
ಕೇಂದ್ರದಲ್ಲಿ ಜನಿವಾರ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಆಕ್ರೋಶ ಹೆಚ್ಚಾಗಿದೆ. CET ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ವಿಚಾರ ಹಾಗೂ ಬೀದರ್ನಲ್ಲಿ ಸಿಇಟಿ ಪರೀಕ್ಷೆಯನ್ನೇ ನೀಡದೆ ಮನೆಗೆ ವಾಪಸ್ ಕಳುಹಿಸಿದ ವಿಚಾರವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ವತಿಯಿಂದ ಪ್ರತಿಭಟನೆ ಮಾಡಲಾಗಿದೆ. ತ್ಯಾಗರಾಜನಗರದಲ್ಲಿರುವ ಬ್ರಾಹ್ಮಣ ಮಹಾಸಭಾ ಕಚೇರಿ ಬಳಿ ಪ್ರತಿಭಟನೆ ಮಾಡಿದ್ದು, CET ಅಧಿಕಾರಿಯನ್ನ ವಜಾಗೊಳಿಸಬೇಕು ಎಂದು ಆಗ್ರಹ ಮಾಡಿದ್ದಾರೆ. CET ವಿರುದ್ಧ ಘೋಷಣೆ ಕೂಗಿ ಬ್ರಾಹ್ಮಣ ಸಮುದಾಯದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಿವಾರ ಹಾಕಿದ್ದಕ್ಕೆ ಸಿಇಟಿ ಬರೆಯಲು ಅವಕಾಶ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಈ ಥರ ಸೂಚನೆ ಏನೂ ಕೊಟ್ಟಿಲ್ಲ, ಘಟನೆಗೆ ಕಾರಣ ಆದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ತೇವೆ. ಪ್ರಕರಣ ಏಕೆ ಆಯ್ತು, ಯಾರು ಕಾರಣ ಅಂತ ತಿಳಿದು ಕ್ರಮ ತೆಗೆದುಕೊಳ್ತೇವೆ. ವಿದ್ಯಾರ್ಥಿಗೆ ಮರು ಪರೀಕ್ಷೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡ್ತೇವೆ. ವೈಯಕ್ತಿಕವಾಗಿ ಎಂ.ಸಿ ಸುಧಾಕರ್ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡ್ತೆನೆ ಎಂದಿದ್ದಾರೆ. ಈ ಥರದ ನಿರ್ದೇಶನವನ್ನು ಯಾವುದೇ ಇಲಾಖೆಯಿಂದ ಕೊಡಲು ಅವಕಾಶ ಇಲ್ಲ. ಈಥರ ಜನಿವಾರ ತೆಗೆಯೋ ಅವಕಾಶವೂ ಯಾವುದೇ ಕಾನೂನಿನಲ್ಲಿಲ್ಲ. ಈಥರ ಏನಾದ್ರೂ ನಡೆದಿದ್ರೆ ಸಂಬಂಧಿಸಿದ ಇಲಾಖೆ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ತೇವೆ. ಈ ರೀತಿಯ ವಿಷಯಗಳು ಬಹಳ ಸೂಕ್ಷ್ಮ ಇರ್ತವೆ. ಜಾತಿ ಧರ್ಮಗಳಿಗೆ ನಾವು ಗೌರವ ಕೊಡಬೇಕಾಗುತ್ತದೆ. ಇದರ ವಿರುದ್ಧ ಕಠಿಣ ಕ್ರಮ ಎಂದಿದ್ದಾರೆ.

ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಮಾತನಾಡಿ, ಈ ಘಟನೆ ಬಗ್ಗೆ ಬೈರತಿ ಸುರೇಶ್ ಪೋನ್ ಮಾಡಿ ಕೇಳಿದ್ರು. ಸಂಜೆವರೆಗೂ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಎಕ್ಸಿಕ್ಯೂಟಿವ್ ಡೈರೆಕ್ಟರ್ ಬಳಿ ಕೇಳಿದಾಗ ಸುಗಮವಾಗಿ ಪರೀಕ್ಷೆ ಆಗಿದೆ ಅಂದ್ರು. ಈ ಬಗ್ಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸ್ಟಾಟಿಸ್ಟಿಕ್ಸ್ ಕಳಿಸಿದ್ರು. ಈ ಬಗ್ಗೆ ಖಂಡಿತ ಒಪ್ಪುವಂತಹ ವಿಚಾರ ಅಲ್ಲ.. ಖಂಡಿಸುತ್ತೇನೆ. ಶಿವಮೊಗ್ಗ ಅಲ್ಲಿ ಈ ರೀತಿ ಆಗಿಲ್ಲ ಅಂತ ಅಧಿಕಾರಿಗಳು ಹೇಳ್ತಾ ಇದ್ದಾರೆ. ನಮ್ಮ ಪ್ರೋಟೋಕಾಲ್ ಅಡಿಯಲ್ಲಿ ಪಾಲನೆ ಮಾಡಬೇಕು. ಯಾವುದೇ ಕೇಂದ್ರದಲ್ಲಿ ಆ ರೀತಿ ಆಗಿದ್ರೆ ಗಂಭೀರವಾಗಿ ಪರಿಗಣನೆ ಮಾಡ್ತೀವಿ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ರೀತಿ ಆಗಿದ್ದೆ ಸತ್ಯ ಆದ್ರೆ ಖಂಡಿತ ಅತಿರೇಕ ಆಗಿದೆ ಎಂದಿದ್ದಾರೆ.

ಯಾವ ರೀತಿಯ ವಿಕೃತಿ ಮನಸ್ಥಿತಿ ಇದು, ಎಲ್ಲಾ ಜಾತಿ ಧರ್ಮ ಆಚರಣೆ ಸಂಪ್ರದಾಯ ಗೌರವ ಕೊಡಬೇಕು. ನಾನು ಈ ರೀತಿ ಘಟನೆ ಪ್ರೋತ್ಸಾಹ ಕೊಡಲ್ಲ. ವರದಿ ಪಡೆದ ಬಳಿಕ ಏನ್ ಮಾಡಬಹುದು ಅಂತ ಯೋಚನೆ ಮಾಡ್ತೀನಿ. ಪರೀಕ್ಷೆ ಪ್ರತ್ಯೇಕ ಒಬ್ಬನಿಗೆ ಕೊಡೋ ಅವಕಾಶ ಇಲ್ಲ. ಇದು ಒಂದು ವಿಶೇಷ ಪ್ರಕರಣ.. ಆ ರೀತಿ ಆಗಿದ್ದೆ ಸತ್ಯ ಆದ್ರೆ ಇನ್ನೊಮ್ಮೆ ಪರಿಶೀಲನೆ ಮಾಡ್ತೀನಿ. ಆಯ್ದ ವಿಚಾರ ಎತ್ತಿಕೊಂಡು ರಾಜಕೀಯ ಲಾಭ ಮಾಡೋರಲ್ಲ. ಯಾವುದೇ ಸಮುದಾಯ ನೋಯಿಸುವ ಉದ್ದೇಶ ನಮ್ಮದಲ್ಲ ಎಂದಿದ್ದಾರೆ ಸಚಿವ
ಸುಧಾಕರ್.

ಸಿಇಟಿ ಪರೀಕ್ಷೆ ವೇಳೆ ಶಿವಮೊಗ್ಗದಲ್ಲಿ ಬ್ರಾಹ್ಮಣ ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣದಲ್ಲಿ ಕಾರಣಕರ್ತ ಅಧಿಕಾರಿಯನ್ನು ತಕ್ಷಣವೇ ಸಸ್ಪೆಂಡ್ ಮಾಡಲು ಸೂಚನೆ ನೀಡಲಾಗಿದೆ. ಶಿಕ್ಷಣ ಸಚಿವರೂ ಆಗಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ಪ್ರಕರಣದಿಂದ ಸರ್ಕಾರಕ್ಕೆ ಮುಜಗರದ ಜೊತೆಗೆ ಡ್ಯಾಮೇಜ್ ಆಗುವ ಹಿನ್ನೆಲೆಯಲ್ಲಿ ಅಧಿಕಾರಿ ಮೇಲೆ ಕ್ರಮ ಕೈಗೊಂಡು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ ಸಚಿವ ಮಧು ಬಂಗಾರಪ್ಪ. ಬ್ರಾಹ್ಮಣ ಸಮಾಜದಿಂದಲೂ ಸರ್ಕಾರದ ವಿರುದ್ಧ ಆಕ್ರೋಶದ ಜೊತೆಗೆ ಬ್ರಾಹ್ಮಣ ಸಚಿವರು, ಶಾಸಕರಿಂದಲೂ ಪ್ರಕರಣಕ್ಕೆ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಅಧಿಕಾರಿ ಸಸ್ಪೆಂಡ್ ಮಾಡಲಾಗಿದೆ.

ತುಮಕೂರಿನಲ್ಲಿ ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಸಿಇಟಿ ನಿಯಮವನ್ನು ಮೊದಲು ತಿಳಿದು ಕೊಳ್ಳಬೇಕು. ಅವರವರ ಧರ್ಮ ಆಚರಣೆಗೆ ಸಂವಿಧಾನ ಅವಕಾಶ ಕೊಟ್ಟಿದೆ. ಆಸ್ತಿಕರಾಗಿ ನಾಸ್ತಿಕರಾಗಿ ಬದುಕಲು ಸಂವಿಧಾನದಲ್ಲಿ ಅವಕಾಶ ಇದೆ. ಅಂತಹ ಧಾರ್ಮಿಕ ಆಚರಣೆಗಳನ್ನ ಯಾರೇ ಮಾಡಿದರು ಅದನ್ನ ಒಪ್ಪಬೇಕಾಗಿದೆ. ಸಿಇಟಿ ಪರೀಕ್ಷಾ ನಿಯಮದಲ್ಲಿ ಯಾವುದೇ ಗೊಂದಲ ಆಗದ ದೃಷ್ಟಿಯಿಂದ ಕ್ರಮಗಳನ್ನು ಕೈಗೊಂಡಿರುತ್ತಾರೆ. ಕೆಲವರು ಬುರ್ಖಾ ಹಾಕಿಕೊಂಡು ಬರ್ತೀನಿ ಅಂತಾರೆ. ಯಾರ್ ಬರ್ತಾರೆ ಅದನ್ನೋದು ಗೊತ್ತಾಗಲ್ಲ. ಇದರಿಂದ ಅವರಿಗೆ ಗೊಂದಲ ಉಂಟಾಗುತ್ತದೆ. ಇನ್ನೂ ಕೆಲವರು ಇನ್ನೊಂದು ಹಾಕಿಕೊಂಡು ಬರ್ತೀನಿ ಅಂತಾರೆ ಅವಾಗ ಗೊಂದಲ ಆಗುತ್ತದೆ. ಈ ಗೊಂದಲ ನಿವಾರಣೆಗೆ ತಜ್ಞರ ಸಮಿತಿ ರಚನೆ ಮಾಡಿ ಸರ್ಕಾರ ಗೊಂದಲ ನಿವಾರಣೆ ಮಾಡಿ ಸೂಕ್ತ ಕ್ರಮ ಕೈಗೊಂಡರೆ ಸೂಕ್ತ ಅಂತಾ ಸಲಹೆ ನೀಡಿದ್ದಾರೆ.