ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಹೆಣ್ಣು ಭ್ರೂಣ ಪತ್ತೆ ಮಾಡುವ ಜಾಲವನ್ನು ಕಳೆದ ಆರೇಳು ತಿಂಗಳ ಹಿಂದೆ ಬೇಧಿಸಲಾಗಿತ್ತು. ಇದೀಗ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಹೆಣ್ಣು ಭ್ರೂಣ ಪತ್ತೆ ಮಾಡುವ ಜಾಲ ಪತ್ತೆಯಾಗಿದೆ. ಈ ಬಗ್ಗೆ ಮಂಡ್ಯ ಡಿಎಚ್ಓ ಡಾ.ಮೋಹನ್ ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿಂದ ಪ್ಲಾನ್ ಮಾಡಿದ್ದೆವು. ಭ್ರೂಣ ಪತ್ತೆ ಮಾಡಿಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಕಾರ್ಯಾಚರಣೆ ಮೂಲಕ ಭ್ರೂಣ ಪತ್ತೆ ಪ್ರಕರಣದ ಮೇಲೆ ದಾಳಿ ಮಾಡಿದ್ದೇವೆ. ನಿನ್ನೆ ರಾತ್ರಿ ಮಾಹಿತಿ ಸಿಕ್ಕ ಬೆನ್ನಲ್ಲೆ ಅಲರ್ಟ್ ಆಗಿದ್ದೆವು. ಬೆಳ್ಳೂರಿಗೆ ಬಳಿ ಬನ್ನಿ ಅಂತ ಮಾಹಿತಿ ನೀಡಿದ್ದರು.
ನಾವು ಹೋದಾಗ ನಮ್ಮ ಮೇಲೆ ಅಟ್ಯಾಕ್ ಮಾಡಿದರು. ಧನಂಜಯ ಎಂಬವವರು ಈ ಕೃತ್ಯ ನಡೆಸಿದ್ದಾರೆ. ಡೆಕಾಯ್ ಅಪರೇಷನ್ ಮೂಲಕ ಕಾರ್ಯಾಚರಣೆ ಮಾಡಲಾಗಿದೆ. ಕದಬಳ್ಳಿ ಬಳಿಯ ಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ಸ್ಕ್ಯಾನಿಂಗ್ ಮಾಡಲಾಗ್ತಿತ್ತು. ಅಭಿಷೇಕ್ ಎಂಬ ವ್ಯಕ್ತಿ ಸ್ಕ್ಯಾನಿಂಗ್ ಮಾಡಿದ್ದಾನೆ. ಅಭಿಷೇಕ್ ಬಯಪ್ಪನಹಳ್ಳಿ ಹಾಗೂ ಪಾಂಡವಪುರದ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂದಿದ್ದಾರೆ.
ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣದಲ್ಲಿ ಎಲ್ಲಾ ಕಡೆ ಅಭಿಷೇಕ್ ಹೆಸರು ಕೇಳಿ ಬರ್ತಿದೆ. ಅಭಿಷೇಕ್ ಸಿಕ್ಕರೆ ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಪತ್ತೆ, ಹತ್ಯೆ ಪ್ರಕರಣ ಅಂತ್ಯ ಆಗಲಿದೆ. ಮೂರನೇ ಹೆಣ್ಣು ಮಗು ಆದ ಕಾರಣ ಭ್ರೂಣ ಪತ್ತೆಗೆ ಬಂದಿದ್ದರು. ತೇಜ ಹಾಗು ಮನೋಹರ್ ಎಂಬ ರಾಮನಾಥಪುರ ಮೂಲದ ದಂಪತಿ ಅನ್ನೋ ಮಾಹಿತಿ ಲಭ್ಯವಾಗಿದೆ.
ನಾಗಮಣಿ ಎಂಬುವವರಿಂದ ಇವರ ಕಾಂಟ್ರ್ಯಾಕ್ಟ್ ಸಿಕ್ಕಿದ್ದು, ನಾವೇ ಒಬ್ಬರನ್ನ ಕಳಿಸಿ ಈ ಕಾರ್ಯಾಚರಣೆ ಮಾಡಿದ್ದೇವೆ. ದಾಳಿ ವೇಳೆ AB2 KIT ಮಾತ್ರೆಗಳು ಸಿಕ್ಕಿವೆ. ಯಾವ ಮೆಡಿಕಲ್ನಲ್ಲಿ ತೆಗೆದುಕೊಂಡರು ಅನ್ನೋದನ್ನ ತನಿಖೆ ಮಾಡಬೇಕಿದೆ. ಮನೋಹರ್, ಧನಂಜಯ, ನಾಗಮಣಿ ಎಂಬುವರನ್ನು ಅರೆಸ್ಟ್ ಮಾಡಲಾಗಿದೆ. ಅಭಿಷೇಕ್ ಪತ್ತೆಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಭ್ರೂಣ ಪತ್ತೆ, ಹತ್ಯೆ ಪ್ರಕರಣ ಕಂಡು ಬಂದರೆ ಮಾಹಿತಿ ನೀಡುವಂತೆ ಡಿಹೆಚ್ಒ ಮನವಿ ಮಾಡಿದ್ದಾರೆ.
ಕೃಷ್ಣಮಣಿ