ಬೆಂಗಳೂರು (Bengaluru) : ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, 11 ದಿನದಲ್ಲಿ 4321 ಅರ್ಜಿ ವಿಲೇವಾರಿ ಮಾಡಲಾಗಿದೆ.
ಇತ್ತೀಚೆಗೆ ವಿಧಾನಸೌಧ ಮುಂಭಾಗ ನಡೆದ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿಗಳ ಸಕಾರಾತ್ಮಕ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಸೂಚಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜನಸ್ಪಂದನ ಕಾರ್ಯಕ್ರಮದ ಪರಾಮರ್ಶೆಗಾಗಿ, ಆಯೋಜನೆಯಲ್ಲಿ ಭಾಗಿಯಾದ ಅಧಿಕಾರಿಗಳ ಸಭೆ ನಡೆಸಿ ಈ ಸೂಚನೆ ನೀಡಿದರು.
ಮೊನ್ನೆ ಸ್ವೀಕರಿಸಲಾದ 14,685 ಅರ್ಜಿಗಳ ಪೈಕಿ 4321 ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನೂ ಶೀಘ್ರವೇ ವಿಲೇವಾರಿ ಮಾಡುವಂತೆ ಸೂಚಿಸಿದರು.
ಜನಸ್ಪಂದನ ಕಾರ್ಯಕ್ರಮದ ಯಶಸ್ಸಿನ ಕುರಿತು ಮುಖ್ಯಮಂತ್ರಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಇದಕ್ಕೆ ಸಾಂಸ್ಥಿಕ ರೂಪ ನೀಡಿ ಇನ್ನಷ್ಟು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಬೇಕೆಂದು ಅಪೇಕ್ಷಿಸಿದ್ದಾರೆ ಎಂದರು.
ಜನಸ್ಪಂದನ ಕಾರ್ಯಕ್ರಮವನ್ನು ವಿಭಾಗ ಮಟ್ಟದಲ್ಲಿ ನಡೆಸುವ ಕುರಿತೂ ಸಹ ಚಿಂತನೆ ನಡೆದಿದೆ. ಮೊದಲಿಗೆ ಕಲಬುರ್ಗಿಯಲ್ಲಿ ವಿಭಾಗಮಟ್ಟದ ಜನಸ್ಪಂದನ ನಡೆಸಲು ಉದ್ದೇಶಿಸಿದೆ. ವಿಭಾಗ ಮಟ್ಟದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಖುದ್ದು ಭಾಗವಹಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
ಜನಸ್ಪಂದನದಲ್ಲಿ ತಮ್ಮ ಅಹವಾಲುಗಳೊಂದಿಗೆ ಆಗಮಿಸುವ ಜನರ ಕುರಿತು ಕಾಳಜಿ ವಹಿಸಬೇಕು. ಅವರ ನೋವಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆಂಬ ಸಂತೃಪ್ತಿ ಅವರಲ್ಲಿ ಮೂಡಬೇಕು. ನಿಯಮಾನುಸಾರ ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಅಹವಾಲುಗಳಿಗೆ ಸ್ಪಷ್ಟ ಹಿಂಬರಹ ನೀಡಬೇಕು. ಮನವಿದಾರರು ಪದೇ ಪದೇ ಜನಸ್ಪಂದನ ಕಾರ್ಯಕ್ರಮಕ್ಕೆ ಅದೇ ಅಹವಾಲಿನೊಂದಿಗೆ ಆಗಮಿಸುವಂತಾಗಬಾರದು ಎಂದು ಎಚ್ಚರಿಸಿದರು.
#Karnataka #janaspandana #siddaramaiah #congress #congressgovernment