ರಾಜ್ಯದಲ್ಲಿನ ಹಿಂಸಾಚಾರದಲ್ಲಿ ಸಂತ್ರಸ್ತ ಜನರಿಗೆ ಸಾಂತ್ವನ ಹೇಳಲು ಎರಡು ದಿನಗಳ ಮಣಿಪುರ ಭೇಟಿ ಕೈಗೊಂಡಿರುವ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟದ 16 ವಿವಿಧ ಪಕ್ಷಗಳ 20 ಸದಸ್ಯರು ಶನಿವಾರ (29) ಮಧ್ಯಾಹ್ನ ಇಂಫಾಲ ತಲುಪಿದ್ದಾರೆ.
ಕಾಂಗ್ರೆಸ್ ಸಂಸದ ಗೌರವ ಗೊಗೊಯಿ ನೇತೃತ್ವದಲ್ಲಿ ಇಂಡಿಯಾ ನಿಯೋಗ ಮಣಿಪುರಕ್ಕೆ ಆಗಮಿಸಿದ್ದು ಇಲ್ಲಿನ ಜನರ ಸಂತ್ರಸ್ತ ಜನರ ಬೇಡಿಕೆಗಳು ಮತ್ತು ಕುಂದು ಕೊರತೆಗಳನ್ನು ಆಲಿಸುವುದು ಇದರ ಪ್ರಮುಖ ಉದ್ದೇಶ ಎನ್ನಲಾಗಿದೆ.
‘ಇಂಡಿಯಾ’ ಮೈತ್ರಿಕೂಟದ ಸಂಸದರು, ಪ್ರತಿನಿಧಿಗಳ ನಿಯೋಗವು ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಲಿದ್ದು, ಕುಕಿ ಸಮುದಾಯದ ಸಂತ್ರಸ್ತರೊಂದಿಗೆ ಚರ್ಚೆ ನಡೆಸಲಿದೆ. ಜುಲೈ 30ರವರೆಗೆ ಪರಿಸ್ಥಿತಿಯ ಪರಾಮರ್ಶೆ ನಡೆಸಲಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ, ಗೌರವ್ ಗೊಗೊಯಿ, ಟಿಎಂಸಿಯ ಸುಶ್ಮಿತಾ ದೇವ್, ಜೆಎಂಎಂನ ಮಹುವಾ ಮಜ್ಜಿ, ಡಿಎಂಕೆಯ ಕನಿಮೋಳಿ, ಎನ್ಸಿಪಿಯ ವಂದನಾ ಚೌಹಾಣ್, ಆರ್ಎಲ್ಡಿಯ ಜಯಂತ್ ಚೌದರಿ, ಆರ್ಜೆಡಿಯ ಮನೋಜ್ ಕುಮಾರ್, ಆರ್ಎಸ್ಪಿಯ ಎನ್. ಕೆ ಪ್ರೇಮಚಂದ್ರನ್ ಮತ್ತು ವಿಸಿಕೆಯ ತಿರುಮಾವಳನ್ ನಿಯೋಗದಲ್ಲಿ ಇದ್ದಾರೆ.
“ನಾವು ಸಂತ್ರಸ್ತ ಜನರ ಬೇಡಿಕೆಗಳನ್ನು ಆಲಿಸಿ ಸರ್ಕಾರದ ಮುಂದೆ ಅವನ್ನು ಪ್ರತಿನಿಧಿಸುತ್ತೇವೆ. ಮಣಿಪುರ ಜನರ ಪರವಾಗಿ ನಾವು ಒಗ್ಗಟ್ಟು ಪ್ರತಿನಿಧಿಸುತ್ತಿದ್ದೇವೆ” ಎಂದು ಗೌರವ್ ಗೊಗೊಯಿ ಹೇಳಿದರು.
ಇಂಡಿಯಾ ನಿಯೋಗದ ಮತ್ತೊಬ್ಬ ಪ್ರಮುಖ ವ್ಯಕ್ತಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ. “ನಾವು ಮಣಿಪುರ ಜನರ ಪರವಾಗಿ ಅನೇಕ ಬೇಡಿಕೆಗಳನ್ನು ಸಲ್ಲಿಸಿದ್ದೇವೆ. ಹಿಂಸಾಚಾರದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ವಾಸ್ತವಾಂಶ ಅರಿಯಲು ಸಂಪೂರ್ಣ ಸಮೀಕ್ಷೆ ನಡೆಸಿ ಆಳವಾದ ಚರ್ಚೆ ನಡೆಸಬೇಕಿದೆ” ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೆಹಲಿ | ಮದುವೆಗೆ ನಿರಾಕರಣೆ ; ರಾಡ್ನಿಂದ ಹಲ್ಲೆ ನಡೆಸಿ ವಿದ್ಯಾರ್ಥಿನಿ ಭೀಕರ ಹತ್ಯೆ
ಇಂಡಿಯಾ ಸದಸ್ಯರು ಭದ್ರತೆಯ ದೃಷ್ಟಿಯಿಂದ ಇಂಫಾಲದಿಂದ ಹೆಲಿಕಾಪ್ಟರ್ನಲ್ಲಿ ಚುರಾಚಂದ್ಪುರಕ್ಕೆ ತೆರಳಲಿದ್ದಾರೆ. ಒಂದೇ ಹೆಲಿಕಾಪ್ಟರ್ ಲಭ್ಯವಿರುವುದರಿಂದ ಸದಸ್ಯರು ಎರಡು ಗುಂಪುಗಳಾಗಿ ವಿಭಾಗವಾಗಿದ್ದಾರೆ. ಹೆಲಿಕಾಪ್ಟರ್ ಎರಡು ಬಾರಿ ಸಂಚಾರ ನಡೆಸಲಿದೆ.
ಮೇ 4ರಂದು ಕಾಂಗ್ಪೊಕ್ವಿ ಜಿಲ್ಲೆಯಲ್ಲಿ ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಕಿರುಕುಳ ನೀಡಿದ ವಿಡಿಯೊ ಜುಲೈ 19ರಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಮಣಿಪುರದ ಕುಕಿ ಮತ್ತು ಮೇಟಿ ಸಮುದಾಯಗಳ ನಡುವೆ ಮೇ ನಿಂದ ಹಿಂಸಾಚಾರ ನಡೆಯುತ್ತಿದೆ. ಇದರಿಂದ ಅನೇಕ ಮಂದಿ ಮೃತಪಟ್ಟಿದ್ದಾರೆ.