ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಸೇರಿದಂತೆ ಮುಂಬರುವ ದಿನಗಳಲ್ಲಿ ರಾಜಕಾರಣ ಮಾಡಲು ಮುಂದಾಗಿರುವ ಜೆಡಿಎಸ್ ಪಕ್ಷದ ಒಳಗೆ ಉದ್ಬವ ಆಗಬಹುದಾದ ಬೆಂಕಿ ಜ್ವಾಲೆಯನ್ನು ಹೊತ್ತಿಕೊಳ್ಳುವ ಮೊದಲೇ ನಂದಿಸುವ ಕೆಲಸ ಮಾಡಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಿಡದಿಯ ತೋಟದ ಮನೆಯಲ್ಲಿ ಹಾಲಿ ಹಾಗು ಮಾಜಿ ಶಾಸಕರು ಮತ್ತು ಕಳೆದ ಬಾರಿ ಚುನಾವಣೆಯಲ್ಲಿ ಸೋಲುಂಡ ಅಭ್ಯರ್ಥಿಗಳ ಸಭೆ ನಡೆಸಿ, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಿರುವ ಉದ್ದೇಶ ಮತ್ತು ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಬಹುತೇಕ ಎಲ್ಲಾ ನಾಯಕರೂ ಭಾಗಿಯಾಗಿದ್ದು ಇಬ್ಬರು ಹಾಲಿ ಶಾಸಕರು ಸಭೆಯಿಂದ ಹೊರಗೆ ಉಳಿದಿರುವುದು ಕುತೂಹಲಕ್ಕೂ ಕಾರಣವಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷರ ಮಾತಿನ ಬಳಿಕ ಗೊಂದಲ ಸೃಷ್ಟಿ..!
![](https://pratidhvani.com/wp-content/uploads/2023/10/download-29.jpeg)
ಬಿಜೆಪಿ ಜೊತೆ ಹೊಂದಾಣಿಕೆ ಕುರಿತಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿಕೆ ಬಳಿಕ ಸಾಕ್ಷು ಗೊಂದಲ ಶುರುವಾಗಿತ್ತು. ಜೊತೆಗೆ ಹಲವು ಹಾಲಿ ಶಾಸಕರಲ್ಲಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಆತಂಕ ಮನೆ ಮಾಡಿತ್ತು. ಇದೀಗ ಗೊಂದಲ ನಿವಾರಣೆಗೆ ಜೆಡಿಎಸ್ ನಾಯಕರು ಪ್ರಯತ್ನ ಮಾಡಿದ್ದು, ಪಕ್ಷದ ಹಾಲಿ ಮಾಜಿ ಶಾಸಕರು, ಜಿಲ್ಲಾಧ್ಯಕ್ಷರ ಸಭೆ ನಡೆಸಿ, ಮೈತ್ರಿಯ ಅನಿವಾರ್ಯತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಸಮಧಾನಿತ ನಾಯಕರನ್ನ ಮನವೊಲಿಸಿರುವ ದೇವೇಗೌಡರ ಕುಟುಂಬ, ಆಪರೇಷನ್ ಹಸ್ತಕ್ಕೆ ಮುಂದಾಗಿದ್ದ ಡಿ.ಕೆ.ಶಿವಕುಮಾರ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ – ಬಿಜೆಪಿ ಹೊಂದಾಣಿಕೆಯಿಂದ ಜೆಡಿಎಸ್ ಪಕ್ಷದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಚರ್ಚೆ ಆಗ್ತಿದೆ. ಆದರೆ ಪಕ್ಷ ಬಲಿಷ್ಠ ಆಗಲು ಮೈತ್ರಿ ಅನಿವಾರ್ಯ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಮುಸ್ಲಿಂ ನಾಯಕರ ಬೇಗುದಿ, ಹಾಲಿ ಶಾಸಕರ ಸಂಕಷ್ಟ..!
ಬಿಜೆಪಿ – ಜೆಡಿಎಸ್ ಮೈತ್ರಿ ವಿರೋಧಿಸಿ ಒಂದೆಡೆ ಪಕ್ಷದ ಕೆಲವು ಹಾಲಿ ಶಾಸಕರು ಮಾಧ್ಯಮಗಳ ಎದುರು ಮಾತನಾಡಿದ್ರೆ, ಮಾಜಿ ಶಾಸಕರೂ ಕೂಡ ಅಸಮಧಾನ ಹೊರಹಾಕಿದ್ದಾರೆ. ಇನ್ನೊಂದು ಕಡೆ ಮುಸ್ಲಿಂ ನಾಯಕರ ತೀವ್ರ ಅಸಮಧಾನ ಹೊರಹಾಕುತ್ತ ಜೆಡಿಎಸ್ ಪಕ್ಷವನ್ನು ತೊರೆಯುವ ಮಾತನಾಡ್ತಿದ್ದಾರೆ. ಜೆಡಿಎಸ್ಗೆ ಮೈತ್ರಿ ದೊಡ್ಡ ಮುಜುಗರ ತಂದೊಡ್ಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಅಸಮಧಾನಿತ ಶಾಸಕಿ ಕರೆಮ್ಮ ನಾಯಕ್, ಸಿ.ಬಿ ಸುರೇಶ್ ಬಾಬು, ಮಾಜಿ ಶಾಸಕ ಡಿ.ಸಿ ಗೌರಿಶಂಕರ್, ದಾಸರಹಳ್ಳಿ ಮಂಜುನಾಥ್ ಸೇರಿದಂತೆ ಬಹುತೇಕರು ಹಾಜರಾಗಿದ್ರು.. ಆದರೆ ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರ ಹಾಗು ಹನೂರು ಮಂಜುನಾಥ್ ಮಾತ್ರ ಗೈರು ಹಾಜರಾಗಿ ತೀವ್ರ ಕುತೂಹಲ ಮೂಡಿಸಿದ್ದಾರೆ.
ಸಿದ್ದರಾಮಯ್ಯಗೆ ಟಾಂಗ್.. ಮೋದಿಗೆ ಬಹುಪರಾಕ್..
![](https://pratidhvani.com/wp-content/uploads/2023/10/siddaramaiah-hddevegowda-1540471239.jpg)
ಜಾತ್ಯಾತಿತ ಸಿದ್ದಾಂತದ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿರುವ ಗೌಡರು, ಇಂದಿರಾ ಗಾಂಧಿ ಅವರ ಕಾಲದಲ್ಲೇ ಮುಗಿದು ಹೋಗಿದೆ. ಈ ದೇಶ ಮುಂದೆ ಏನಾಗುತ್ತೋ ಊಹೆ ಮಾಡಲು ಸಾಧ್ಯವಾಗಲ್ಲ. ಪಕ್ಕದಲ್ಲಿ ಪಾಕಿಸ್ತಾನ, ಚೀನಾ, ರಷ್ಯಾ, ಅಮೆರಿಕ ಇದೆ. ಈ ದೇಶವನ್ನ ಉಳಿಸುವ ನಾಯಕತ್ವ ಮೋದಿ ಕೈಯಲ್ಲಿದೆ. ಹೀಗಾಗಿ ಪಕ್ಷದ ಬೆಳವಣಿಗೆ ಒಳ್ಳೆಯ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ ಎಂದು ದೇವೆಗೌಡ್ರು ತಿಳಿಸಿದ್ದಾರೆ. ಇದೇ ವೇಳೆ ಪಕ್ಷದ ಅಸಮಧಾನಿತರನ್ನ ಮನವೊಲಿಸಿ ಸಭೆಗೆ ಕರೆತಂದಿರುವ ದೇವೆಗೌಡ್ರು, ಆಪರೇಷನ್ ಹಸ್ತಕ್ಕೆ ಮುಂದಾಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಮಿಸ್ಟರ್ ಡಿ.ಕೆ ಶಿವಕುಮಾರ್ ಕ್ಯಾನ್ ನಾಟ್ ಮೇಡ್ ಪಾಲಿಟಿಕ್ಸ್, ನಮ್ಮ ಪಕ್ಷವನ್ನ ಏನು ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ನೀರಾವರಿ ಸಮಸ್ಯೆ ಬಗೆಹರಿಸುವ ಬಗ್ಗೆ HDK ವಿಶ್ವಾಸ..!
JDS – BJP ಮೈತ್ರಿಯಿಂದ ರಾಜ್ಯಕ್ಕೆ ಒಳ್ಳೇದಾಗುತ್ತೆ. ನಮ್ಮ ನೀರು ಉಳಿಸೋದಕ್ಕೆ ಏನು ಮಾಡಬೇಕು, ಅದನ್ನು ಮಾಡುತ್ತೇನೆ. ಜಲಧಾರೆಯಲ್ಲೂ ಇದಕ್ಕೆ ಪರಿಹಾರ ಇದೆ. ಆದರೆ ರಾಜ್ಯದ ಜನರು ನಮ್ಮ ಯೋಜನೆ ಜಾರಿಗೆ ಅಧಿಕಾರದ ಅವಕಾಶ ಕೊಡಲಿಲ್ಲ. ಈಗ ಮೈತ್ರಿಯಿಂದ ಅಧಿಕಾರಕ್ಕೆ ಬರುವುದು ನನ್ನ ಉದ್ದೇಶ ಅಲ್ಲ. ರಾಜ್ಯಕ್ಕೆ ನೀರಾವರಿ ವಿಚಾರದಲ್ಲಿ ಆಗಿರುವ ಅನ್ಯಾಯ ಸರಿ ಮಾಡುವುದೇ ನನ್ನ ಗುರಿ. ಇದೇ ಕೇಂದ್ರ ಸರ್ಕಾರದ ನೆರವಿನಿಂದ ಎಲ್ಲಾ ನೀರಾವರಿ ಯೋಜನೆಗಳಿಗೆ ಪರಿಹಾರ ಕೊಡಿಸುತ್ತೇನೆ. ಒಂದು ವೇಳೆ ಮುಂದಿನ 5 ವರ್ಷಗಳಲ್ಲಿ ಪರಿಹಾರ ಕೊಡಿಸದಿದ್ದರೆ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಮೈತ್ರಿಗೆ ಬಹಿರಂಗವಾಗಿ ವಿರೋಧಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂಂ ಕೂಡ ಗೈರಾಗಿದ್ರು, ಇಬ್ರಾಹಿಂಗೆ ಎಂಎಲ್ಸಿ ಬಿ.ಎಂ ಫಾರೂಕ್ ತಿರುಗೇಟು ನೀಡಿದ್ದು, ಇಬ್ರಾಹಿಂಗೆ ಮೈತ್ರಿ ಮಾತುಕತೆಯ ಎಲ್ಲಾ ಹಂತದಲ್ಲೂ ಮಾಹಿತಿ ನೀಡಲಾಗಿದೆ. ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚನೆ ಆಗಿತ್ತು. ಆದ ಜಮೀರ್ ಅಹ್ಮದ್ ಮಂತ್ರಿ ಆಗಿದ್ದರು. ಆಗ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಮುಸ್ಲಿಂ ಸಮುದಾಯಕ್ಕೆ ಏನು ತೊಂದರೆ ಆಗಿತ್ತು..? ಎಂದು ಪ್ರಶ್ನಿಸಿದ್ದಾರೆ.
-ಕೃಷ್ಣಮಣಿ