ಏಪ್ರಿಲ್ 2 ರಂದು ಹಿಂದೂ ಹೊಸ ವರ್ಷವನ್ನು ಆಚರಿಸುವ ರ್ಯಾಲಿಯಲ್ಲಿ ಕೋಮುಗಲಭೆ ಸಂಭವಿಸಿದ ಕರೌಲಿ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ರಾಜಸ್ಥಾನ ಸರ್ಕಾರ ವರ್ಗಾವಣೆ ಮಾಡಿದೆ.
ಕರೌಲಿ ಜಿಲ್ಲಾಧಿಕಾರಿ ರಾಜೇಂದ್ರ ಸಿಂಗ್ ಶೇಖಾವತ್ ಅವರನ್ನು ಇಲಾಖಾ ವಿಚಾರಣೆಯ ಆಯುಕ್ತರನ್ನಾಗಿ ಮಾಡಲಾಗಿದೆ. ಅಂಕಿತ್ ಕುಮಾರ್ ಸಿಂಗ್ ಅವರನ್ನು ಕರೌಲಿಯ ಹೊಸ ಜಿಲ್ಲಾಧಿಕಾರಿಯನ್ನಾಗಿ ಮಾಡಲಾಗಿದೆ.
ಶೇಖಾವತ್ ಅವರು ತಮ್ಮ ಹೊಸ ಆಡಳಿತಾತ್ಮಕ ಹುದ್ದೆಗಾಗಿ ಜೈಪುರಕ್ಕೆ ಹೋಗಲಿದ್ದಾರೆ ಎಂದು Scroll.in ಗೆ ತಿಳಿಸಿದ್ದಾರೆ.
ಶೇಖಾವತ್ ಅವರನ್ನು ಮೂರೇ ತಿಂಗಳಳಲ್ಲಿ ವರ್ಗಾವಣೆ ಮಾಡಲಾಗಿದೆ. ಅವರು ಜನವರಿ 17 ರಂದು ಜಿಲ್ಲಾಧಿಕಾರಿ ಹುದ್ದೆಯನ್ನು ವಹಿಸಿಕೊಂಡಿದ್ದರು.
ಏಪ್ರಿಲ್ 2 ರಂದು, ಕರೌಲಿ ನಗರದ ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಕೋಮು ಘರ್ಷಣೆಗಳು ನಡೆದಿದ್ದು, ಹಿಂದೂ ಹೊಸ ವರ್ಷವನ್ನು ಹಿನ್ನೆಲೆಯಲ್ಲಿ ಬಂದ ಬೈಕ್ ಮೆರವಣಿಗೆಯಲ್ಲಿ ಕೋಮು ಪ್ರಚೋದಕ ಹಾಡುಗಳನ್ನು ಹಾಡಲಾಗಿದ್ದು, ಇದಕ್ಕೆ ಪ್ರತಿಯಾಗಿ ರ್ಯಾಲಿ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.

ಕಲ್ಲು ತೂರಾಟಕ್ಕೆ ಪ್ರತಿಯಾಗಿ ಕೆಲವರು ಅಂಗಡಿಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ಮೂವತ್ತೈದು ಮಂದಿ ಗಾಯಗೊಂಡಿದ್ದಾರೆ. ಏಪ್ರಿಲ್ 2 ರಿಂದ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ.
ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬುಧವಾರ ತಡರಾತ್ರಿ ನಡೆದ ಪ್ರಮುಖ ಪುನರ್ರಚನೆಯಲ್ಲಿ 69 ಭಾರತೀಯ ಆಡಳಿತ ಸೇವೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.
ಸಿಬ್ಬಂದಿ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ ಮೂರು ವಿಭಾಗದ ಆಯುಕ್ತರು ಹಾಗೂ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ.
ಗೌರವ್ ಗೋಯಲ್ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಮತ್ತು ರವಿ ಜೈನ್ ಅವರನ್ನು ಜೈಪುರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳಾದ ವಿಕಾಸ್ ಸೀತಾರಾಮ್ ಭಾಲೆ, ಜಿತೇಂದ್ರ ಕುಮಾರ್ ಉಪಾಧ್ಯಾಯ ಮತ್ತು ಸನ್ವರ್ಮಲ್ ವರ್ಮಾ ಅವರನ್ನು ಜೈಪುರ, ಜೋಧ್ಪುರ ಮತ್ತು ಭರತ್ಪುರ ವಿಭಾಗೀಯ ಆಯುಕ್ತರಾಗಿ ನಿಯೋಜಿಸಲಾಗಿದೆ.