
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಇಂದು ವಾಟಾಳ್ ನಾಗರಾಜ್ ರ್ಯಾಲಿ ನಡೆಸಿದ್ದಾರೆ. ಶನಿವಾರದ ಕರ್ನಾಟಕದ ಬಂದ್ ಬೆಂಬಲಿಸುವಂತೆ ಬೃಹತ್ ರ್ಯಾಲಿ ಮೂಲಕ ಬೆಂಗಳೂರಿನಲ್ಲಿ ಎಚ್ಚರಿಸುವ ಕೆಲಸ ಮಾಡ್ತಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ವಾಟಾಳ್ ನಾಗರಾಜ್ ರ್ಯಾಲಿ ಮಾಡುತ್ತಿದ್ದು, ತೆರೆದ ವಾಹನದ ಮೂಲಕ ದೊಡ್ಡ ರ್ಯಾಲಿ ಹೋರಾಟಗಾರರು ಜನರಿಗೆ ತಿಳಿಸುವ ಕೆಲಸ ಮಾಡ್ತಿದ್ದಾರೆ. ತೆರೆದ ವಾಹನದಲ್ಲಿ ಮೈಕ್ ಕಟ್ಟಿಕೊಂಡು ಬಂದ್ ಬೆಂಬಲಿಸಲು ಮನವಿ ಮಾಡಲಾಗ್ತಿದೆ. ನಗರದ ಪ್ರಮುಖ ಏರಿಯಾಗಳು, ರಸ್ತೆಗಳಲ್ಲಿ ಸಂಚರಿಸಿ ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗ್ತಿದೆ.
ಬೆಂಗಳೂರಿನ ಪ್ರಮುಖ ರೋಡ್ಗಳಲ್ಲಿ ಭರ್ಜರಿ ರ್ಯಾಲಿ ನಡೆಸಿ, ಹೋಟೆಲ್, ಲಾಡ್ಜ್, ರೆಸ್ಟೋರೆಂಟ್, ಥಿಯೇಟರ್, ಮಾಲ್, ಪಿವಿಆರ್ ಸೇರಿದಂತೆ ಎಲ್ಲಾ ಅಂಗಡಿ-ಮುಂಗಟ್ಟು ಮಾಲೀಕರಿಗೆ ಕನ್ನಡ ಒಕ್ಕೂಟ ಮನವಿ ಮಾಡುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಮೈಸೂರು ಬ್ಯಾಂಕ್ ಸರ್ಕಲ್ನಿಂದ ಆರಂಭವಾಗಿ ಕೆಜಿ ರೋಡ್, ಮೆಜೆಸ್ಟಿಕ್, ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್, ಕೆಂಪೇಗೌಡ ಮೆಟ್ರೋ ಸ್ಟೇಷನ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಗಾಂಧಿನಗರ, ಮಂತ್ರಿ ಮಾಲ್ ಮೂಲಕ ಮಲ್ಲೇಶ್ವರಂ, ಓರಾಯನ್ ಮಾಲ್, ಯಶವಂತಪುರ ಮೂಲಕ ಲೂಲು ಮಾಲ್, ಕಮರ್ಷಿಯಲ್ ಸ್ಟ್ರೀಟ್, ಎಂಜಿ ರೋಡ್ ಸೇರಿದಂತೆ ಸಾಕಷ್ಟು ಏರಿಯಾಗಳಲ್ಲಿ ರ್ಯಾಲಿ ತೆರಳುತ್ತಿದೆ.

ಈ ರ್ಯಾಲಿಯಲ್ಲಿ ಕನ್ನಡದ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಾ.ರಾ. ಗೋವಿಂದು, ಕನ್ನಡಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ಕನ್ನಡ ಒಕ್ಕೂಟದ ಸಂಚಾಲಕ ಹೆಚ್.ವಿ ಗಿರೀಶ್ ಗೌಡ ಸೇರಿದಂತೆ, ಹಲವು ಕನ್ನಡಪರ ಸಂಘಟನೆಗಳು ಭಾಗಿಯಾಗಲಿವೆ. ‘ಕರ್ನಾಟಕ ಬಂದ್’ ಮಾಡಲು 20 ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಲಾಗಿದ್ದು, ಈ ಎಲ್ಲಾ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಈಡೇರಿಸಲು ಆಗ್ರಹ ಮಾಡಲಾಗ್ತಿದೆ.

ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ನೋಡುವುದಾದರೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು. ಇಡೀ ರಾಜ್ಯದ ಗಡಿನಾಡುಗಳು ಬೆಳವಣಿಗೆಯಾಗಬೇಕು. ಬೆಳಗಾವಿ ಉಳಿಸಬೇಕು. ಎಂ.ಇ.ಎಸ್ ನಿಷೇಧ ಮಾಡಬೇಕು. ಶಿವಸೇನೆ ಹಾಗೂ ಎಂ.ಇ.ಎಸ್ ಪುಂಡರನ್ನು ಗಡಿಪಾರು ಮಾಡಬೇಕು. ಬೆಳಗಾವಿ ಜಿಲ್ಲೆಯ ಅಧಿಕಾರದಲ್ಲಿರುವ ಎಲ್ಲಾ ರಾಜಕಾರಣಿಗಳು ರಾಜೀನಾಮೆ ಕೊಡಬೇಕು. ಸಾಂಬಾಜಿ ಪ್ರತಿಮೆಯನ್ನು ತೆಗೆಯಬೇಕು. ಕನ್ನಡ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಮಹದಾಯಿ-ಕಳಾಸ ಭಂಡೂರಿ ಕಾರ್ಯಗತವಾಗಬೇಕು. ಮೇಕೆದಾಟು ಯೋಜನೆ ಆಗಲೇಬೇಕು. ಕೊಪ್ಪಳ ಸುತ್ತ ಯಾವ ಕಾರ್ಖಾನೆಗಳು ಬೇಡವೇ ಬೇಡ. ಕರ್ನಾಟಕದಲ್ಲಿ ಪರಭಾಷಾ ದಬ್ಬಾಳಿಕೆ ನಿಲ್ಲಬೇಕು. ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಹಿಷ್ಕಾರ ಮಾಡಬೇಕು. ರಾಜ್ಯದಲ್ಲಿ ಹಿಂದಿ ಬೇಡವೇ ಬೇಡ ಎಂದು ಆಗ್ರಹಿಸಲಾಗಿದೆ.
