ಸಾಯುವ ದನಗಳ ಮಾಂಸಕ್ಕಾಗಿ ಬಳಕೆ ಮಾಡುವುದಕ್ಕೂ ರಾಜ್ಯ ಸರ್ಕಾರ ನಿಯಮಗಳನ್ನು ಮಾಡಿದೆ. ದನಗಳ ಸಾಗಾಟ ಮಾಡುವಾಗ ದನಗಳ ರಕ್ಷಣೆಗೆ ಯುವಕರ ಗುಂಪು ಜನರ ಮೇಲೆ ದಾಳಿ ಮಾಡಿ ಕೊಂದ ಆರೋಪವೂ ಇದೆ. ಇನ್ನು ಬೆಂಗಳೂರಿನಲ್ಲಿ ನಾಯಿಗಳ ಹಾವಳಿ ತಡೆಯಲು ಮುಂದಾದರೆ ಬಿಜೆಪಿ ಸಂಸದೆ ಮನೇಕಾ ಗಾಂಧಿ ದಿಲ್ಲಿಯಿಂದ ಫೋನ್ ಮಾಡಿ ಕನ್ನಡಿಗ ಅಧಿಕಾರಿಗೆ ಬಾಯಿಗೆ ಬಂದ ಹಾಗೆ ಬೈಯ್ಯುತ್ತಾರೆ. ಇದರ ನಡುವೆ ರಾಜ್ಯದಲ್ಲಿ ರಾಜಕಾರಣಕ್ಕಾಗಿ ಮನುಷ್ಯರ ಕೊಲೆಗಳು ನಡೆಯುವುದಕ್ಕೆ ಶುರು ಆಗಿವೆ. ಧಾರವಾಡದಲ್ಲಿ ಯುವಕನ ಕೊಲೆ ನಡೆದಿದೆ. ಅದೂ ಕೂಡ ಓರ್ವ ಬಿಜೆಪಿ ಕಾರ್ಯಕರ್ತನ ಕೊಲೆ.
ಧಾರವಾಡದ ಕೋಟೂರು ಗ್ರಾಮದ ಪ್ರವೀಣ್ ಕಮ್ಮಾರ ಎಂಬಾತನ ಕೊಲೆ ನಡೆದಿದೆ. ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. 36 ವರ್ಷದ ಪ್ರವೀಣ್ ಕಮ್ಮಾರ, ಗ್ರಾಮದಲ್ಲಿ ನಡೆದಿದ್ದ ಉಡಚಮ್ಮ ದೇವಿ ಜಾತ್ರೆಯಲ್ಲಿ ಗಲಾಟೆ ಬಿಡಿಸಿ ಕಳುಹಿಸಿದ್ದ. ಜಾತ್ರೆಯಲ್ಲಿ ಪ್ರಸಾದವಿತರಣೆ ವೇಳೆ ಕೆಲವರು ಕುಡಿದು ಗಲಾಟೆ ಮಾಡುತ್ತಿದ್ದಾಗ ಪ್ರವೀಣ್ ಕಮ್ಮಾರ, ಜಗಳ ಬಿಡಿಸಿ ಕಳುಹಿಸಿದ್ದ ಎನ್ನಲಾಗಿದೆ. ಜಗಳ ಮಾಡುತ್ತಿದ್ದ ಒಂದು ಗುಂಪಿನವರು ಪುನಃ ಆಗಮಿಸಿ ಚಾಕು ಇರಿದಿದ್ದಾರೆ ಎಂದು ದೂರಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ಪ್ರವೀಣ ಸಾವನ್ನಪ್ಪಿದ್ದಾನೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿಯ ಕೆಳಮಟ್ಟದ ಕಾರ್ಯಕರ್ತನ ಹತ್ಯೆ ಆಗಿದೆ. ಇದು ರಾಜಕೀಯ ಕೊಲೆ, ಇದೊಂದು ದುರ್ದೈವ ಸಂಗತಿ ಎಂದಿದ್ದಾರೆ. ಈ ಮೊದಲು ಯೋಗೇಶ ಗೌಡರ ಕೊಲೆ ಆಗಿತ್ತು, ತನಿಖೆ ಸಹ ಆಗುತ್ತಿದೆ. ಈಗ ಪ್ರವೀಣ ಕಮ್ಮಾರನ ಕೊಲೆ ಆಗಿದೆ. ಶಾಸಕ ಅಮೃತ ದೇಸಾಯಿ ಅವರು ಪ್ರವೀಣ್ ಅವರಿಗೆ ಎಚ್ಚರದಿಂದ ಇರಲು ಹೇಳಿದ್ರು. ಆದರೂ ಈ ಘಟನೆ ನಡೆದಿದೆ. ಸೂಕ್ತ ಕ್ರಮಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ರಾಜ್ಯ ಸರ್ಕಾರ ಅತ್ಯಂತ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು. ಮೃತ ಪ್ರವೀಣನ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆ ಕುಟುಂಬದ ಜೊತೆಗೆ ನಾನು ಹಾಗು ಅಮೃತ ದೇಸಾಯಿ ಇಬ್ಬರೂ ಇರ್ತೀವಿ. ಕೊಲೆಗೆ ನಿಖರವಾಗಿ ಕಾರಣ ತಿಳಿದು ಬಂದಿಲ್ಲ. ಆದರೆ ಇದು ರಾಜಕೀಯಕ್ಕೆ ನಡೆದಿರುವ ಕೊಲೆ ಎಂದು ಮಾಹಿತಿ ಸಿಕ್ಕಿದೆ ಎಂದಿದ್ದಾರೆ.
ಪ್ರವೀಣ ಯಾರ ಜೊತೆಗೂ ಜಗಳ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಲಿಂಗಾಯತ ಪಂಚಮಸಾಲಿ ಸಮುದಾಯದ ಯುವಕನ ಕೊಲೆ ಆಗಿದೆ. ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಕುಟುಂಬಕ್ಕೆ ಪರಿಹಾರವನ್ನು ನೀಡುತ್ತೇವೆ ಎನ್ನುತ್ತಲೇ ರಾಜಕಾತಣಕ್ಕೆ ಬೇಕಾದ ಅಂಶಗಳನ್ನು ಬಹಿರಂಗ ಮಾಡಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮುದಾಯದ ಯುವಕನ ಹತ್ಯೆ ಎಂದು ಉಲ್ಲೇಖಿಸಿದ್ದಾರೆ. ಬಿಜೆಪಿ ತಳ ಮಟ್ಟದ ಕಾರ್ಯಕರ್ತನ ಕೊಲೆ ಆಗಿದೆ ಎಂದಿದ್ದಾರೆ. ರಾಜಕಾರಣಕ್ಕೆ ನಡೆದಿರುವ ಹತ್ಯೆ ಎಂದು ಮಾಹಿತಿ ನೀಡಿದ್ದಾರೆ. ಈ ಹಿಂದೆ ಯೋಗೇಶ್ ಗೌಡರ ಕೊಲೆ ನಡೆದಿತ್ತು, ವಿಚಾರಣೆಯೂ ನಡೆಯುತ್ತಿದೆ. ಈ ಕೊಲೆ ಪಾತಕರಿಗೆ ಶಿಕ್ಷೆಯಾಗಬೇಕು ಎಂದಿರುವ ಕೇಂದ್ರ ಸಚಿವರು, ಕುಟುಂಬಕ್ಕೆ ಪರಿಹಾರ ನೀಡುವುದಾಗಿಯೂ ತಿಳಿಸಿದ್ದಾರೆ. ಆದರೆ ನಾನು ಯಾರ ಮೇಲೂ ಆರೋಪ ಮಾಡಲ್ಲ ಎನ್ನುವ ಮೂಲಕ ವಿರೋಧ ಪಕ್ಷಗಳ ಕಡೆಗೆ ಮಾತಿನ ನೋಟ ತಿರುಗುವಂತೆ ಮಾತನಾಡಿದ್ದಾರೆ.
ರಾಜಕಾರಣದಲ್ಲಿ ಎದುರಾಳಿ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎನ್ನುವ ಕಾರಣಕ್ಕೆ ಕೆಲವೊಮ್ಮೆ ಪ್ರಬಲ ನಾಯಕರ ಹತ್ಯೆಗಳು ನಡೆಯುತ್ತದೆ. ಇನ್ನು ರಾಜಕಾರಣದಲ್ಲಿ ಸೋಲು ಎದುರಾಗುತ್ತದೆ ಎನ್ನುವ ಸಮಯದಲ್ಲಿ ಕೆಲವೊಮ್ಮೆ ತಮ್ಮವರನ್ನೇ ಕೊಂದು ರಾಜಕೀಯ ಲಾಭ ಪಡೆಯುವ ಕೆಲಸವೂ ನಡೆಯುತ್ತದೆ. ಕಳೆದ ಚುನಾವಣೆ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೇಸ್ತಾ ಎಂಬ ತಳ ಮಟ್ಟದ ಹಿಂದೂ ಕಾರ್ಯಕರ್ತನ ಕೊಲೆ ನಡೆದಿತ್ತು. ಅದನ್ನು ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೊಲೆ ಮಾಡಿದ್ದಾರೆ, ಸಿದ್ದರಾಮಯ್ಯ ಸರ್ಕಾರವೇ ಬೆಂಬಲ ಕೊಡುತ್ತಿದೆ ಎಂದು ಆರೋಪ ಮಾಡಿದ್ದರು. ಕೊಲೆಗೂ ನಮಗೂ ಸಂಬಂಧವೇ ಇಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿದ್ದ ಸಿದ್ದರಾಮಯ್ಯ, ಸಿಬಿಐ ತನಿಖೆಗೆ ಆದೇಶ ಮಾಡಿದ್ದರು. ಕಳೆದ ಐದಾರು ತಿಂಗಳ ಹಿಂದೆ ಸಿಬಿಐ ತನಿಖಾ ವರದಿ ಸಲ್ಲಿಸಿದ್ದು, ಕೊಲೆಗೆ ರಾಜಕೀಯ ನಂಟಿಲ್ಲ ಎಂದಿತ್ತು. ಕೇಂದ್ರ ಹಾಗು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿ ಇದ್ದಾಗಲೇ ವರದಿ ಬಂದಿದ್ದು ಕಾಂಗ್ರೆಸ್ ವಾದಕ್ಕೆ ಆನೆ ಬಲ ಬಂದಂತಾಗಿತ್ತು.
ಅದೇನೇ ಇರಲಿ, ಪ್ರಾಣಿಗಳ ಮೇಲೆ ತೋರಿಸುವ ಪ್ರೀತಿ ಮನುಷ್ಟರ ಮೇಲೂ ಇರಬೇಕು. ಯಾಕಂದ್ರೆ ಮನುಷ್ಯ ಕೂಡ ಒಂದು ಜಾತಿಯ ಪ್ರಾಣಿಯೇ ಆಗಿದ್ದಾನೆ. ಈ ಪ್ರಕರಣದಲ್ಲೂ ಕೊಂದವರಿಗೆ ಶಿಕ್ಷೆಯಾಗಬೇಕು. ರಾಜಕಾರಣದಲ್ಲಿ ತಳ ಸಮುದಾಯ ಹುಡುಗರ ಕೊಲೆಗಳು ನಡೆಯುವುದು ನಿಲ್ಲಬೇಕು.
ಕೃಷ್ಣಮಣಿ