ಬೆಂಗಳೂರು : ಕೆನಡಾದಲ್ಲಿ ಕನ್ನಡಿಗ ಚಂದನ್ ಕುಮಾರ್ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರುವುದನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಖಂಡಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ನಿವಾಸಿಯಾದ ಚಂದನ್ ಕುಮಾರ್ (37 ವರ್ಷ) ಅವರು ಕೆನಡಾದಲ್ಲಿ ಹಂತಕರ ಗುಂಡಿಗೆ ಸಿಲುಕಿ ಹತ್ಯೆಯಾಗಿರುವ ಸುದ್ದಿ ತಿಳಿದು ಮನಸ್ಸು ತೀವ್ರ ಭಾರವಾಗಿದೆ. ಕಳೆದ 6 ವರ್ಷಗಳಿಂದ ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ಹತ್ಯೆಗೀಡಾಗಿರುವುದು ದುರ್ದೈವದ ಸಂಗತಿ ಎಂದು ಸೋಮಣ್ಣ ಕಂಬನಿ ಮಿಡಿದಿದ್ದಾರೆ.

ಆದಷ್ಟು ಶೀಘ್ರದಲ್ಲಿ ಮೃತರ ಪಾರ್ಥಿವ ಶರೀರವನ್ನು ಮರಳಿ ದೇಶಕ್ಕೆ ತರುವ ವ್ಯವಸ್ಥೆ ಮಾಡಬೇಕೆಂದು ಭಾರತದ ವಿದೇಶಾಂಗ ಸಚಿವರಲ್ಲಿ ಮನವಿ ಮಾಡಿದ್ದೇನೆ. ವಿದೇಶಾಂಗ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಕುಟುಂಬಸ್ಥರ ಈ ನೋವಿನ ಕ್ಷಣಗಳಲ್ಲಿ ನಾನೂ ಭಾಗಿಯಾಗಿರುವೆ ಎಂದು ಸಚಿವ ಸೋಮಣ್ಣ ಕನ್ನಡಿಗ ಚಂದನ್ ಕುಮಾರ್ ಮೇಲಿನ ಗುಂಡಿನ ದಾಳಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಏನಿದು ಘಟನೆ..?
ನೆಲಮಂಗಲ ಮೂಲದ ವ್ಯಕ್ತಿಯನ್ನು ಕೆನಡಾದಲ್ಲಿ ಐದರಿಂದ ಆರು ಬಾರಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯು ಎಲ್ ಅಂಡ್ ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿನ ವುಡ್ಬೈನ್ ಮಾಲ್ ಬಳಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಕ್ರೂರ ಹತ್ಯೆಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಹತ್ಯೆಯ ಹಿಂದಿನ ಉದ್ದೇಶ ಹಾಗೂ ಕಾರಣ ಇದುವರೆಗೂ ತಿಳಿದು ಬಂದಿಲ್ಲ.





