ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗವು (UGC) ಜನವರಿ 13, 2026 ರಂದು ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ ನಿಯಮಾವಳಿಗಳು, 2026’ (Promotion of Equity in Higher Education Institutions Regulations, 2026) ಅನ್ನು ಹೊರಡಿಸಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟುವುದು ಇದರ ಮುಖ್ಯ ಉದ್ದೇಶವಾಗಿದೆ.

ಹೈದರಾಬಾದ್ ವಿವಿಯಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಅವರು ಜಾತಿ ದೌರ್ಜನ್ಯ ಎದುರಿಸಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಕ್ಯಾಂಪಸ್ ಗಳಲ್ಲಿ ದಲಿತ ಹಾಗೂ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ಸಲುವಾಗಿ ಬಲವಾದ ಕಾನೂನನ್ನು ತರಬೇಕು ಎಂಬ ಒತ್ತಾಯಗಳು ದೇಶದಲ್ಲಿ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಹೊಸ ಯುಜಿಸಿ ಕಾನೂನು ಜಾರಿಗೆ ಸರಕಾರವು ಮುಂದಾಗಿತ್ತು.
ಆದರೆ, ಈ ನಿಯಮಗಳ ಸಾಂವಿಧಾನಿಕತೆಯನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯವು (Supreme Court) ಸದ್ಯಕ್ಕೆ ಈ ನಿಯಮಗಳ ಜಾರಿಗೆ ತಡೆ ನೀಡಿದೆ.
ಈ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:

* ಸಮಾನ ಅವಕಾಶ ಕೇಂದ್ರ (Equal Opportunity Centre – EOC): ಪ್ರತಿ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ತಾರತಮ್ಯದ ದೂರುಗಳನ್ನು ನಿರ್ವಹಿಸಲು ಒಂದು ವಿಶೇಷ ಕೇಂದ್ರವನ್ನು ಸ್ಥಾಪಿಸುವುದು ಕಡ್ಡಾಯ.
* ಇಕ್ವಿಟಿ ಸ್ಕ್ವಾಡ್ಗಳು (Equity Squads): ಕ್ಯಾಂಪಸ್ನಲ್ಲಿ ತಾರತಮ್ಯ ನಡೆಯದಂತೆ ನಿಗಾ ಇಡಲು ಆಂಟಿ-ರಾಗಿಂಗ್ ಸ್ಕ್ವಾಡ್ಗಳ ಮಾದರಿಯಲ್ಲೇ ಇವುಗಳನ್ನು ರಚಿಸಲಾಗುತ್ತದೆ.
* ಜವಾಬ್ದಾರಿ: ನಿಯಮಗಳನ್ನು ಪಾಲಿಸದಿದ್ದರೆ ಆ ಸಂಸ್ಥೆಯ ಮಾನ್ಯತೆ ರದ್ದುಗೊಳಿಸುವ ಅಥವಾ ಅನುದಾನ ನಿಲ್ಲಿಸುವ ಅಧಿಕಾರ UGC ಗೆ ಇರುತ್ತದೆ. ಸಂಸ್ಥೆಯ ಮುಖ್ಯಸ್ಥರೇ ಇದಕ್ಕೆ ನೇರ ಹೊಣೆಗಾರರಾಗಿರುತ್ತಾರೆ.
* ಸಹಾಯವಾಣಿ: ವಿದ್ಯಾರ್ಥಿಗಳಿಗಾಗಿ 24/7 ಸಹಾಯವಾಣಿ ಮತ್ತು ಮೇಲ್ವಿಚಾರಣಾ ತಂಡಗಳನ್ನು ರಚಿಸಬೇಕಾಗುತ್ತದೆ.
ದೂರನ್ನು ಸಲ್ಲಿಸುವುದು ಹೇಗೆ?: ಯಾವುದೇ ವಿದ್ಯಾರ್ಥಿ, ಸಿಬ್ಬಂದಿ ಅಥವಾ ಅರ್ಜಿದಾರರು ತಾರತಮ್ಯಕ್ಕೆ ಒಳಗಾಗಿದ್ದರೆ ದೂರು ನೀಡಬಹುದು. ಇದಕ್ಕೆ ಯಾವುದೇ ಜಾತಿ ಪ್ರಮಾಣಪತ್ರ ಅಥವಾ ರಾಜಕೀಯ ಬೆಂಬಲದ ಅಗತ್ಯವಿಲ್ಲ.
* ಎಲ್ಲಿ ಸಲ್ಲಿಸಬೇಕು?: ಕಾಲೇಜಿನ ‘ಸಮಾನ ಅವಕಾಶ ಕೇಂದ್ರ’ಕ್ಕೆ (EOC) ಆನ್ಲೈನ್ ಅಥವಾ ಆಫ್ಲೈನ್ ಮೂಲಕ ದೂರು ನೀಡಬಹುದು.
* ಮೇಲ್ಮನವಿ: ದೂರು ಸರಿಯಾಗಿ ಇತ್ಯರ್ಥವಾಗದಿದ್ದರೆ ‘ಒಂಬುಡ್ಸ್ಮನ್’ (Ombudsperson) ಅವರಿಗೆ ಮೇಲ್ಮನವಿ ಸಲ್ಲಿಸಬಹುದು.
* ದೂರು ಬಂದ 24 ಗಂಟೆಗಳ ಒಳಗೆ ಸಮಾನತೆ ಸಮಿತಿಯು ಸಭೆ ಸೇರಬೇಕು.
* 15 ಕೆಲಸದ ದಿನಗಳ ಒಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕು.
* ಸಮಿತಿಯ ವರದಿ ಬಂದ 7 ದಿನಗಳ ಒಳಗೆ ಸಂಸ್ಥೆಯ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕು.
* ದೂರುದಾರರ ಗುರುತನ್ನು ಗೌಪ್ಯವಾಗಿಡಲಾಗುವುದು.

ಇದೀಗ ಈ ಕಾನೂನಿಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇದುವರೆಗೂ ನರೇಂದ್ರ ಮೋದಿ ಸರಕಾರದ ಎಲ್ಲಾ ವಿಷಯಕ್ಕೂ ಹಿಂದೆ ಮುಂದೆ ನೋಡದೆ ಬೆಂಬಲ ನೀಡುತ್ತಿದ್ದ ವರ್ಗವು ಸರಕಾರ ತರಹೊರಟಿರುವ ಮಸೂದೆ ವಿರುದ್ಧ ಅಕ್ಷರಶಃ ಬೀದಿಗಿಳಿದಿದೆ.
ಜನರಲ್ ಕ್ಯಾಟಗರಿಯ ವಿದ್ಯಾರ್ಥಿಗಳು ಮೋದಿ ಸರಕಾರದ ಯುಜಿಸಿ ಇಕ್ವಿಟಿ ಬಿಲ್ ವಿರುದ್ಧ ಪ್ರತಿಭಟನೆ ಶುರು ಮಾಡಿಕೊಂಡಿದ್ದಾರೆ. ಸಿಎಎ, ಎನ್ಆರ್ಸಿ, ಕೃಷಿ ಕಾಯ್ದೆ ವಿರುದ್ಧ ಹೋರಾಟ ಶುರು ಮಾಡಿದ್ದವರನ್ನು ಪಾಕಿಸ್ತಾನಕ್ಕೆ ಹೋಗಿ ಅನ್ನುತ್ತಿದ್ದವರು ಇದೀಗ ಬೀದಿಗೆ ಬಂದಿದ್ದಾರೆ. ಮೋದಿಗೆ ಸಪೋರ್ಟ್ ಮಾಡ್ತೀವಿ, ಸರಕಾರದ ಕಾಯ್ದೆ ವಿರೋಧಿಸುವುದಾದರೆ ಪಾಕಿಸ್ತಾನಕ್ಕೆ ಹೋಗಿ ಎಂಬ ಮಾತುಗಳು ಇದೀಗ ಅವರೇ ಕೇಳುವಂತಾಗಿದೆ. ಆ ಮೂಲಕ ತಲೆಗೆ ಹೊಯ್ದ ನೀರು ಅವರ ಕಾಲಡಿಗೆ ಬಂದಿದೆ.

ಸಾಮಾನ್ಯ ವರ್ಗದ (General Category) ಜನರು ಈ ಹೊಸ UGC ಇಕ್ವಿಟಿ ನಿಯಮಾವಳಿಗಳನ್ನು (2026) ಏಕೆ ವಿರೋಧಿಸುತ್ತಿದ್ದಾರೆ?
1. ಏಕಪಕ್ಷೀಯ ನಿಯಮಗಳ ಆತಂಕ:
ಪ್ರತಿಭಟನಾಕಾರರ ಮುಖ್ಯ ವಾದವೆಂದರೆ, ಈ ನಿಯಮಗಳು ಕೇವಲ ಎಸ್ಸಿ (SC), ಎಸ್ಟಿ (ST) ಮತ್ತು ಓಬಿಸಿ (OBC) ಸಮುದಾಯಗಳ ಹಿತಾಸಕ್ತಿಯನ್ನು ಮಾತ್ರ ರಕ್ಷಿಸುತ್ತವೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ಯಾವುದೇ ರೀತಿಯ ತಾರತಮ್ಯ ಅಥವಾ ಕಿರುಕುಳ ಅನುಭವಿಸಿದರೆ, ಅವರಿಗೆ ದೂರು ನೀಡಲು ಈ ನಿಯಮಗಳಲ್ಲಿ ಸ್ಪಷ್ಟವಾದ ಅಥವಾ ಪ್ರತ್ಯೇಕವಾದ ಅವಕಾಶಗಳಿಲ್ಲ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.
2. ದುರುಪಯೋಗದ ಭಯ:
ಈ ನಿಯಮಗಳ ಅಡಿಯಲ್ಲಿ ದೂರು ನೀಡಲು ಯಾವುದೇ ಭೌತಿಕ ಪುರಾವೆ ಅಥವಾ ಜಾತಿ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಇದು ವಿನಾಕಾರಣ ಮೇಲ್ವರ್ಗದ ವಿದ್ಯಾರ್ಥಿಗಳು ಅಥವಾ ಅಧ್ಯಾಪಕರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಲು ದಾರಿಯಾಗಬಹುದು ಮತ್ತು ಇದನ್ನು ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಬಳಸಿಕೊಳ್ಳಬಹುದು ಎಂಬುದು ಪ್ರತಿಭಟನಾಕಾರರ ಇನ್ನೊಂದು ವಾದವಾಗಿದೆ.
3. ಕ್ಯಾಂಪಸ್ನಲ್ಲಿ ವಿಭಜನೆ ಮತ್ತು ಅಶಾಂತಿ: ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣದ ಕೇಂದ್ರಗಳಾಗಿರಬೇಕು. ಆದರೆ ‘ಇಕ್ವಿಟಿ ಸ್ಕ್ವಾಡ್ಗಳು’ ಮತ್ತು ಪ್ರತ್ಯೇಕ ಸಮಿತಿಗಳನ್ನು ರಚಿಸುವುದರಿಂದ ವಿದ್ಯಾರ್ಥಿಗಳ ನಡುವೆ ಜಾತಿ ಆಧಾರಿತ ಗೋಡೆಗಳು ನಿರ್ಮಾಣವಾಗುತ್ತವೆ. ಇದು ಕ್ಯಾಂಪಸ್ನಲ್ಲಿ ಏಕತೆಯ ಬದಲು ಗುಂಪುಗಾರಿಕೆ ಮತ್ತು ಅಶಾಂತಿಗೆ ಕಾರಣವಾಗಬಹುದು ಎಂದು ‘ಸವರ್ಣ ಸೇನೆ’ಯಂತಹ ಸಂಘಟನೆಗಳು ವಾದಿಸುತ್ತಿವೆ.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು ಮತ್ತು ಸಮಾನತೆಯ ಹೆಸರಿನಲ್ಲಿ ತರುತ್ತಿರುವ ಈ ನಿಯಮಗಳು ಸಾಮಾನ್ಯ ವರ್ಗದವರಿಗೆ ಸಮಾನ ಅವಕಾಶ ನೀಡುತ್ತಿಲ್ಲ ಎಂದು ಸಾಮಾನ್ಯ ವರ್ಗದ ಜನರು ಪ್ರತಿಪಾದಿಸುತ್ತಿದ್ದಾರೆ.

ದೂರು ಬಂದ 24 ಗಂಟೆಯೊಳಗೆ ಸಮಿತಿ ರಚಿಸಿ, 15 ದಿನದೊಳಗೆ ವಿಚಾರಣೆ ಮುಗಿಸಬೇಕು ಎನ್ನುವ ನಿಯಮವು ಆತುರದ ನಿರ್ಧಾರಗಳಿಗೆ ಮತ್ತು ಅನ್ಯಾಯದ ಶಿಕ್ಷೆಗೆ ಕಾರಣವಾಗಬಹುದು ಎಂಬ ಭಯವೂ ಕಾಡುವುದಾಗಿ ಕಾಯ್ದೆ ವಿರೋಧಿಗಳು ಹೇಳಿದ್ದಾರೆ.
ಕಾಲೇಜು ಮುಖ್ಯಸ್ಥರ ಮೇಲೆ ನೇರ ಕಾನೂನು ಜವಾಬ್ದಾರಿ ಇರುವುದರಿಂದ, ಅವರು ಭಯದಿಂದ ಕೇವಲ ಒಂದು ವರ್ಗದ ಪರವಾಗಿ ಕೆಲಸ ಮಾಡಬಹುದು ಎಂಬ ಆತಂಕವೂ ಅವರು ವ್ಯಕ್ತ ಪಡಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ
ಈ ಎಲ್ಲ ವಿರೋಧಗಳ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ನಿಯಮಗಳ ಜಾರಿಗೆ ತಡೆ ನೀಡಿದೆ. “ನಾವು ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಕ್ತ ಮತ್ತು ಅಂತರ್ಗತ ವಾತಾವರಣವನ್ನು ಬಯಸುತ್ತೇವೆ. ಈ ನಿಯಮಗಳು ಸಾಂವಿಧಾನಿಕವಾಗಿ ಸರಿಯಾಗಿವೆಯೇ ಎಂಬ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ” ಎಂದು ನ್ಯಾಯಾಲಯವು ಹೇಳಿದೆ.
ಸರ್ವೋಚ್ಚ ನ್ಯಾಯಾಲಯವು ಈ ನಿಯಮಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯಲ್ಲಿ ಈ ನಿಯಮಗಳಲ್ಲಿ ಬದಲಾವಣೆ ತರಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಹೊರಬೀಳಲಿದೆ.

ಸರ್ವೋಚ್ಚ ನ್ಯಾಯಾಲಯವು ಈ ನಿಯಮಗಳನ್ನು ಪರಿಶೀಲಿಸುತ್ತಿದ್ದು, ಸದ್ಯಕ್ಕೆ ಇವುಗಳನ್ನು ಜಾರಿಗೊಳಿಸದಂತೆ ತಡೆ ನೀಡಿದೆ. ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು “ಯಾವುದೇ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಮತ್ತು ನಿಯಮಗಳು ದುರುಪಯೋಗವಾಗದಂತೆ ನೋಡಿಕೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.













