ಬೆಂಗಳೂರು :
ದೃಷ್ಟಿದೋಷವು ಕೇವಲ ಆರೋಗ್ಯ ಸಮಸ್ಯೆಯಲ್ಲದೆ, ವ್ಯಕ್ತಿಯ ದಿನನಿತ್ಯದ ಜೀವನ ಹಾಗೂ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುವುದನ್ನು ಮನಗಂಡ ಕರ್ನಾಟಕ ಸರ್ಕಾರವು ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರುತ್ತಿದೆ. ಅಂತರಾಷ್ಟ್ರೀಯ ಸಂಸ್ಥೆ ‘RestoringVision’ ಸಹಭಾಗಿತ್ವದಲ್ಲಿ 40 ವರ್ಷ ಮೇಲ್ಪಟ್ಟ ನಾಗರಿಕರಿಗಾಗಿ ಉಚಿತ ದೃಷ್ಟಿ ತಪಾಸಣೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.

ಈ ಯೋಜನೆಯಡಿ ಜಿಲ್ಲೆಯ ಆರು ತಾಲೂಕುಗಳಲ್ಲಿನ ಸುಮಾರು 216 ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ—ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ—ತಪಾಸಣೆ ನಡೆಯಲಿದೆ. ಸುಮಾರು 3.28 ಲಕ್ಷ ಜನರನ್ನು ಪರಿಶೀಲಿಸುವ ಗುರಿ ಹೊಂದಲಾಗಿದ್ದು, ಮೊದಲ ಹಂತದಲ್ಲಿ 1 ಲಕ್ಷ ಉಚಿತ ಓದುವ ಕನ್ನಡಕಗಳನ್ನು ವಿತರಿಸಲು ಯೋಜಿಸಲಾಗಿದೆ.
ವಯಸ್ಸು ಹೆಚ್ಚಾದಂತೆ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಆಗದ ಸ್ಥಿತಿ ‘ಪ್ರೆಸ್ಬಯೋಪಿಯಾ’ (Presbyopia) ಎಂದು ಕರೆಯಲ್ಪಡುತ್ತದೆ. ಈ ಸಮಸ್ಯೆ ಸರಳವಾದ ಓದುವ ಕನ್ನಡಕಗಳಿಂದಲೇ ನಿವಾರಣೆಯಾಗಬಹುದು. ಜಿಲ್ಲೆಯಲ್ಲಿ ಸುಮಾರು 28% ಜನರು ಈ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಅಂದಾಜಿಸಲಾಗಿದೆ.

ಈ ಯೋಜನೆಯ ವಿಶೇಷತೆ ಎಂದರೆ, ಗ್ರಾಮ ಮಟ್ಟದ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿಯೇ ಸೇವೆ ಲಭ್ಯವಾಗುವುದು. ಸಮುದಾಯ ಆರೋಗ್ಯ ಅಧಿಕಾರಿಗಳು (CHOs) ಮತ್ತು ಆಶಾ ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಜೊತೆಗೆ ‘GoK Spectacle’ ಆಪ್ ಮೂಲಕ ಫಲಾನುಭವಿಗಳ ಮಾಹಿತಿಯನ್ನು ಡಿಜಿಟಲ್ ರೀತಿಯಲ್ಲಿ ದಾಖಲಿಸಲಾಗುತ್ತದೆ. ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ತಪಾಸಣೆ ನಡೆಸುವ ವ್ಯವಸ್ಥೆಯೂ ಯೋಜನೆಯಲ್ಲಿ ಒಳಗೊಂಡಿದೆ.

ಬೆಂಗಳೂರು ಮೂಲದ ‘iDrishti’ ಸಂಸ್ಥೆ ಈ ಯೋಜನೆಯ ಜಾರಿಗೆ ಸಹಕರಿಸುತ್ತಿದ್ದು, ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಕಣ್ಣಿನ ಆಸ್ಪತ್ರೆಗಳನ್ನು ನಡೆಸುವ ಅನುಭವ ಹೊಂದಿದೆ.
ಯಾದಗಿರಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಯೋಜನೆ ಪೂರ್ಣಗೊಂಡ ಬಳಿಕ, ರಾಜ್ಯದ ಇತರ ಜಿಲ್ಲೆಗಳಿಗೂ ಹಂತ ಹಂತವಾಗಿ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ದೃಷ್ಟಿ ಸೌಲಭ್ಯ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.






