ಕೊವಿಡ್ 19 ಸೋಂಕು ಶಮನವಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಜಾನುವಾರುಗಳಲ್ಲಿ ಕಾಲುಬಾಯಿ (ಎಫ್ ಎಮ್ ಡಿ) ಜ್ವರ ಕಾಣಿಸಿಕೊಂಡಿದ್ದು, ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ. ಜಾನುವಾರುಗಳಿಗೆ ಈ ವರ್ಷ ನೀಡಬೇಕಾದ ಎಫ್ ಎಮ್ ಡಿ ಲಸಿಕೆ ಕೋವಿಡ್ ಕಾರಣದಿಂದ ಸರಕಾರವು ನೀಡದೇ ಇದ್ದ ಕಾರಣ ಈ ರೋಗವು ಮತ್ತೆ ಕಾಣಿಸಿಕೊಂಡಿದೆ.
ʼಈ ರೋಗಕ್ಕೆ 2013ರಲ್ಲಿ ರಾಜ್ಯದ ಸಾವಿರಾರು ಹಸುಗಳು ಸಾವನ್ನಪ್ಪಿದ್ದವು. ಹೀಗಾಗಿ ಇಂತಹ ಕಹಿ ಘಟನೆ ಮತ್ತೆ ಮರುಕಳಿಸಿದರೆ ರಾಜ್ಯಕ್ಕೆ ತೀವ್ರ ನಷ್ಟವುಂಟಾಗಬಹುದುʼ ಎಂದು ಅನುಭವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ರೋಗವು ಜಾನುವಾರುಗಳ ಜೊಲ್ಲು, ಮೂತ್ರ ಹಾಗೂ ಮಲ, ಗಾಳಿಯಿಂದಲೂ ಹರಡುತ್ತದೆ. ದುರ್ಬಲ ಪ್ರಾಣಿಗಳು ಪ್ರಮುಖವಾಗಿ ಹಸು ಹಾಗೂ ಎಮ್ಮೆಗಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರೋಗ ನಿಯಂತ್ರಿಸಲು ಸರ್ಕಾರ ಪ್ರತೀ 6 ತಿಂಗಳುಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ನೀಡಲೇಬೇಕು. ಈ ಲಸಿಕೆಯು 180 ದಿನಗಳ ಕಾಲ ಜಾನುವಾರುಗಳನ್ನು ರಕ್ಷಣೆ ಮಾಡುತ್ತದೆ ಎಂಬ ಮಾಹಿತಿಯಿದೆ.
ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ “ಎಫ್ಎಂಡಿ ಲಸಿಕೆ ಅಭಿಯಾನವನ್ನು ಭಾರತ ಸರ್ಕಾರ ಸಮಯೋಚಿತ ಸಂದರ್ಭದಲ್ಲಿ ನಡೆಸುತ್ತಾ ಬಂದಿದೆ.ಆದರೆ ಈ ಬಾರಿಯು ಕೊರೋನಾ ಸಾಂಕ್ರಾಮಿಕ ರೋಗ ತಲೆದೋರಿರುವ ಪರಿಣಾಮ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಲಸಿಕೆ ಅಭಿಯಾನ ಆರಂಭಿಸುವಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ನಮ್ಮ ಅಧಿಕಾರಿಗಳು ಶ್ರಮ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕ ಪಶುವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಪ್ರೊಫೆಸರ್ ವೀರಗೌಡ ಬಿ.ಎಂ ಮಾತನಾಡಿ, “ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಪ್ರಾಣಿಗಳ ಸಂತಾನೋತ್ಪತ್ತಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಎಫ್ಎಂಡಿ ಕಾಯಿಲೆಯ ಹರಡುವಿಕೆ ಹೆಚ್ಚಾಗುತ್ತಿದೆ. ಸೋಂಕಿತ ಜಾನುವಾರುಗಳಿರುವ ಸ್ಥಳದಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಜಾನುವಾರುಗಳಿಗೂ ಸರ್ಕಾರ ಲಸಿಕೆ ನೀಡುತ್ತಿರುವುದು ಉತ್ತಮ ಯೋಜನೆ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.





