ಒಂದು ಕಡೆ ಪಂಜಾಬ್ ಕಾಂಗ್ರೆಸ್ಸಿನ ಅಲ್ಲೋಲಕಲ್ಲೋಲ, ಮತ್ತೊಂದು ಕಡೆ ಕಾಂಗ್ರೆಸ್ ಪುನರ್ ಸಂಘಟನೆಯ ಜಿ 23 ನಾಯಕರ ಪಟ್ಟು. ಇಂತಹ ಹಿನ್ನೆಲೆಯಲ್ಲಿ ದಿಢೀರನೇ ನಡೆದ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯ ಭೇಟಿ ಸಹಜವಾಗೇ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.

ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೂರ್ಣಾವಧಿ ನೇಮಕವಾಗಬೇಕು ಮತ್ತು ಎಐಸಿಸಿ ಕಾರ್ಯಕಾರಿಣಿಗೆ ಚುನಾವಣೆ ನಡೆಯಬೇಕು ಎಂಬ ಬೇಡಿಕೆಯೊಂದಿಗೆ ಬಹಿರಂಗ ಹೇಳಿಕೆಯ ಮೂಲಕ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವ ಪಕ್ಷದ ಹಿರಿಯ ನಾಯಕರ ಜಿ 23 ಕೂಟ, ಪಂಜಾಬ್ ರಾಜಕೀಯ ಕ್ಷಿಪ್ರ ಬೆಳವಣಿಗೆಗಳ ಬಳಿಕ, ಮತ್ತೊಮ್ಮೆ ದನಿ ಎತ್ತಿದ್ದರು. ಒಂದು ಹಂತದಲ್ಲಿ ತತಕ್ಷಣಕ್ಕೆ ಪಕ್ಷದ ನಾಯಕತ್ವ, ಅಂತಹ ಬೇಡಿಕೆಗಳಿಗೆ ಮಣೆ ಹಾಕಿ ಕೂಡಲೇ ಹೊಸ ಬದಲಾವಣೆಗೆ ಮುಂದಾಗದೇ ಇದ್ದಲ್ಲಿ, ಜಿ 23 ಕೂಟದ ನಾಯಕರು ಪರ್ಯಾಯ ರಾಜಕೀಯ ವೇದಿಕೆಯನ್ನೇ ಘೋಷಿಸಬಹುದು ಎಂಬ ಮಾತುಗಳೂ ಕೇಳಿಬಂದಿದ್ದವು.
ಆ ಹಿನ್ನೆಲೆಯಲ್ಲಿ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ದಿಢೀರನೇ, ಪಕ್ಷದ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರಿಗೆ ಬುಲಾವ್ ಕಳಿಸಿ, ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿರುವುದು ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿತ್ತು. ಎಐಸಿಸಿ ಆಯಕಟ್ಟಿನ ಹುದ್ದೆಗೆ ಸಿದ್ದರಾಮಯ್ಯ ನೇಮಕ ಮಾಡುವ ಮೂಲಕ, ಬಿಜೆಪಿ ಆಡಳಿತ ಮತ್ತು ಪ್ರಧಾನಿ ಮೋದಿ ವಿರುದ್ಧ ನೇರಾನೇರ ಟೀಕೆ ಮಾಡುವ ಮತ್ತು ಪ್ರಶ್ನಿಸುವ ಅವರ ದಿಟ್ಟತನವನ್ನು ರಾಷ್ಟ್ರಮಟ್ಟದಲ್ಲಿ ಪಕ್ಷದ ಸಂಘಟನೆಗೆ ಪೂರಕವಾಗಿ ಬಳಸಿಕೊಳ್ಳಲು ಹೈಕಮಾಂಡ್ ಯೋಚಿಸಿದೆ. ಹಾಗಾಗಿಯೇ ಅವರನ್ನು ಕರೆಸಿಕೊಳ್ಳಲಾಗಿದೆ ಎಂಬುದು ಮೊದಲನೆಯದಾಗಿ ಕೇಳಿಬಂದ ಮಾತು.
ಆದರೆ, ಸ್ವತಃ ಸಿದ್ದರಾಮಯ್ಯ ಈ ಪ್ರಸ್ತಾಪವನ್ನು ತಾವು ಈ ಹಿಂದೆ ರಾಹುಲ್ ಗಾಂಧಿಯವರು ಕೇಳಿದಾಗಲೀ ಒಪ್ಪಿಕೊಂಡಿಲ್ಲ, ಈಗಲೂ ಒಪ್ಪಿಕೊಳ್ಳುವುದಿಲ್ಲ. ತಾವೇನಿದ್ದರೂ ಕರ್ನಾಟಕಕ್ಕೆ ಸೀಮಿತವಾಗಿ ಉಳಿಯುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಹಾಗಾಗಿ ಆ ವಿಷಯ ಮಾತುಕತೆ ವೇಳೆ ಪ್ರಸ್ತಾಪವಾಗಲಿಲ್ಲಎಂದಿದ್ದಾರೆ. ಆದರೆ, ಈ ಮಾತುಕತೆ ವೇಳೆ ಪಕ್ಷದ ಸಂಘಟನೆ ಮತ್ತು ಬಲವರ್ಧನೆ ಕುರಿತು ಸೋನಿಯಾ ಗಾಂಧಿಯವರು ತಮ್ಮೊಂದಿಗೆ ಚರ್ಚಿಸಿದರು ಎಂಬುದನ್ನು ಅವರು ಹೇಳಿದ್ದಾರೆ.
ಆ ಹಿನ್ನೆಲೆಯಲ್ಲಿ ಎಐಸಿಸಿ ಪುನರ್ ರಚನೆ ಕುರಿತು ಚರ್ಚಿಸಲು ಹೈಕಮಾಂಡ್ ಸಿದ್ದರಾಮಯ್ಯ ಜೊತೆ ಸಮಾಲೋಚನೆ ನಡೆಸಿದೆ ಮತ್ತು ಕರ್ನಾಟಕದ ನಾಯಕರೊಬ್ಬರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ರಾಜ್ಯಕ್ಕೆ ಸದ್ಯ ಎಐಸಿಸಿ ಮಟ್ಟದಲ್ಲಿ ಕೈತಪ್ಪಿರುವ ಆಯಕಟ್ಟಿನ ಸ್ಥಾನವನ್ನು ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಆ ಸ್ಥಾನಕ್ಕೆ ಸೂಕ್ತ ಹೆಸರು ಸೂಚಿಸಲು ಸೋನಿಯಾ ಅವರು ಕೇಳಿದಾಗ, ಸಿದ್ದರಾಮಯ್ಯ ತಮ್ಮ ಆಪ್ತ ಲಿಂಗಾಯತ ನಾಯಕ ಡಾ ಎಂ ಬಿ ಪಾಟೀಲರ ಹೆಸರು ಹೇಳಿದ್ದಾರೆ ಎಂದೂ ಹೇಳಲಾಗುತ್ತಿದೆ.

ಜಿ23 ನಾಯಕರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಆಗ್ರಹಿಸಿ ಕಳೆದ ವಾರವಷ್ಟೇ ಪರೋಕ್ಷ ಗಡುವು ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರು, ಪಕ್ಷದ ಪುನರ್ ರಚನೆಯ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ ಮತ್ತು ಅಂತಹ ಪ್ರಯತ್ನದ ಮೊದಲ ಹೆಜ್ಜೆಗಾಗಿ ಜಿ 23 ನಾಯಕರನ್ನು ಸಂಪೂರ್ಣ ಹೊರಗಿಟ್ಟು, ನೇರವಾಗಿ ಸಿದ್ದರಾಮಯ್ಯ ಅವರನ್ನು ಕರೆದು ಸಮಾಲೋಚನೆ ನಡೆಸಿದ್ದಾರೆ ಮತ್ತು ಸಿದ್ದರಾಮಯ್ಯ ಮೂಲಕ ವಿವಿಧ ರಾಜ್ಯಗಳ ಪಕ್ಷನಿಷ್ಠ ಪ್ರಭಾವಿ ನಾಯಕರನ್ನು ವಿಶ್ವಾಸಕ್ಕೆ ಪಡೆದು, ಭಿನ್ನಮತೀಯರಿಗೆ ಸೊಪ್ಪು ಹಾಕದೆ ಪಕ್ಷ ಸಂಘಟಿಸುವ ಸೂಚನೆಯನ್ನು ಈ ಮೂಲಕ ರವಾನಿಸಲಾಗಿದೆ ಎಂಬುದು ಈ ಭೇಟಿಯ ಬಹಳ ದೊಡ್ಡ ಸಂದೇಶ.
ಒಂದು ಕಡೆ, ತನ್ನ ವಿರುದ್ಧವೇ ಬಂಡಾಯವೆದ್ದಿರುವ ಜಿ 23 ನಾಯಕರಿಗೆ ಕಾಂಗ್ರೆಸ್ಸಿನ ಶಕ್ತಿ ಕೇಂದ್ರ ಗಾಂಧಿ ಕುಟುಂಬ, ಪಕ್ಷ ಪುನರ್ ರಚನೆಯ ಈ ಸಮಾಲೋಚನೆಯ ಮೂಲಕ ತಿರುಗೇಟು ನೀಡಿದೆ. ಅವರು ಪಟ್ಟು ಹಿಡಿದಿರುವ ಪಕ್ಷದ ಅಧ್ಯಕ್ಷ ಸ್ಥಾನ ಸೇರಿದಂತೆ ಎಐಸಿಸಿ ಮ ಟ್ಟದಲ್ಲಿ ಪುನರ್ ರಚನೆಯನ್ನು ಕೂಡಲೇ ಮಾಡುವುದಾಗಿಯೂ ಮತ್ತು ಆ ನಿಟ್ಟಿನಲ್ಲಿ ಪಂಜಾಬ್ ಮತ್ತಿತರ ರಾಜ್ಯ ಘಟಕಗಳ ಬಿಕ್ಕಟ್ಟಿನ ಹೊರತಾಗಿಯೂ ಕಾರ್ಯತತ್ಪರವಾಗಿರುವುದಾಗಿಯೂ ಸಂದೇಶ ನೀಡಿದೆ. ಆದರೆ, ಅದೇ ಹೊತ್ತಿಗೆ, ಎಐಸಿಸಿ ಪುನರ್ ರಚನೆಗೆ ಬೇಡಿಕೆ ಇಟ್ಟಿರುವ ಮತ್ತು ಪಕ್ಷಕ್ಕೆ ಮುಜುಗರ ತರುವ ನಿಟ್ಟಿನಲ್ಲಿ ನಡೆದುಕೊಂಡಿರುವ ಜಿ 23 ನಾಯಕರನ್ನು ಹೊರಗಿಟ್ಟೇ ಆ ಪ್ರಯತ್ನಗಳು ನಡೆಯಲಿವೆ ಎಂಬ ಸೂಚನೆಯನ್ನೂ ಈ ಭೇಟಿ ರವಾನಿಸಿದೆ! ಅದರಲ್ಲೂ ಗುಲಾಂ ನಭಿ ಆಜಾದ್ ಅವರಂಥ ಪ್ರಧಾನಿ ಮೋದಿಯವರ ಅಭಿಮಾನಿಗಳ ಪಾಲಿಗಂತೂ ಈ ಸಂದೇಶ ಮರ್ಮಾಘಾತ ನೀಡಲಿದೆ ಎಂಬುದರಲ್ಲಿ ಅನುಮಾನವಿಲ್ಲ!
ಮೂಲಗಳ ಪ್ರಕಾರ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮತ್ತು ಅವರ ಆಪ್ತ ವಲಯ ಪಕ್ಷದ ನಾಯಕತ್ವ ಮತ್ತು ಎಐಸಿಸಿ ಪುನರ್ ರಚನೆ ವಿಷಯದಲ್ಲಿ ಈಗಾಗಲೇ ತೀರ್ಮಾನ ಕೈಗೊಂಡಿದ್ದಾರೆ. ಆದರೆ, ಆ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪ್ರಭಾವಿ ನಾಯಕರು, ಅದರಲ್ಲು ಎರಡನೇ ತಲೆಮಾರಿನ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸೂಕ್ತ ನೇಮಕ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಪಕ್ಷ ಸಂಘಟನೆಗೆ ಹೊಸ ಬಲ ಮತ್ತು ಹೊಸ ಮುಖಗಳನ್ನು ನೀಡುವುದು. ಮುಖ್ಯವಾಗಿ ವರ್ಚಸ್ವಿ ನಾಯಕರನ್ನು ಮುಂಚೂಣಿಗೆ ತರುವ ಮೂಲಕ ಯುವ ಜನತೆಯನ್ನು ಪಕ್ಷಕ್ಕೆ ಸೆಳೆಯಲು ಯೋಚಿಸಲಾಗಿದೆ. ಹಾಗಾಗಿಯೇ ಸಿದ್ದರಾಮಯ್ಯ ಜೊತೆಗಿನ ಸಮಾಲೋಚನೆಯ ಮೂಲಕ ಆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಪಕ್ಷದ ಹೈಕಮಾಂಡ್ ನ ಈ ಲೆಕ್ಕಾಚಾರದ ನಡೆ ಎಐಸಿಸಿ ಮಟ್ಟದಲ್ಲಿ ಮತ್ತು ಸ್ವತಃ ಹೈಕಮಾಂಡ್ ಮಟ್ಟದಲ್ಲಿ ಯಾವ ರೀತಿಯ ಅನುಕೂಲ ತಂದುಕೊಡಲಿದೆ ಮತ್ತು ಹೈಕಮಾಂಡ್ ವಿರುದ್ಧ ತಿರುಗಿಬಿದ್ದಿರುವ ಜಿ23 ಕೂಟಕ್ಕೆ ಯಾವ ನಷ್ಟ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ, ಸದ್ಯಕ್ಕಂತೂ ಸಿದ್ದರಾಮಯ್ಯ ಪಾಲಿಗೆ ಈ ಸಮಾಲೋಚನೆ ಪಕ್ಷದ ಆಂತರಿಕ ಮಟ್ಟದಲ್ಲಿ ಅವರಿಗೆ ಸಾಕಷ್ಟು ಅನುಕೂಲಕಾರಿಯಾಗಲಿದೆ. ಅದರಲ್ಲೂ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಪ್ರದೇಶ ಕಾಂಗ್ರೆಸ್ ಒಳಗೇ ಭಾರೀ ಪೈಪೋಟಿ, ಲಾಭಿಗಳು ಈಗಲೇ ಗರಿಗೆದರಿರುವ ನಡುವೆ, ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಸದ್ಯ ಹೊಂದಿರುವ ಪ್ರಭಾವ ಅವರ ಪ್ರತಿಸ್ಪರ್ಧಿಗಳ ಪಾಳೆಯದಲ್ಲಿ ಸಾಕಷ್ಟು ಪರಿಣಾಮ ಬೀರಲಿದೆ.
ಒಂದು ವೇಳೆ ಅವರ ಸಲಹೆಯಂತೆ ಡಾ ಎಂ ಬಿ ಪಾಟೀಲರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಏರಿದರಂತೂ, ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಇನ್ನಷ್ಟು ಪ್ರಭಾವಿಯಾಗಲಿದ್ದಾರೆ ಮತ್ತು ಅಂತಹ ಅವರ ಪ್ರಭಾವ ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಹಲವು ಬದಲಾವಣೆಗಳಿಗೂ ಕಾರಣವಾಗಬಹುದು. ಅದರಲ್ಲೂ ಜಿ 23 ಕೂಟದ ನಾಯಕರು ಈಗಾಗಲೇ ಆರಂಭಿಸಿರುವ ಪರ್ಯಾಯ ವೇದಿಕೆಯ ಯತ್ನಗಳು ಬಿರುಸುಗೊಂಡು(ಗುಲಾಂ ನಭಿ ಆಜಾದ್ ಮತ್ತು ತಮಿಳುನಾಡು ಸಿಎಂ ಸ್ಟಾಲಿನ್ ಭೇಟಿ) ಕಾಂಗ್ರೆಸ್ ನಿಂದ ಆ ನಾಯಕರು ಹೊರಬಿದ್ದರೆ, ಆಗ ಕಾಂಗ್ರೆಸ್ ಪಾಲಿಗೆ 1969ರ ಇತಿಹಾಸ ಮರುಕಳಿಸಬಹುದು. ಅಂತಹ ಸಂದರ್ಭದಲ್ಲಿ ಅಂದು ಇಂದಿರಾಗಾಂಧಿಯವರ ಪರ ನಿಂತು ಪಕ್ಷವನ್ನು ಕಟ್ಟುವಲ್ಲಿ ರಾಷ್ಟ್ರಮಟ್ಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ದೇವರಾಜ್ ಅರಸ್ ಪಾತ್ರವನ್ನು ಈಗ ವಹಿಸುವ ಚಾರಿತ್ರಿಕ ಸಂದರ್ಭ ಕೂಡ ಸಿದ್ದರಾಮಯ್ಯ ಪಾಲಿಗೆ ಬರಲೂಬಹುದು!
ಹಾಗಾಗಿ, ಸಿದ್ದರಾಮಯ್ಯ ಮತ್ತು ಸೋನಿಯಾ ಗಾಂಧಿ ನಡುವಿನ ಮೊನ್ನೆಯ ಮಾತುಕತೆ ಹಲವು ಸ್ತರದಲ್ಲಿ ಮಹತ್ವ ಪಡೆದುಕೊಂಡಿದೆ ಮತ್ತು ಭವಿಷ್ಯದಲ್ಲಿ ಬಹಳಷ್ಟು ರಾಜಕೀಯ ಹಲವು ಸಮೀಕರಣಗಳನ್ನು ಬದಲಾಯಿಸಲಿದೆ ಎನ್ನಲಾಗುತ್ತಿದೆ.