ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ(HD Kumarswamy) ಕರ್ನಾಟಕ ಪ್ರದೇಶ ಕುರುಬರ ಸಂಘ ಎಚ್ಚರಿಕೆ ನೀಡಿದೆ. ಕರ್ನಾಟಕ ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಮಾಲೂರು ಸೋಮಣ್ಣ ಮಾತನಾಡಿ, ಸರ್ಕಾರದ ಜಾತಿ ಜನಗಣತಿ ವರದಿಗೆ (Cast Census Report) ಸ್ವಾಗತ ಮಾಡಿದ್ದಾರೆ. ಎಲ್ಲಾ ಶೋಷಿತರ ಪರವಾಗಿ ಸಮೀಕ್ಷೆ ನಡೆಸಿದ್ದಾರೆ. ಬೆಣ್ಣೆ ತಿಂದವರು ಯಾರು ಅಂದಿದ್ದಾರೆ ಕುಮಾರಸ್ವಾಮಿ..? ಬೆಣ್ಣೆ ತಿನ್ನೋಕೆ ಸಿದ್ದರಾಮಯ್ಯ ಅರ್ಹರು. ಮುಖ್ಯಮಂತ್ರಿಗಳಾಗಿ ವರದಿಯನ್ನು ಅಂಗೀಕಾರ ಮಾಡದ ನಿಮಗೇನು ನೈತಿಕತೆ ಇದೆ ಮಾತಾಡೋಕೆ..? ಎಂದು ಪ್ರಶ್ನಿಸಿದ್ದಾರೆ.

ಎರಡು ಬಾರಿ ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಆಗಿದ್ದಾರೆ ಎಂದು ಹೊಟ್ಟೆ ಕಿಚ್ಚಾ..? ಕುರಿಗಾಯಿ ಮಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಅದನ್ನು ನಿಮಗೆ ಸಹಿಸೋಕೆ ಆಗುತ್ತಿಲ್ಲ. ಎಚ್ಚರಿಕೆಯಿಂದ ಮಾತಾಡಿ ಕುಮಾರಸ್ವಾಮಿ. ಇಲ್ಲ ಅಂದರೆ ನೀವು ಎಲ್ಲಿ ಹೋದರು ಘೇರಾವ್ ಹಾಕಬೇಕಾಗುತ್ತದೆ. ವಿರೋಧಿಸಿರುವ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ರಾಜ್ಯಾದ್ಯಂತ ನಮ್ಮದೇ ಆದ ಸಮುದಾಯ ಇದೆ. ಶೋಷಿತ ವರ್ಗಗಳನ್ನು ಒಗ್ಗೂಡಿಸಿ ವರದಿ ಜಾರಿಗೆ ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ ಎಂದಿದ್ದಾರೆ ಮಾಲೂರು ಸೋಮಣ್ಣ.

ಜಾತಿ ಜನಗಣತಿಯನ್ನು ಯಾರು ವಿರೋಧ ಮಾಡ್ತಾರೋ ಅವರಿಗೆ ತಕ್ಕ ಪಾಠ ಕಲಿಸ್ತೀವಿ ಎಂದು ಎಚ್ಚರಿಕೆ ನೀಡಿರುವ ಮಾಲೂರು ಸೋಮಣ್ಣ, ಶ್ಯಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಸವಾಲು ಹಾಕುತ್ತೇವೆ. ಅಪ್ಪ, ಮಗ, ಸೊಸೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಎದುರಿಸಲಿ. ಅವಾಗ ಅವರಿಗೆ ನಾವು ಯಾರೆಂದು ತೋರಿಸ್ತೀವಿ ಎಂದು ವಾಗ್ದಾಳಿ ಮಾಡಿದ್ದಾರೆ. ಒಟ್ಟಾರೆ ಜಾತಿ ಜನಗಣತಿ ವರದಿ ಅಂಗೀಕಾರ ಮಾಡದಂತೆ ಒಕ್ಕಲಿಗ ಹಾಗು ಲಿಂಗಾಯತ ನಾಯಕರು ಅಡ್ಡಿ ಮಾಡುತ್ತಿದ್ದಾರೆ ಎನ್ನುವ ಮಾತುಗಳ ನಡುವೆ ಒಕ್ಕಲಿಗ ಹಾಗು ಲಿಂಗಾಯತ ನಾಯಕರ ವಿರುದ್ಧ ಶೋಷಿತ ಸಮುದಾಯಗಳು ಕೆಂಡಕಾರುತ್ತಿವೆ.