ಮೈಸೂರು : ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ಕೇಂದ್ರ ಸರ್ಕಾರ ನಕಾರ ಎಂದಿರುವ ವಿಚಾರವಾಗಿ ಮೈಸೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಅವರೇನು ನಮಗೆ ಪುಕ್ಸಟ್ಟೆ ಅಕ್ಕಿ ಕೊಡೋದಿಲ್ಲ. ಈ ಬಗ್ಗೆ ನಾವು ಶೀಘ್ರದಲ್ಲಿಯೇ ಉಗ್ರ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಬರುವ ಜುಲೈ 1ರಿಂದ ರಾಜ್ಯದ ಜನತೆಗೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ಕೊಡುವ ಬಗ್ಗೆ ತೀರ್ಮಾನಿಸಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಡೋದಿಲ್ಲ, ನಮ್ಮಲ್ಲಿ ಇಲ್ಲ ಎಂದು ಕಾಗದ ಬರೆದಿದೆ. ನಮಗೆ ಅಕ್ಕಿ ಕೊಡಬೇಕಾಗುತ್ತದೆ ಅಂತಾ ಬೇರೆ ರಾಜ್ಯದವರಿಗೂ ಅಕ್ಕಿ ಕೊಡೋದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಿಎಂ ಈಗಾಗಲೇ ಚತ್ತೀಸಗಢ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಜೊತೆ ಮಾತನಾಡಿ ಪತ್ರ ಬರೆದಿದ್ದಾರೆ. ನಾವು ಈ ಬಗ್ಗೆ ದೊಡ್ಡ ಹೋರಾಟ ಮಾಡಲು ನಿರ್ಧರಿಸಿದ್ದೇವೆ, ಶೀಘ್ರವೇ ಈ ಬಗ್ಗೆ ರೂಪುರೇಷೆ ತಯಾರಿಸುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕದ ರೈತರಿಂದಲೇ ಅಕ್ಕಿ ಖರೀದಿ ಮಾಡಬೇಕೆಂಬ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಓಪನ್ ಮಾರ್ಕೆಟ್ನಲ್ಲಿ ಅಕ್ಕಿ ಖರೀದಿ ಮಾಡಲು ಸಾಧ್ಯವಿಲ್ಲ. ಕೆಲವು ಸಂಸ್ಥೆಗಳು, ಬೇರೆ ಬೇರೆ ಏಜೆನ್ಸಿಗಳ ಮೂಲಕ ಅಕ್ಕಿ ಖರೀದಿ ಮಾಡಬೇಕು. ಯಾರ ಬಳಿಯೂ ಬೊಟ್ಟು ಮಾಡಿ ತೋರಿಸಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡೋದಿಲ್ಲ. ತಿನ್ನುವ ಅಕ್ಕಿ ಹಾಗೂ ಬಡವರ ಮೇಲೆ ರಾಜಕೀಯ ಮಾಡೋದು ಸರಿಯಲ್ಲ. ಕೇಂದ್ರದ ನಿಲುವನ್ನು ಖಂಡಿಸುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.