ಕಳೆದ ತಿಂಗಳು ಜಾಗತಿಕ ಮಟ್ಟದಲ್ಲಿ ಬಹಳಷ್ಟು ಸದ್ದು ಮಾಡಿದ್ದು ಬಿಬಿಸಿ ಬಿಡುಗಡೆಗೊಳಿಸಿದ್ದ ಗುಜರಾತ್ ಗಲಭೆ ಮತ್ತು ಅದರಲ್ಲಿ ಪ್ರಧಾನಿ ಮೋದಿಯವರ ಪಾತ್ರದ ವಿವರಣೆ. ಸಾಕ್ಷ್ಯಚಿತ್ರವನ್ನು ಸಕಾರಾತ್ಮಕವಾಗಿ ಸ್ವೀಕರಿಸದ ಮೋದಿಯವರು ಅದರ ಪ್ರದರ್ಶನವನ್ನು ಭಾರತದಲ್ಲಿ ನಿಶೇಧಗೊಳಿಸಿದ್ದು ಮತ್ತು ಆನಂತರ ಬಿಬಿಸಿ ವಾಹಿನಿಯ ಭಾರತದ ಕಚೇರಿಯ ಮೇಲೆ ಐಟಿ ದಾಳಿ ಮಾಡಿಸಿದ್ದು ಜಾಗತಿಕ ಮಟ್ಟದಲ್ಲಿ ದೇಶದ ಮಾನ ಹರಾಜು ಹಾಕಿದ್ದು ಸುಳ್ಳಲ್ಲ. ಅಂದಿನ ಬಿಬಿಸಿˌ ದಿಲ್ಲಿಯ ಡೆಪುಟಿ ಚೀಫ್ ಬ್ಯೂರೊ ಆಗಿದ್ದ ಸತೀಶ್ ಜೇಕಬ್ ಅವರು ಐಟಿ ಇಲಾಖೆಯ ದಾಳಿಯಿಂದ ಆಶ್ಚರ್ಯಗೊಂಡಿರಲಿಲ್ಲ ಎನ್ನುತ್ತಾರೆ ಲೇಖಕ ಸಿದ್ಧಾರ್ಥ್ ಭಾಟಿಯಾ ಅವರು ತಮ್ಮ “ದಿ ವೈರ್” ಜರ್ನಲ್ ನ ಮಾರ್ಚ್ ೦೧, ೨೦೨೩ ರ ಅಂಕಣದಲ್ಲಿ.
ಸತೀಶ್ ಜೇಕಬ್ ಭಾರತದ ಬಿಬಿಸಿ ಕಛೇರಿಯಲ್ಲಿ ೨೩ ವರ್ಷಗಳ ಸುದೀರ್ಘ ಅವಧಿ ಕೆಲಸ ಮಾಡಿದವರು. ಇನ್ನೂ ಭಾರತದಲ್ಲಿ ದೃಶ್ಯ ಮಾಧ್ಯಮಗಳು ಅಷ್ಟೊಂದು ಪ್ರಮಾಣದಲ್ಲಿ ಸ್ಥಾಪಿತವಾಗದ ಕಾಲಘಟ್ಟದಲ್ಲಿ ಬಿಬಿಸಿ ಭಾರತದಲ್ಲಿನ ಏಕೈಕ ಸುದ್ದಿಯ ಮೂಲವೆಂದು ಪರಿಗಣಿಸಲ್ಪಟ್ಟಿತು. ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳ ಮೇಲೆ ದಾಳಿ ಮಾಡಿಯೂ ಅದು ದಾಳಿಯಾಗಿರದೆ ಅದೊಂದು ಕೇವಲ ‘ಸಮೀಕ್ಷೆ’ ಎಂದಿತ್ತು. ಇದರಿಂದ ಜೇಕಬ್ ಅವರು ಅಚ್ಚರಿಗೊಂಡಿದ್ದರೂ ಆ ದಾಳಿಯು ಅಷ್ಟೊಂದು ಆಶ್ಚರ್ಯದಾಯಕವಾಗಿರಲಿಲ್ಲ ಎಂದು ಹೇಳಿದ್ದರೆನ್ನುವ ಕುರಿತು ಭಾಟಿಯಾ ಪ್ರಸ್ತಾಪಿಸಿದ್ದಾರೆ.
ಸಮೀಕ್ಷೆ ಅಥವಾ ಪರಿಶೀಲನೆಯ ಹೆಸರಿನಲ್ಲಿ ನಡೆದ ಈ ದಾಳಿಯ ಕುರಿತು ಜೇಕಬ್ ಅವರು: “ಆದರೆ ನನಗೆ ಒಂದು ವಿಷಯ ಮೊದಲೆ ತಿಳಿದಿತ್ತು. ಐಟಿಯವರು ನಮ್ಮ ಸಂಸ್ಥೆಯ ವ್ಯವಹಾರ ಮತ್ತು ಬ್ಯಾಂಕ್ ಖಾತೆಗಳಲ್ಲಿ ಯಾವುದೇ ಬಗೆಯ ಹ್ಯಾಂಕಿ-ಪಂಕಿಯನ್ನು ಹುಡುಕಲು ಸಾಧ್ಯವಾಗುವುದಿಲ್ಲ, ಏಕೆಂದರೆ ಬಿಬಿಸಿ ವಾಣಿಜ್ಯ ಸಂಸ್ಥೆ ಅಲ್ಲ. ಅದರ ಹಣವು ಬ್ರಿಟಿಷ್ ಸರ್ಕಾರದಿಂದ ಬರುತ್ತದೆ,” ಎಂದು ಈ ಪಾಡ್ಕ್ಯಾಸ್ಟ್ ಚರ್ಚೆಯಲ್ಲಿ ಸಿದ್ಧಾರ್ಥ್ ಭಾಟಿಯಾಗೆ ಹೇಳಿದ್ದಾರಂತೆ. ಹೀಗಾಗಿ ಬಿಬಿಸಿಯಂತ ನಿಸ್ಪಕ್ಷಪಾತ ವಾರ್ತಾ ವಾಹಿನಿಗಳು ಭಾರತೀಯ ಕೊಳಕು ವಾರ್ತಾ ವಾಹಿನಿಗಳಂತಲ್ಲ ಮತ್ತು ನಮ್ಮವು ಎಂದಿಗೂ ವಿಶ್ವಾಸಾರ್ಹ ವಾಹಿನಿಗಳಲ್ಲ ಎನ್ನುವುದು ಅನೇಕ ವೇಳೆ ಸಾಬೀತಾಗಿದೆ.

೨೦೦೨ ರ ಗುಜರಾತ್ ಹಿಂಸಾಚಾರ ಮತ್ತು ನರೇಂದ್ರ ಮೋದಿ ಪ್ರಧಾನಿಯಾದ ನಂತರ ನಡೆದ ಅಲ್ಪಸಂಖ್ಯಾತರ ವಿರೋಧಿ ಹಿಂಸಾಚಾರದ ಕುರಿತು ಬಿಬಿಸಿ ಮಾಡಿದ ಎರಡು ಸಾಕ್ಷ್ಯಚಿತ್ರಗಳಿಗೆ ಈ ಸಮೀಕ್ಷೆಗಳು ಪ್ರತಿಕ್ರಿಯೆಯಾಗಿವೆ ಎಂದು ಜೇಕಬ್ ಮನಗಂಡಿದ್ದಾರೆ ಎನ್ನುತ್ತಾರೆ ಭಾಟಿಯಾ ಅವರು. ತಮ್ಮ ಬಂಡವಾಳ ಬಯಲುಗೊಳಿಸುವ ಮತ್ತು ಸತ್ಯ ಸಂಗತಿಗಳನ್ನು ಬಿತ್ತರಿಸುವ ಮಾಧ್ಯಗಳ ವಿರುದ್ಧ ಮೋದಿ ಸರಕಾರ ಎಲ್ಲಾ ರೀತಿಯ ಕ್ರಮಗಳನ್ನು ಬಳಸುತ್ತಿದೆ ಎಂದು ಜೇಕಬ್ ಹೇಳುತ್ತಾರೆ, ಮತ್ತು ಪತ್ರಿಕಾ ಧರ್ಮ ಅರಿತಿರುವ ಪತ್ರಕರ್ತರು ಯಾವತ್ತೂ ಸರಕಾರವನ್ನು ಕಿರಿಕಿರಿಗೊಳಿಸಲಾರರು ಎಂದು ನಾನು ಭಾವಿಸುತ್ತೇನೆ. ಆದರೂ ಸತ್ಯದ ಪರವಿರುವ ಮಾಧ್ಯಮಗಳ ಸರಕಾರಕ್ಕೆ ಭಯವಿದೆ” ಎನ್ನುತ್ತಾರೆ ಜೇಕಬ್ ಅವರು.
ಜೇಕಬ್ ಅವರು ಬಿಬಿಸಿಯಲ್ಲಿ ತಾವು ಕಾರ್ಯ ಮಾಡಿದ ಅವಧಿಯುದ್ದಕ್ಕೂ, ಯಾವುದೇ ರಾಜಕೀಯ ಪಕ್ಷ ಅಥವಾ ಸರಕಾರವು ಅದರ ಕವರೇಜ್ ಕುರಿತು ಅಧಿಕೃತವಾಗಿ ಏನನ್ನೂ ಹೇಳಲಿಲ್ಲ ಎಂದು ದೃಢವಾಗಿ ಹೇಳಿರುವ ಬಗ್ಗೆ ಭಾಟಿಯಾ ಬೆಳಕು ಚೆಲ್ಲಿದ್ದಾರೆ. ಒಟ್ಟಾರೆ ಮೋದಿ ಸರಕಾರ ಭಾರತೀಯ ಮಾಧ್ಯಮಗಳನ್ನು ಸಗಟಾಗಿ ನಿಯಂತ್ರಿಸುತ್ತ ಇಲ್ಲಿನ ಸ್ಥಳಿಯ ನಿಷ್ಟುರ ಮಾಧ್ಯಮಗಳನ್ನು ನಿಷ್ಕಿೃಯಗೊಳಿಸಿದ್ದಾರೆ ಎನ್ನುವ ಅಪಾದನೆ ಎದುರಿಸುತ್ತಿದ್ದಾರೆ. ಅವರ ಬಿಬಿಸಿ ಮೇಲಿನ ದಾಳಿಯು ಆ ಅಪಾದನೆಯನ್ನು ಮತ್ತಷ್ಟು ಪುಷ್ಟಿಕರಿಸಿದೆ ಎಂದೆ ಹೇಳಬೇಕಾಗಿದೆ.