ಬೆಂಗಳೂರು (ಏ.03):
ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯಕ್ರಮದ ವೇಳೆ ಅಸ್ವಸ್ಥಗೊಂಡು ವೇದಿಕೆಯಲ್ಲೇ ಕುಸಿದುಬಿದ್ದ ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರ ಆರೋಗ್ಯ ಈಗ ಸ್ಥಿರವಾಗಿದೆ. ಆರಂಭದಲ್ಲಿ ಆತಂಕ ಮೂಡಿಸಿದ್ದ ಘಟನೆಗೆ ವೈದ್ಯಕೀಯ ತಪಾಸಣೆಯ ಬಳಿಕ ನಿರಾಳತೆ ದೊರೆತಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಪಿ.ಜಿ.ಆರ್. ಸಿಂಧ್ಯಾ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಸಂತೋಷ್ ಹೆಗ್ಡೆ ಅವರಿಗೆ ಏಕಾಏಕಿ ಅಸ್ವಸ್ಥತೆ ಕಾಣಿಸಿಕೊಂಡಿತು. ಎರಡು ಬಾರಿ ವಾಂತಿ ಆಗಿ ತೀವ್ರ ದೌರ್ಬಲ್ಯ ಅನುಭವಿಸಿದ ಅವರು ಮನೆಗೆ ತೆರಳಲು ವೇದಿಕೆಯಿಂದ ಇಳಿಯುವ ವೇಳೆ ಅಚಾನಕ್ ಕುಸಿದುಬಿದ್ದರು. ಸ್ಥಳದಲ್ಲಿದ್ದ ವೈದ್ಯರು ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದರು.

ಘಟನೆಯ ಸಮಯದಲ್ಲಿ ಆಂಬ್ಯುಲೆನ್ಸ್ ಲಭ್ಯವಿರದ ಹಿನ್ನೆಲೆಯಲ್ಲಿ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಮ್ಮ ಸರ್ಕಾರಿ ವಾಹನದಲ್ಲೇ ಅವರನ್ನು ಮಿಲರ್ಸ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಸಾಗಿಸಿದರು. ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ.ಆಸ್ಪತ್ರೆಯ ವೈದ್ಯರ ಪ್ರಕಾರ, ಸಂತೋಷ್ ಹೆಗ್ಡೆ ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಸುಸ್ತು ಮತ್ತು ತಲೆಸುತ್ತಿನಿಂದ ಅವರು ಕುಸಿದುಬಿದ್ದಿದ್ದು, ಹೃದಯಾಘಾತದಂತಹ ಅಪಾಯಕರ ಸ್ಥಿತಿ ಕಂಡುಬಂದಿಲ್ಲ. ಬಿಪಿ ಮತ್ತು ಶುಗರ್ ಮಟ್ಟ ಸಹ ಸಾಮಾನ್ಯವಾಗಿದ್ದು, ಶೀಘ್ರದಲ್ಲೇ ಅವರನ್ನು ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ದಾರೆ.

ಸಂತೋಷ್ ಹೆಗ್ಡೆ ಅವರ ಆರೋಗ್ಯ ಸುಧಾರಿಸಿದೆ ಎಂಬ ಮಾಹಿತಿ ತಿಳಿದ ನಂತರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.






