ರಷ್ಯಾದ ಭದ್ರತಾ ಪಡೆಗಳು ಆಕ್ರಮಿಸಿಕೊಂಡಿರುವ ಉಕ್ರೇನ್ನ ಪ್ರದೇಶಗಳಲ್ಲಿನ ಆಪಾದಿತ ಯುದ್ಧಾಪರಾಧಗಳ ತನಿಖೆಗಾಗಿ ತನಿಖಾ ಆಯೋಗ ನೇಮಿಸುವ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಅನುಮೋದಿಸಿದ ನಿರ್ಣಯಕ್ಕೆ ಭಾರತ ಗುರುವಾರ ಗೈರುಹಾಜರಾಗಿದೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣಕ್ಕೆ ಸಂಬಂಧಿಸಿದ ಕರಡು ನಿರ್ಣಯದಿಂದ ಭಾರತ ದೂರವಿರುವುದು ಇದು ಸತತ ಹನ್ನೊಂದನೇ ಬಾರಿ. UNHRC ನಿರ್ಣಯವು ಪರವಾಗಿ 33 ಮತಗಳು ಚಲಾವಣೆಯಾದರೆ, 12 ರಾಷ್ಟ್ರಗಳು ಗೈರುಹಾಜರಾಗಿತ್ತು. ಚೀನಾ ಮತ್ತು ಎರಿಟ್ರಿಯಾ ದೇಶಗಳು ಮಾತ್ರ ನಕಾರಾತ್ಮಕ ಮತ ಚಲಾಯಿಸಿವೆ.
ಏಪ್ರಿಲ್ನಲ್ಲಿ, ಯುಎನ್ ಜನರಲ್ ಅಸೆಂಬ್ಲಿಯು ಯುಎನ್ಎಚ್ಆರ್ಸಿಯಿಂದ ರಷ್ಯಾವನ್ನು ಅಮಾನತುಗೊಳಿಸಿತ್ತು. ಆದರೆ ಯುಎನ್ಎಚ್ಆರ್ಸಿಯ ನಿಯಮಗಳಂತೆ ರಷ್ಯಾವು ‘ಸಂಬಂಧಿತ ಪಕ್ಷ’ವಾಗಿ ಕಲಾಪದಲ್ಲಿ ಭಾಗವಹಿಸಬಹುದಿತ್ತು. ಆದರೆ ಈ ವಿಶೇಷ ಅಧಿವೇಶನಕ್ಕೆ ರಷ್ಯಾ ಹಾಜರಾಗಲಿಲ್ಲ. ಬದಲಾಗಿ, ಯುಎನ್ನ ರಷ್ಯಾದ ಖಾಯಂ ಪ್ರತಿನಿಧಿಯಾದ ಗೆನ್ನಡಿ ಗ್ಯಾಟಿಲೋವ್ ಅವರು ಇದೊಂದು ‘ಸ್ಟಂಟ್’ ಆಗಿದ್ದು “‘ರಷ್ಯಾವನ್ನು ಖಳನಾಯಕನಾಗಿಸುವ ರಾಜಕೀಯ ಸೋಲಿನಲ್ಲಿ’ ಭಾಗವಹಿಸುವುದಿಲ್ಲ” ಎಂದು ಹೇಳಿದ್ದಾರೆ.
ಮತದಾನದಿಂದ ಗೈರು ಹಾಜರಾಗಿರುವ ಬಗ್ಗೆ ಯಾವುದೇ ವಿವರಣೆ ನೀಡದ ಭಾರತದ ಹಿರಿಯ ರಾಜತಾಂತ್ರಿಕ ಇಂದ್ರಮಣಿ ಪಾಂಡೆ ಚರ್ಚೆಯ ಸಮಯದಲ್ಲಿ ಮಾತ್ರ ಪರಿಸ್ಥಿತಿಯು ‘ಮತ್ತಷ್ಟು ಹದಗೆಟ್ಟಿದೆ’ ಎಂದು ಹೇಳಿದ್ದು “ಉಕ್ರೇನ್ನಿಂದ ಹೊರಬರುವ ವರದಿಗಳಿಂದ, ಮಹಿಳೆಯರು ಮತ್ತು ಮಕ್ಕಳು ಪ್ರಭಾವಿತರಾಗಿರುವುದು ಮತ್ತು ಸ್ಥಳಾಂತರಗೊಂಡವರಲ್ಲಿ ಹೆಚ್ಚಿನವರು ಅವರೇ ಎಂಬುವುದು ಸ್ಪಷ್ಟವಾಗುತ್ತದೆ” ಎಂದಿದ್ದಾರೆ. “ತೀವ್ರ ಹೋರಾಟಕ್ಕೆ ಸಾಕ್ಷಿಯಾದ ಪ್ರದೇಶಗಳಿಂದ ಮುಗ್ಧ ನಾಗರಿಕರನ್ನು ಸ್ಥಳಾಂತರಿಸುವುದು ತಕ್ಷಣದ ಆದ್ಯತೆಯಾಗಬೇಕು ಎಂದು ಭಾರತ ನಂಬುತ್ತದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಹೇಳಿಕೆಯು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕು, ಮಾತುಕತೆಗೆ ಒತ್ತು ನೀಡಬೇಕು, ಜಾಗತಿಕ ಆರ್ಥಿಕ ಕುಸಿತದ ಬಗ್ಗೆ ಕಾಳಜಿ ವಹಿಸಬೇಕು, ಬುಚಾದಲ್ಲಿ ನಾಗರಿಕರನ್ನು ಕೊಲ್ಲುವುದನ್ನು ಖಂಡಿಸುವುದು ಮತ್ತು ಸ್ವತಂತ್ರ ತನಿಖೆಗೆ ಬೆಂಬಲ ನೀಡುವ ಭಾರತದ ನಿಲುವನ್ನು ಪುನರುಚ್ಛರಿಸಿದೆ.
“ನಾವು ಅಂತರಾಷ್ಟ್ರೀಯ ಕಾನೂನು, ಯುಎನ್ ಚಾರ್ಟರ್ ಹಾಗೂ ಪ್ರಾದೇಶಿಕ ಸಮಗ್ರತೆ ಮತ್ತು ಎಲ್ಲಾ ರಾಜ್ಯಗಳ ಸಾರ್ವಭೌಮತ್ವದ ಗೌರವದ ಮೇಲೆ ಆಧಾರವಾಗಿದೆ ಎಂದು ಒತ್ತಿಹೇಳುವುದನ್ನು ಮುಂದುವರಿಸುತ್ತೇವೆ. ಉಕ್ರೇನ್ನಲ್ಲಿರುವ ಜನರ ಮಾನವ ಹಕ್ಕುಗಳ ಗೌರವ ಮತ್ತು ರಕ್ಷಣೆಗಾಗಿ ನಾವು ಕರೆ ನೀಡುತ್ತೇವೆ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ, ”ಎಂದು ಪಾಂಡೆ ಹೇಳಿದ್ದಾರೆ. ಆದರೆ ಭಾರತವು ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ನೇರವಾಗಿ ಖಂಡಿಸಲಿಲ್ಲ.
“ಪರಿಸ್ಥಿತಿಯ ವ್ಯತಿರಿಕ್ತ ಪರಿಣಾಮವು ಯುದ್ಧ ಪ್ರದೇಶವನ್ನು ಮೀರಿ ಬೆಳೆಯುತ್ತಿದೆ. ತೈಲ ಬೆಲೆ ಗಗನಕ್ಕೇರುತ್ತಿದೆ. ಜಗತ್ತಿನಲ್ಲಿ ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳ ಕೊರತೆಯೂ ಇದೆ. ಈ ಅಸ್ಥಿರತೆಯು ಪ್ರಪಂಚದಾದ್ಯಂತ ಇರುವ ಜನರಿಗೆ ಹೊರೆಯಾಗಿದೆ, ವಿಶೇಷವಾಗಿ ಅಭಿವೃದ್ಧಿಶೀಲ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ”ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ರಷ್ಯಾದ ಕ್ರಮವನ್ನು ಖಂಡಿಸಿರುವ ಮಾನವ ಹಕ್ಕುಗಳ ಯುಎನ್ ಹೈಕಮಿಷನರ್ ಮೈಕೆಲ್ ಬ್ಯಾಚೆಲೆಟ್ ಕೇವಲ ಕೈವ್ ಪ್ರದೇಶ ಒಂದರಲ್ಲೇ 1,000 ನಾಗರಿಕ ದೇಹಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ನಾಗರಿಕರ ಹತ್ಯೆಯು ಉದ್ದೇಶಪೂರ್ವಕವಾಗಿ ಕಂಡುಬಂದಿದೆ ಎಂದ ಅವರು ” ಈ ಹತ್ಯೆಗಳನ್ನು ಸ್ನೈಪರ್ಗಳು ಮತ್ತು ಸೈನಿಕರಿಂದ ನಡೆಸಲಾಗಿದೆ. ಆಹಾರ ಮತ್ತು ನೀರನ್ನು ಹುಡುಕಲು ರಸ್ತೆ ದಾಟುವಾಗ ಅಥವಾ ತಮ್ಮ ಮನೆಗಳನ್ನು ತೊರೆದಾಗ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ತಮ್ಮ ವಾಹನಗಳಲ್ಲಿ ಓಡಿಹೋದ ಕಾರಣಕ್ಕೂ ಕೆಲವರು ಕೊಲ್ಲಲ್ಪಟ್ಟಿದ್ದಾರೆ” ಎಂದಿದ್ದಾರೆ.
ಕೈವ್ ಪ್ರದೇಶದ ಕಟಿಯುಝಾಂಕಾ ಗ್ರಾಮದಲ್ಲಿ ದಂಪತಿ, ಮಗಳು ಮತ್ತು ಅಜ್ಜ ಇರುವ ನಾಲ್ವರ ಕುಟುಂಬವು ತಮ್ಮ ಮನೆಗೆ ಓಡಲು ಪ್ರಯತ್ನಿಸುತ್ತಿರುವಾಗ ರಷ್ಯಾದ ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಬ್ಯಾಚೆಲೆಟ್ ಹೇಳಿದ್ದಾರೆ. ಈ ಘಟನೆಯಲ್ಲಿ ಪೋಷಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಮಗುವಿಗೆ ಎರಡು ಗುಂಡೇಟುಗಳು ಬಿದ್ದಿವೆ.
ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಉಪ ಮಂತ್ರಿ ಎಮಿನ್ ಡಿಜೆಪ್ಪಾರ್ ಅವರು ಕಪ್ಪು ಸ್ಕ್ವಿಗಲ್ಗಳಿರುವ ಕಾಗದದ ತುಂಡನ್ನು ತೋರಿಸಿ, ಇದು ರಷ್ಯಾದ ಸೈನಿಕರಿಂದ ಲೈಂಗಿಕವಾಗಿ ಹಲ್ಲೆಗೊಳಗಾದ ಹುಡುಗ ಬಿಡಿಸಿದ ರೇಖಾ ಚಿತ್ರ ಎಂದಿದ್ದಾರೆ. “ಈ ರೇಖಾಚಿತ್ರವನ್ನು ತನ್ನ ತಾಯಿಯ ಮುಂದೆಯೇ ಅತ್ಯಾಚಾರಕ್ಕೊಳಗಾದ 11 ವರ್ಷದ ಬಾಲಕ ಬಿಡಿಸಿದ್ದಾನೆ. ಅತ್ಯಾಚಾರಕ್ಕೊಳಗಾದ ನಂತರ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡ ಹುಡುಗ ಈಗ ಪ್ರಪಂಚದೊಂದಿಗೆ ಸಂವಹನ ನಡೆಸುವ ಏಕೈಕ ಮಾರ್ಗವೆಂದರೆ ಕಪ್ಪು ರೇಖೆ. ಮತ್ತು ಈ ಚಿತ್ರವು ಅವನಿಗೆ ಚಿಕಿತ್ಸೆ ನೀಡುವ ಮನಶಾಸ್ತ್ರಜ್ಞರಿಗೆ ಆತ ರಚಿಸಿ ಕೊಟ್ಟ ಮೊದಲ ಚಿತ್ರವಾಗಿದೆ” ಎಂದಿದ್ದಾರೆ.
UNHRC ಗುರುವಾರ ತನ್ನ 34 ನೇ ವಿಶೇಷ ಅಧಿವೇಶನದಲ್ಲಿ “ಕೈವ್, ಚೆರ್ನಿಹಿವ್, ಖಾರ್ಕಿವ್ ಮತ್ತು ಸುಮಿ ಪ್ರದೇಶಗಳಲ್ಲಿ ಫೆಬ್ರವರಿ ಅಂತ್ಯದಲ್ಲಿ ಮತ್ತು ಮಾರ್ಚ್ 2022 ರಲ್ಲಿ ನಡೆದ ಘಟನೆಗಳ ಬಗ್ಗೆ ತನಿಖೆ ನಡೆಸಲು ತನಿಖಾ ಆಯೋಗ ರಚಿಸಬೇಕು” ಎಂಬ ನಿರ್ಣಯ ಅಂಗೀಕರಿಸಿದೆ. ಜೊತೆಗೆ ಉಕ್ರೇನಿಯನ್ ಪ್ರಜೆಗಳಿಗೆ ನೆರವು ನೀಡಲು ಹೋಗಿರುವ ಮಾನವೀಯ ಏಜೆನ್ಸಿಗಳಿಗೆ ಪ್ರವೇಶ ನೀಡುವಂತೆ ರಷ್ಯಾವನ್ನು ಒತ್ತಾಯಿಸಿದೆ.