ಕಲಬುರಗಿ : ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಬೆಂಬಲಿಗನ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರವಿಂದ ಚವ್ಹಾಣ್ ನಿವಾಸದ ಮೇಲೆ ಶನಿವಾರ ಸಂಜೆ ಐಟಿ ದಾಳಿ ನಡೆದಿದೆ.

ಕೆಲವೇ ದಿನಗಳ ಹಿಂದಷ್ಟೇ ಅರವಿಂದ ಚವ್ಹಾಣ್ ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಶನಿವಾರ ಸಂಜೆ ಆರಂಭಗೊಂಡ ಐಟಿ ಅಧಿಕಾರಿಗಳ ತಲಾಶ್ ಮಧ್ಯರಾತ್ರಿ 11 ಗಂಟೆವರೆಗೂ ಮುಂದುವರಿದಿತ್ತು ಎನ್ನಲಾಗಿದೆ. ಅರವಿಂದ ಚವ್ಹಾಣರಿಗೆ ಸೇರಿದ್ದ ಮನೆ, ಹೋಟೆಲ್, ಸ್ಟೋನ್ ಕ್ರಶರ್ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಗೆ ಈ ಬಾರಿ ತಾವು ಸೋಲುತ್ತೇವೆ ಎಂಬುದು ಗೊತ್ತಾಗಿದೆ. ಹೀಗಾಗಿ ಬಿಜೆಪಿಯು ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷಗಳನ್ನು ಹೆದರಿಸುವ ಯತ್ನ ಮಾಡ್ತಿದೆ ಎಂದಿದ್ದಾರೆ.