ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿ ಹುಲಿಯ ಚರ್ಮ, ಅಸ್ತಿ ಪಂಜರ ಮತ್ತು ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರು ಜನ ಆರೋಪಿಗಳನ್ನು ಕರ್ನಾಟಕ ಅರಣ್ಯ ಇಲಾಖೆ ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸಹಾಯಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವಿಜಿಲೆನ್ಸ್) ಸೀಮಾ ಗಾರ್ಗ್ ಮಾತನಾಡಿ, ಆರು ಆರೋಪಿಗಳನ್ನು ಬಂಧಿಸಲಾಗಿದ್ದು ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ. ತನಿಖೆ ಮುಗಿದ ನಂತರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಫೆಬ್ರವರಿ 14 ರಂದು, ಮಡಿಕೇರಿ ಅರಣ್ಯ ಕೋಶವು ದೇವಮಚಿ ಮೀಸಲು ಅರಣ್ಯದ ದಿಡ್ಡಹಳ್ಳಿ ಮತ್ತು ತತ್ತಳ್ಳಿ ಬುಡಕಟ್ಟು ಜನಾಂಗದ ನಿವಾಸಿಗಳಾದ ನಾಲ್ವರನ್ನು ಬಂಧಿಸಿತು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ, ಕೊಡಗಿನ ವಿರಾಜಪೇಟೆ ತಾಲೂಕಿನ ಆನೆಚೌಕೂರು ವನ್ಯಜೀವಿ ವಲಯದ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ಮಾಲ್ಧಾರೆ ಗ್ರಾಮದಲ್ಲಿ ಘಟನೆ ವರದಿಯಾಗಿದೆ.
“ಬಂಧಿಸಲಾದ ಆರೋಪಿಗಳನ್ನು ಮತ್ತು ವಶಪಡಿಸಿಕೊಂಡ ವಸ್ತುಗಳನ್ನು ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗೆ ಹಸ್ತಾಂತರಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಅರಣ್ಯ ಅಪರಾಧ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣದ ತನಿಖೆಗಾಗಿ ಎರಡು ತಂಡಗಳನ್ನು ರಚಿಸಲಾಗಿದ್ದು, ಹುಲಿಯ ಉಳಿದ ದೇಹದ ಭಾಗಗಳು ಮತ್ತು ಅಪರಾಧದಲ್ಲಿ ಭಾಗಿಯಾಗಿರುವ ಇತರ ಸಾಧನಗಳೊಂದಿಗೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲು ಕಾರಣವಾಯಿತು, ”ಎಂದು ಅಧಿಕಾರಿ ಕುಮಾರ್ ಹೇಳಿದರು.

ಹುಲಿಯನ್ನು ಬೇಟೆಯಾಡಿದ ದಿನಾಂಕದ ಬಗ್ಗೆ ಕೇಳಿದಾಗ, ತನಿಖೆ ನಡೆಯುತ್ತಿದೆ ಮತ್ತು ಸಂಪೂರ್ಣ ತನಿಖೆಯ ನಂತರ ವಿಷಯದ ವಿವರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕುಮಾರ್ ಹೇಳಿದರು.
ಕಳೆದ ತಿಂಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೇಟಿಕುಪ್ಪೆ ವನ್ಯಜೀವಿ ಉಪವಿಭಾಗದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ ಒಂಬತ್ತು ತಿಂಗಳ ಎರಡು ಹುಲಿ ಮರಿಗಳು ಮೃತಪಟ್ಟಿದ್ದವು. ಏಪ್ರಿಲ್ 2021 ರಲ್ಲಿ, ಹುಲಿ ಸಂರಕ್ಷಿತ ಪ್ರದೇಶದಿಂದ ಹುಲಿ ಮತ್ತು ಚಿರತೆಯ ಚರ್ಮದೊಂದಿಗೆ ಬೇಟೆಗಾರರನ್ನು ಬಂಧಿಸಲಾಗಿತ್ತು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.













