ಮಾಜಿ ಮುಖ್ಯಮಂತ್ರಿ H.D ಕುಮಾರಸ್ವಾಮಿ ಮಹತ್ವದ ಐದು ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಮಾಡ್ತೇನೆ ಎಂದು ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ. ಕಾಂಗ್ರೆಸ್ ಹಾಗು ಬಿಜೆಪಿ ಸರ್ಕಾರಗಳನ್ನು ಈಗಾಗಲೇ ನೋಡಿದ್ದೀರಿ. ಒಮ್ಮೆ ನಮ್ಮ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಲು ಮತ ಕೊಟ್ಟು ಆಯ್ಕೆ ಮಾಡಿ. ಜನತೆಗೆ ಅಗತ್ಯವಾಗಿ ಬೇಕಿರುವ ವಸತಿ, ಶಿಕ್ಷಣ, ಕೃಷಿ-ನೀರಾವರಿ, ಆರೋಗ್ಯ, ಮಹಿಳಾ ಸಬಲೀಕರಣ ಮಾಡಲು ಐದು ಪ್ರಮುಖ ಅಂಶಗಳ ವಿಚಾರವನ್ನು ಹಿಡಿದು ರಥಯಾತ್ರೆ ನಡೆಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ಗೆ ತಿರುಗೇಟು ಕೊಡುವ ವೇಳೆ ಕೊಟ್ಟಿರುವ ಹೇಳಿಕೆ ಸತಃ ತಮ್ಮ ಉದ್ದೇಶವನ್ನೇ ಬದಲು ಮಾಡುವಂತಿದೆ.
ಮಂಡ್ಯದಲ್ಲಿ ಜೆಡಿಎಸ್ ಟಾರ್ಗೆಟ್ ಮಾಡಿದ್ದ ಕಾಂಗ್ರೆಸ್ ನಾಯಕರು..?
ಮಂಡ್ಯದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಜೆಡಿಎಸ್ ಪಕ್ಷವನ್ನೇ ಗುರಿಯಾಗಿಸಿಕೊಂಡ ನಾಯಕರು ವಾಗ್ದಾಳಿ ಮಾಡಿದ್ದರು. ಜೆಡಿಎಸ್ ಬೆಂಬಲಿಸುವ ನಿರ್ಧಾರ ಮಾಡಬೇಡಿ, ಕೋಮುವಾದಿ ಬಿಜೆಪಿಯನ್ನು ಆಡಳಿತದಿಂದ ದೂರ ಇಡುವ ಉದ್ದೇಶದಿಂದ ಈಗಾಗಲೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಕುಮಾರಸ್ವಾಮಿ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ, ಹೋಟೆಲ್ನಲ್ಲಿ ಕುಳಿತು ಆಡಳಿತ ಮಾಡುತ್ತ ಅಧಿಕಾರ ಕಳೆದುಕೊಂಡರು ಎಂದಿದ್ದರು. ಇನ್ನು ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ ಶೂರನು ಅಲ್ಲ ಎಂದಿದ್ದ ಡಿ.ಕೆ ಶಿವಕುಮಾರ್ ಮಾತಿಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದರು. 2018 ರಲ್ಲಿ ನಡೆದ ಘಟನೆ ಮರುಕಳಿಸುವ ಬಗ್ಗೆ ಮಾತನಾಡಿದ್ದರು.
ಕಾಂಗ್ರೆಸ್ ಟೀಕೆಗೆ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದೇನು..?
ಬಾಗಲಕೋಟೆಯಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಸಿದ್ದರಾಮಣ್ಣ ನನಗೆ ಅಧಿಕಾರ ಇದ್ದಾಗ ಪಂಚರತ್ನ ಯಾಕೆ ಮಾಡಲಿಲ್ಲ ಅಂತ ಕೇಳಿದ್ದಾರೆ. ಷರತ್ತು ಹಾಕದೆ ಸಪೋರ್ಟ್ ಕೊಟ್ಟಿದ್ವಿ ಅಂತ ಹೇಳಿದ್ದೀರಲ್ಲ. ಯಾವ ಅನ್ ಕಂಡಿಶನಲ್ ಸಪೋರ್ಟ್…? ನಿಮ್ಮ ಹೈಕಮಾಂಡ್ ಹೇಳಿದೆ ಅಂತ ನನ್ನ ತಲೆಗೆ ಗಂಟು ಹಾಕಿದ್ರಿ. ಸರ್ಕಾರ ರಚನೆ ಮಾಡ್ತಿದ್ದಂತೆ ಕಂಡಿಶನ್ ಹಾಕಿ ಕುಳಿತುಕೊಂಡ್ರಿ. ಸಚಿವ ಸ್ಥಾನ, ಖಾತೆ ಬಗ್ಗೆ ಪಟ್ಟು ಹಿಡಿದಿದ್ರಿ. ಇದೇನಾ ಅನ್ ಕಂಡಿಶನಲ್ ಸಪೋರ್ಟಾ.? ಸುಳ್ಳು ಹೇಳೋದಕ್ಕೆ ನಾಚಿಕೆ ಆಗಲ್ವಾ ನಿಮಗೆ..? ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಕೊಟ್ಟ ಫೈಲ್ಗೆ ರುಜು ಹಾಕಬೇಕಿತ್ತು. ಈಗ ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ, ಶೂರನೂ ಅಲ್ಲ ಅಂತಿರಿ. ನಾನು ಸಿಎಂ ಇದ್ದಾಗಲೇ ಹೇಳಿದ್ದೇನೆ. ನಾನು ಗುಮಾಸ್ತನ ರೀತಿ ಕೆಲಸ ಮಾಡ್ತಿದ್ದೇನೆ ಅಂತ. ವಿಷಕಂಠನಾಗಿದ್ದೇನೆ ಅಂತ ಆವತ್ತೆ ಹೇಳಿದ್ದೆ ಎಂದು ಸಿದ್ದರಾಮಯ್ಯಗೆ ಡಿಚ್ಚಿ ಕೊಟ್ಟಿದ್ದಾರೆ. ಇದೇ ವೇಳೆ ಈ ಬಾರಿಯೂ ಮನೆ ಬಾಗಿಲು ತಟ್ಟುವ ಸಂಭವ ಬರುತ್ತದೆ ಹುಷಾರ್ ಎಂದಿದ್ದಾರೆ.
ಕುಮಾರಸ್ವಾಮಿ ಹೇಳಿದ್ದು ಭವಿಷ್ಯವೋ..? ಅಸಲಿ ಸತ್ಯವೋ..?
ಕಳೆದ ಬಾರಿ ನಮ್ಮ ಮನೆ ಬಾಗಿಲಿಗೆ ಯಾಕೆ ಬಂದಿದ್ರಿ..? ಎಂದು ಕುಟುಕಿರುವ ಕುಮಾರಸ್ವಾಮಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಹೋಗಿದ್ರಿ..? ಕಾಂಗ್ರೆಸ್ ನಾಯಕರು..? ನಾವು ಹುಟ್ಟಿದ್ದು ರೈತರಿಗಾಗಿ, ರೈತರ ಬಗ್ಗೆ ನಿಮ್ಮ ಬಳಿ ಕಲಿಯಬೇಕಾಗಿಲ್ಲ. 5 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರಿ ಸಿದ್ಧರಾಮಯ್ಯನವರೇ..?ಪಂಚರತ್ನ ಕಾರ್ಯಕ್ರಮದ ಬಗ್ಗೆ ಲಘುವಾಗಿ ಮಾತನಾಡ್ತಿರಾ..? ಮಂಡ್ಯದಲ್ಲೇ ನಿಮ್ಮ ಟೀಕೆಗಳ ಬಗ್ಗೆ ಬಂದು ಮಾತನಾಡ್ತೇನೆ ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಢಮಾರ್ ಆಗ್ತಿದೆ. 2018 ರಲ್ಲಿ ನಮ್ಮಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದಿಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದರು. ನಾನೂ ಮುಖ್ಯಮಂತ್ರಿ ಆದೆ ಯಡಿಯೂರಪ್ಪನೂ ಮುಖ್ಯಮಂತ್ರಿ ಆದರು. ನೋಡ್ತಿರಿ ಸಿದ್ದರಾಮಯ್ಯ ಬಾಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದಿದ್ದಾರೆ. 2018ರ ಭವಿಷ್ಯವೇ ಮರುಕಳಿಸುತ್ತೆ. ಕಾಂಗ್ರೆಸ್ ಢಮಾರ್ ಆಗುತ್ತೆ ಎಂದಿದ್ದಾರೆ ಕುಮಾರಸ್ವಾಮಿ. ಆದರೆ ಸಿದ್ದರಾಮಯ್ಯ ಮಾತಿಗೆ ವಿರುದ್ಧವಾಗಿ ನಾನು ಮುಖ್ಯಮಂತ್ರಿ ಆಗ್ತೀನಿ ಎಂದಿದ್ದಾರೋ..? ಅಥವಾ ಕಳೆದ ಬಾರಿಯ ಅತಂತ್ರ ಸರ್ಕಾರವೇ ಬರಲಿದ್ದು, ಮತ್ತೆ ಕಾಂಗ್ರೆಸ್ ದೇವೇಗೌಡರ ಮನೆ ಬಾಗಿಲು ತಟ್ಟಲಿದೆ ಎನ್ನುವುದನ್ನು ಹೇಳಿದ್ದಾರೋ ಅನ್ನೋದಕ್ಕೆ ಕುಮಾರಸ್ವಾಮಿಯೇ ಸ್ಪಷ್ಟನೆ ಕೊಡಬೇಕಿದೆ.