ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖವಲ್ಯಾ ಡೊಂಗರ್ನಲ್ಲಿ ಒಂದೇ ಕುಟುಂಬದ ಮೂವರು ಬೆಟ್ಟದಿಂದ ಬಿದ್ದು ಮೃತಪಟ್ಟ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಮಗ ಕ್ರುನಾಲ್, ತಂದೆ ಹಾಗೂ ತಾಯಿ ಸಾವನ್ನಪ್ಪಿದ ಘಟನೆಗೆ ಐಫೋನ್ ಇಎಂಐ ಪಾವತಿ ಕಾರಣ ಎಂಬ ವದಂತಿಯನ್ನು ಮೃತರ ಸಂಬಂಧಿಕರು ತಳ್ಳಿಹಾಕಿದ್ದಾರೆ.

ಆರಂಭದಲ್ಲಿ, ಐಫೋನ್ನ ಇಎಂಐ ಪಾವತಿಸುವ ವಿಚಾರದಲ್ಲಿ ಕ್ರುನಾಲ್ ಮತ್ತು ಆತನ ಪೋಷಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಬೇಸರಗೊಂಡ ಕ್ರುನಾಲ್ ಖವಲ್ಯಾ ಡೊಂಗರ್ಗೆ ತೆರಳಿ ಬೆಟ್ಟದಿಂದ ಜಿಗಿಯಲು ಮುಂದಾಗಿದ್ದಾನೆ. ಆತನನ್ನು ತಡೆಯಲು ತಂದೆ ಪ್ರಯತ್ನಿಸಿದಾಗ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಈ ದೃಶ್ಯ ಕಂಡ ತಾಯಿ ಸಂಗೀತಾ ಕೂಡ ಬೆಟ್ಟದಿಂದ ಹಾರಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.

ಆದರೆ ಇದೀಗ ಕ್ರುನಾಲ್ ಮಾವ ಗಣೇಶ್ ಜರಾದ್ ಅವರು ಈ ಘಟನೆಗೆ ಐಫೋನ್ ಇಎಂಐ ಯಾವುದೇ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮನೆಯಲ್ಲಿನ ಪೋಷಕರ ನಡುವಿನ ನಿರಂತರ ಜಗಳದಿಂದ ಕ್ರುನಾಲ್ ಮಾನಸಿಕವಾಗಿ ಬೇಸರಗೊಂಡಿದ್ದ. ಅವರಿಬ್ಬರ ನಡುವಿನ ಜಗಳವನ್ನು ನಿಲ್ಲಿಸಲು ಅಥವಾ ಹೆದರಿಸಲು ಕ್ರುನಾಲ್ ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅವರು ಹೇಳಿದ್ದಾರೆ.

ಕ್ರುನಾಲ್ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿತ್ತು. ಮಗನಿಗೆ ಈಗಾಗಲೇ ಐಫೋನ್ ಖರೀದಿಸಿಕೊಡಲಾಗಿತ್ತು. ಅಲ್ಲದೇ ಕ್ರುನಾಲ್ ನೀಟ್ ತರಬೇತಿ ಪಡೆಯುತ್ತಿದ್ದಿದ್ದು, ಅದಕ್ಕೆ ಬೇಕಾದ ಶುಲ್ಕವನ್ನೂ ಪೋಷಕರು ಪಾವತಿಸಿದ್ದರು. ಹೀಗಾಗಿ ಇಎಂಐ ಪಾವತಿಸಲು ಹಣ ನೀಡದ ಕಾರಣಕ್ಕೆ ಆತ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂಬುದು ಸರಿಯಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಓದಿನಲ್ಲಿ ಮುಂದಿದ್ದ ಕ್ರುನಾಲ್ 10ನೇ ತರಗತಿ ಪರೀಕ್ಷೆಯಲ್ಲಿ ಶೇ.92ರಷ್ಟು ಅಂಕಗಳನ್ನು ಗಳಿಸಿದ್ದ. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಆಸೆಯಿಂದ ಪೋಷಕರು ಆತನ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಘಟನೆಯ ನಿಖರ ಕಾರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಈ ಪ್ರಕರಣ ಇದೀಗ ಹೊಸ ಆಯಾಮ ಪಡೆದುಕೊಂಡಿದ್ದು, ತನಿಖೆಯ ಬಳಿಕ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.





