ್ಲರ ಚಿತ್ತ ಅತ್ತ ನೆಟ್ಟಿತ್ತು. ವೀಕೆಂಡ್ ಕರ್ಫ್ಯೂ ಕಳೆದರಡು ವಾರದಿಂದ ಜಾರಿಯಲ್ಲಿದ್ದು ಸಾರ್ವಜನಿಕ ವಲಯದಲ್ಲಿ ಸರ್ಕಾರ ಭಾರೀ ಟೀಕೆ ಟಿಪ್ಪಣಿಗಳನ್ನು ಎದುರಿಸುವಂತೆ ಮಾಡಿತ್ತು. ಜೊತೆಗೆ ಉದ್ದಿಮೆದಾರರು ಕೂಡ ವೀಕೆಂಡ್ ಕರ್ಫ್ಯೂ ಬಗ್ಗೆ ಕೆಂಡಕಾರಿದ್ದರು. ಇದೀಗ ಎಲ್ಲರ ಬೇಡಿಕೆಗೆ ಮನ್ನಣೆ ಸಿಕ್ಕಿದ್ದು, ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿಡುವುದಾಗಿ ಹೇಳಿದೆ. ಈ ಆದೇಶ ನಾಳೆ ಶನಿವಾರದಿಂದಲೇ ಜಾರಿಯಾಗಲಿದ್ದು, ನಾಳೆ ಎಂದಿನಂತೆ ಸಾರ್ವಜನಿಕ ಓಡಾಟ, ವ್ಯಾಪಾರ ಚಟುವಟಿಕೆಗಳು ನಡೆಯಲಿದೆ.

ನೈಟ್ ಕರ್ಫ್ಯೂ, ಇತರೆ ನಿರ್ಬಂಧಗಳು ಮುಂದುವರಿಕೆ !
ಸದ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಮಾತ್ರ ರದ್ದು ಮಾಡಿದೆ. ಆದರೆ ಎಂದಿನಂತೆ ನೈಟ್ ಕರ್ಫ್ಯೂ ಮುಂದುವರೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಇದರ ಜೊತೆಗೆ ಹೋಟೆಲ್, ರೆಸ್ಟೋರೆಂಟ್ ಗಳಿಗೆ ನೀಡಲಾದ 50-50 ರೂಲ್ಸ್ ಕೂಡ ಮುಂದುವರೆಯಲಿದೆ. ಬೆಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿಯಲ್ಲಿರಲಿದೆ. ಜನರು ಗುಂಪುಗಟ್ಟಿ ಓಡಾಡುವುದು ಎಲ್ಲವನ್ನೂ ನಿಷೇಧಿಸಿದೆ. ಇದರ ಜೊತೆಗೆ ಬೆಂಗಳೂರು ಹೊರತು ಪಡಿಸಿ ಇತರೆ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರಯಲು ಅನುಮತಿ ನೀಡಲಾಗಿದೆ. ಆದರೆ ಒಂದು ಶಾಲೆಯಲ್ಲಿ 5 ಮಕ್ಕಳ ವರೆಗೆ ಪಾಸಿಟಿವ್ ಬಂದರೆ 3 ದಿನ ಹಾಗೂ 25ಕ್ಕೂ ಹೆಚ್ಚು ಮಕ್ಕಳಿಗೆ ಪಾಸಿಟಿವ್ ಬಂದ್ರೆ 7 ದಿನ ಶಾಲೆ ಬಂದ್ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಬಿಇಓಗಳು ತೀರ್ಮಾನ ಮಾಡುವಂತೆ ಸೂಚನೆ ನೀಡಲಾಗಿದೆ.
ಇನ್ನು ಮುಂದಿನ ದಿನಗಳಲ್ಲಿ ಕೊರೋನಾ ಸ್ಪೈಕ್ ಆಗುವ ಸಾಧ್ಯಾಸಾಧ್ಯತೆಗಳ ಬಗ್ಗೆ ತಜ್ಞರು ಈ ಹಿಂದೆಯೇ ಎಚ್ಚರಿಸಿದ್ದಾರೆ. ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಸದ್ಯಕ್ಕೆ ಕರ್ಫ್ಯೂ ತೆರವುಗೊಳಿಸಲಾಗಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ. ಇನ್ನು ಸರ್ಕಾರದ ಈ ನಿರ್ಧಾರವನ್ನು ಎಲ್ಲಾ ಉದ್ಯಮಿಗಳು ಒಕ್ಕೊರಲಿನಿಂದ ಸ್ವಾಗತಿಸಿದ್ದಾರೆ.






