ಬೆಂಗಳೂರು : ಸರ್ಕಾರದ ಆರನೇ ಗ್ಯಾರಂಟಿ ಅಂದರೆ ಅದು ರೈತರ ಆತ್ಮಹತ್ಯೆ. ಆತ್ಮಹತ್ಯೆ ಅನ್ನುವ ಆರನೇ ಗ್ಯಾರಂಟಿ ಕೊಟ್ಟಿದ್ದಾರೆ. ಇದು ಬಡವರ ಸರ್ಕಾರನಾ? ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ಪ್ರಶ್ನಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಚಳಿಗಾಲ ಶುರುವಾಗುತ್ತಿದೆ. ಮಳೆಗಾಲ ಹೋಯ್ತು. ಇನ್ನೇನು ಬೆಳೆಯಲು ಸಾಧ್ಯ. ಈ ಸರ್ಕಾರಕ್ಕೆ ಕಣ್ಣು, ಕಿವಿ ಎರಡೂ ಇಲ್ಲ. ಜನತಾ ದಳ ಮುಗಿದೋಯ್ತು ಅಂತಾ ಇದ್ದಾರೆ ಅಷ್ಟೇ. ಇಂಥ ದುಸ್ಥಿತಿ ಯಾವತ್ತೂ ಬಂದಿಲ್ಲ ಎಂದು ಕಿಡಿಕಾರಿದರು. ಅಲ್ಲದೆ ಇನ್ನೊಂದೆಡೆ ಗುತ್ತಿಗೆದಾರರು ಸಾಯುತ್ತಿದ್ದಾರೆ. ಕೆಂಪಣ್ಣ ಅವರ ಪತ್ತೆನೇ ಇಲ್ಲ, ಈಗ ಬನ್ನಿ ಅದೆಲ್ಲಿ ಇದ್ದೀರಾ? ಎಂದು ವಾಗ್ದಾಳಿ ನಡೆಸಿದರು. ಸರ್ಕಾರ ಬಂದು ಮೂರ್ನಾಲ್ಕು ತಿಂಗಳಾಯ್ತು. ಐದು ಗ್ಯಾರಂಟಿ ತರುವುದೇ ನಮ್ಮ ಗುರಿ ಎಂದು ಹೇಳಿದ್ದರು. ಮೈಸೂರಿನಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೀತು. ತಮ್ಮ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಕೃಷಿ ಕ್ಷೇತ್ರ ಅಭಿವೃದ್ಧಿ ಆಗದೇ ದೇಶ ಉದ್ಧಾರ ಆಗಲ್ಲ. ಈ ಮೂಲಕ ರೈತರು ಉದ್ಧಾರ ಆಗಬೇಕು. ನೀವು ಬಂದು ಐದು ತಿಂಗಳಾಗಿದೆ. ಸರ್ಕಾರದ ವರದಿ ಪ್ರಕಾರ 4 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. 40 ಲಕ್ಷ ಹೆಕ್ಟೇರ್ ನಷ್ಟು ಬೆಳೆ ಒಣಗಿದೆ ಎಂದು ವರದಿ ಕೊಟ್ಟಿದ್ದಾರೆ. ಹಿಂದೆಂದೂ ಕಂಡರಿಯದ ಬರಗಾಲ ಇದೆ. ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಪಿಎಂ ಕಿಸಾನ್ ಯೋಜನೆ ಅಡಿ, ರಾಜ್ಯ ಸರ್ಕಾರ ನೀಡುತ್ತಿದ್ದ ನಾಲ್ಕು ಸಾವಿರ ಹಣ ನಿಲ್ಲಿಸಿದ್ದಾರೆ. ಇಷ್ಟೆಲ್ಲ ಮಾಡಿ ಈಗ ರೈತರ ಬಗ್ಗೆ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಮಾಡಲು ಸಾಧ್ಯವಾಗ್ತಾ ಇಲ್ಲ, ಎನ್ಡಿಆರ್ಎಫ್ ಮೂಲಕ ಹಣ ನೀಡಿ ಎಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಹೇಳುತ್ತಿದ್ದರು. ಆದರೆ ನಿಮ್ಮ ಸರ್ಕಾರ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ನೀವೇ ಸಿಎಂ ಆಗಿದ್ದೀರ, ನಿಮ್ಮ ಕೈಯಲ್ಲೇ ಸರ್ಕಾರ ಇದೆ ಎಂದು ಜಿಟಿಡಿ ಟೀಕಾ ಪ್ರಹಾರ ನಡೆಸಿದರು.