ಬೆಂಗಳೂರು : ಕಳೆದ ಫೆಬ್ರವರಿ 28 ರಂದು ಆರಂಭವಾಗಿರುವ ಇರಾನ್ -ಇಸ್ರೇಲ್ ನಡುವಿನ ಯುದ್ಧದ ತೀವ್ರತೆ ಮತ್ತಷ್ಟು ಅಧಿಕವಾಗುತ್ತಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಹತ್ಯೆಯ ಬಳಿಕ ಇರಾನ್ ಇಸ್ರೇಲ್ ಹಾಗೂ ಅಮೆರಿಕದ ಸ್ಥಳಗಳಲ್ಲಿ ನಡೆಸುತ್ತಿರುವ ಪ್ರತೀಕಾರದ ದಾಳಿಯು ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಿಗೆ ವ್ಯಾಪಿಸಿದೆ.
ಪಶ್ಚಿಮ ಏಷ್ಯಾದಾದ್ಯಂತ ಅಮೆರಿಕ ಮತ್ತು ಇಸ್ರೇಲ್ಗೆ ಸಂಬಂಧಿಸಿದ ಆರ್ಥಿಕ ಮತ್ತು ವಸಾಹತು ಕೇಂದ್ರಗಳನ್ನು ಗುರಿಯಾಗಿಸುವುದಾಗಿ ಇರಾನ್ ಈಗಾಗಲೇ ಎಚ್ಚರಿಕೆ ನೀಡಿದೆ. ಅಮೆರಿಕ ಮತ್ತು ಆಡಳಿತಕ್ಕೆ ಸೇರಿದ ನೆಲೆಗಳನ್ನು ಟಾರ್ಗೆಟ್ ಮಾಡಿ ನಮ್ಮ ದಾಳಿ ಮುಂದುವರೆಯಲಿದೆ. ಈ ಸ್ಥಳಗಳಿಂದ 1,000 ಮೀಟರ್ ದೂರದಲ್ಲಿರುವಂತೆ ಇರಾನ್ನ ವಕ್ತಾರರು ತಿಳಿಸಿದ್ದಾರೆ.
ಇರಾನಿನ ಸ್ಥಳಗಳು ಹಾಗೂ ಪ್ರಮುಖ ನಗರಗಳ ಮೇಲೆ ಇಸ್ರೇಲಿ-ಅಮೆರಿಕದ ದಾಳಿಗಳ ಬಳಿಕ ನಾವು ಈ ನಿರ್ಧಾರಕ್ಜೆ ಬಂದಿದ್ದೇವೆ. ಟೆಹ್ರಾನ್ನ ಬ್ಯಾಂಕ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ಪಡೆಗಳು ರಾತ್ರಿಯಿಡೀ ದಾಳಿ ನಡೆಸಿ, ಅಪಾರ ಸಂಖ್ಯೆಯ ಜನರ ಸಾವಿಗೆ ಕಾರಣವಾಗಿವೆ ಎಂದು ಇರಾನಿನ ಸಶಸ್ತ್ರ ಪಡೆ ಖತಮ್ ಅಲ್-ಅನ್ಬಿಯಾ ಪ್ರಧಾನ ಕಚೇರಿ ತಿಳಿಸಿದೆ.
ಇದನ್ನೂ ಓದಿ : MSME ನೂತನ ನೀತಿಯಿಂದ ಜಾಗತಿಕ ಮಟ್ಟದಲ್ಲಿ ರಾಜ್ಯ ಮುಂಚೂಣಿಗೆ : ರೋಹಿಣಿ ಸಿಂಧೂರಿ ವಿಶ್ವಾಸ..
ಪ್ರಮುಖವಾಗಿ ಇರಾನ್ನ ಈ ನಿರ್ಧಾರದಿಂದ ಸ್ಥಳೀಯ ದೇಶಗಳ ಆರ್ಥಿಕತೆಗೆ ಭಾರಿ ಪೆಟ್ಟು ನೀಡಲಿದೆ, ವಿಶೇಷವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ದುಬೈನ ಕಳವಳವಕ್ಕೆ ಕಾರಣವಾಗಿದೆ. ದುಬೈ ಜಾಗತಿಕವಾಗಿ ಸಾಕಷ್ಟು ಜನರನ್ನು ತನ್ನತ್ತ ಸೆಳೆಯುವ ದೇಶವಾಗಿದೆ. ಅದರಂತೆ ಗಲ್ಫ್ ರಾಷ್ಟ್ರಗಳು ಆರ್ಥಿಕತೆಯನ್ನು ಗಟ್ಟಿಯಾಗಿರಿಸಿಕೊಂಡಿರುತ್ತವೆ. ಆದರೆ ಈ ಯುದ್ಧ ಸನ್ನಿವೇಶದಿಂದ ನೆರೆಯ ದೇಶಗಳಾದ ಸೌದಿ ಅರೇಬಿಯಾ ಮತ್ತು ಬಹ್ರೇನ್ಗಳು ಆತಂಕಕ್ಕೆ ಒಳಗಾಗಿವೆ.
ಇನ್ನೂ ಈ ದೇಶಗಳು ಮಧ್ಯಪ್ರಾಚ್ಯದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ದೇಶಗಳಾಗಿವೆ. ಇರಾನ್ ಪರ್ಷಿಯನ್ ಕೊಲ್ಲಿಯಾದ್ಯಂತ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಅಲ್ಲದೆ ವಿಶ್ವದ ಅತ್ಯಂತ ಜನನಿಬಿಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಪೈಕಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಡ್ರೋನ್ಗಳು ದಾಳಿ ಮಾಡಿ ನಾಲ್ವರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ಕೊಲ್ಲಿಯಾದ್ಯಂತ ತೈಲ ಸಾಗಾಣಿಕೆಯನ್ನು ತಡೆದಿದೆ. ಓಮನ್ ಕರಾವಳಿಯ ಹಾರ್ಮುಜ್ ಜಲಸಂಧಿಯಲ್ಲಿ ಒಂದು ಕಂಟೇನರ್ ಹಡಗಿಗೆ ಬೆಂಕಿ ಹಚ್ಚಲಾಗಿದೆ. ಈ ಜಲಸಂಧಿಯು ಜಾಗತಿಕವಾದ ತೈಲ ಸಾಗಣೆಯ ಮಾರ್ಗಗಳಲ್ಲಿ ಪ್ರಮುಖವಾಗಿದೆ. ಇರಾನ್ನ ಇದನ್ನು ಮುಚ್ಚಿರುವ ಕಾರಣ ಈಗಾಗಲೇ ತೈಲ ಹಾಗೂ ಗ್ಯಾಸ್ ಸಿಲಿಂಡರ್ಗಳ ಅಭಾವ ಅಧಿಕವಾಗುತ್ತಿದೆ.
ಈ ನಡುವೆ ಇರಾನ್ನ ಡ್ರೋನ್ಗಳು ಹಾಗೂ ಕ್ಷಿಪಣಿಗಳು ವಿವಿಧ ಗಲ್ಫ್ ರಾಷ್ಟ್ರಗಳತ್ತ ಮುಖಮಾಡಿವೆ. ಇದಕ್ಕೆ ಪ್ರತಿಯಾಗಿ ಇರಾನ್ನ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಕುವೈತ್ ಹೇಳಿಕೊಂಡಿದೆ. ಸೌದಿ ಅರೇಬಿಯಾವು ರಾಜ್ಯದ ಶೈಬಾ ತೈಲ ಕೇಂದ್ರದ ಕಡೆಗೆ ಹಾರಿದ್ದ ಡ್ರೋನ್ಗಳನ್ನು ನಾಶಪಡಿಸಿದೆ. ಸೌದಿ ಮತ್ತು ಅಮೆರಿಕದ ಪಡೆಗಳು ಜಂಟಿಯಾಗಿ ನಿರ್ವಹಿಸುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ಹಾರಿಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶಪಡಿಸಿರುವುದಾಗಿ ಹೇಳಿವೆ.
ಈ ಎಲ್ಲ ಘಟನೆಗಳು ಪ್ರಮುಖವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಹೆಚ್ಚಿನ ಸರಕು ಸಾಗಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ, ಇದು ಕಿರಿದಾದ ಕಡಲ ಕಾರಿಡಾರ್ ಆಗಿದ್ದು, ವಿಶ್ವದ ತೈಲ ಸಾಗಣೆಯ ಐದನೇ ಒಂದು ಭಾಗ ಇಲ್ಲಿಂದಲೇ ಹಾದುಹೋಗುತ್ತದೆ. ಇರಾನ್ ದೇಶವು ಗಲ್ಫ್, ಅರಬ್ ರಾಷ್ಟ್ರಗಳಾದ್ಯಂತ ತೈಲ ನಿಕ್ಷೇಪಗಳನ್ನು ಗುರಿಯಾಗಿಸಿಕೊಂಡಿದೆ. ಹೀಗಾಗಿ ಇರಾನ್ಗೆ ಶರಣಾಗುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಅದರೂ ಡೋಂಟ್ ಕೇರ್ ಎಂದಿರುವ ದೊಡ್ಡಣ್ಣನಿಗೆ ಓಪನ್ ಚಾಲೆಂಜ್ ಹಾಕಿದ್ದು, ತನ್ನ ದೇಶವನ್ನು ರಕ್ಷಿಸಿಕೊಳ್ಳಲು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದೆ.






