ಆಡಳಿತದಲ್ಲಿ ಸುಧಾರಣೆ ತಂದು ನಾಗರೀಕರಿಗೆ ತಮ್ಮ ಹಕ್ಕುಗಾರಿಕೆ ಮೇಲೆ ನಿಯಂತ್ರಣ ಸಾಧಿಸಲು ಅವಶ್ಯಕ ಬದಲಾವಣೆಯನ್ನು ಮಾಡಿ ಸಶಕ್ತಗೊಳಿಸುವುದು ಸರ್ಕಾರದ ಆಡಳಿತ ಸುಧಾರಣೆಯ ಉದ್ದೇಶ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಸಾರ್ವಜನಿಕರಿಗೆ ಸ್ವಯಂ ಸೇವೆಯ (Self service) ಮುಖಾಂತರ ಸರ್ಕಾರದ ಸೇವಾ ಸೌಲಭ್ಯವನ್ನು ಪಡೆಯಲು ವ್ಯವಸ್ಥೆ ಸೃಷ್ಟಿಸುವುದು ಸರ್ಕಾರದ ಆದ್ಯತೆ.
ನಾಗರೀಕರು ಈ ಕೆಳಕಂಡ ಕಾರಣಗಳಿಗಾಗಿ ಭೂಮಾಪನ ಇಲಾಖೆಗೆ ಅವರ ಸ್ವಂತ ಜಮೀನಿನ ನಕ್ಷೆಗಾಗಿ ಅರ್ಜಿ ಸಲ್ಲಿಸುತ್ತಾರೆ.
1) 11ಇ ಸ್ಕೆಚ್
2) ತತ್ಕಾಲ್ ಪೋಡಿ
3) ವಿಭಾಗ- ಹಾಲಿ ಹೊಂದಿರುವ ಕೃಷಿ ಜಮೀನಿನಲ್ಲಿ ತಮ್ಮ ಶಾಸನಾತ್ಮಕ ಹಕ್ಕಿನಂತ ವೈಯಕ್ತಿಕ ಭಾಗಾಂಶವನ್ನು ತೋರಿಸುವ ಸಂಬಂಧ ಸ್ಕೆಚ್
4) ಭೂಪರಿವರ್ತನಾ ಪೂರ್ವ ಸ್ಕೆಚ್
ಪ್ರಸ್ತುತ ಜನರಿಗೆ ತಮ್ಮ ಸ್ವಂತ ಖಾಸಗಿ ಜಮೀನುಗಳಲ್ಲಿ ಮೇಲ್ಕಂಡ ಸ್ಕೆಚ್ ಗಳಿಗಾಗಿ ಸಲ್ಲಿಸುವ ಅರ್ಜಿಗಳನ್ನು ಸರ್ಕಾರಿ ಭೂಮಾಪಕರು ಅಥವಾ ಪರವಾನಗಿ ಭೂಮಾಪಕರುಗಳಿಂದ ಸಿದ್ಧಪಡಿಸಲಾಗುತ್ತದೆ.
ಸರ್ಕಾರಿ ಭೂಮಾಪಕರು ಮತ್ತು ಪರವಾನಗಿ ಭೂಮಾಪಕರ ಸಂಖ್ಯೆಯು ಸೀಮಿತವಾಗಿದ್ದು, ಪ್ರತಿ ತಿಂಗಳು ಒಂದು ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳು ನಾಗರೀಕರಿಂದ ಸ್ವೀಕೃತವಾಗುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ಆರು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಅಳತಗಾಗಿ ವಿವಿಧ ಹಂತಗಳಲ್ಲಿ ಬಾಕಿ ಇರುತ್ತವೆ.
ಇದರಿಂದಾಗಿ ನಾಗರೀಕರು ತಮ್ಮ ಸ್ವಂತ ಜಮೀನಿನಲ್ಲಿ ಯಾವುದೇ ರೀತಿಯ ಕ್ರಯ ಮತ್ತು ವಿಭಾಗ ಮಾಡಿಸಿಕೊಳ್ಳಲು ಅಗತ್ಯವಿರುವ ಸ್ಕೆಚ್ ಗಾಗಿ ಹಲವಾರು ತಿಂಗಳುಗಳು ಮತ್ತು ಕೆಲವೊಮ್ಮೆ ವರ್ಷದವರೆಗೆ ಕಾಯಬೇಕಾಗುತ್ತದೆ.
ಇದೆಲ್ಲ ಸಮಸ್ಯೆಗೆ ಪರಿಹಾರ ನೀಡಲು ನಾಗರಿಕರೇ ತಮ್ಮ ಜಮೀನಿಗೆ ಸ್ವಂತ ನಕ್ಷೆ ಮಾಡಿಕೊಳ್ಳಲು ಕಂದಾಯ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ. 11E ಸ್ಕೆಚ್, ತತ್ಕಾಲ ಪೋಡಿ ಇವುಗಳನ್ನು ಜನರು ಸ್ವಂತ ಜಮೀನಿಗೆ ತಾವೇ ಮಾಡಿಕೊಳ್ಳಲು ಅವಕಾಶ ನೀಡುತ್ತಿದ್ದೇವೆ. ಇದರಿಂದ ಸರ್ವೇ ವಿಳಂಬವಾಗಿ, ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿಯುತ್ತದೆ ಎಂದು ಅಶೋಕ್ ಹೇಳಿದರು.